ನ್ಯೂಜಿಲೆಂಡ್ ನಲ್ಲಿ ರಕ್ತದೋಕುಳಿ : ಮಹಿಳೆ ಸೇರಿ ನಾಲ್ವರು ವಶಕ್ಕೆ
ಕ್ರೈಸ್ಟ್ ಚರ್ಚ್, ಮಾರ್ಚ್ 15 : ಅಲ್ ನೂರ್ ಮಸೀದಿಯಲ್ಲಿ ಶುಕ್ರವಾರ ನಡೆಸಿದ ಮಾರಣಹೋಮಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ನ್ಯೂಜಿಲೆಂಡ್ ಪೊಲೀಸ್ ಕಮಿಷನರ್ ಮೈಕ್ ಬುಷ್ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಂತೆ 1.45ರ ಸುಮಾರಿಗೆ ಆಟೋಮ್ಯಾಟಿಕ್ ಮಷೀನ್ ಗನ್ ಹಿಡಿದಿದ್ದ, ಮಿಲಿಟರಿ ದಿರಿಸು ಧರಿಸಿದ್ದ ಓರ್ವ ವ್ಯಕ್ತಿ ಮಸೀದಿಯ ಹಿಂಬಾಗಿಲಿನಿಂದ ಬಂದು ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದಾನೆ. ಈ ಘಟನೆಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂದು ನಿಖರವಾಗಿ ತಿಳಿದುಬಂದಿಲ್ಲದಿದ್ದರೂ, ಕನಿಷ್ಠ ಇಪ್ಪತ್ತೈದು ಜನ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ.
ನ್ಯೂಜಿಲೆಂಡ್ ನಲ್ಲಿ ಕರಾಳ ಶುಕ್ರವಾರ : ಮಸೀದಿಯಲ್ಲಿ ರಕ್ತದೋಕುಳಿ
ಮಾಧ್ಯಮದೊಡನೆ ಮಾತನಾಡುತ್ತಿದ್ದ ಮೈಕ್ ಬುಷ್ ಅವರು, ಈ ಹತ್ಯೆಯ ಹಿಂದೆ ಕಾರಣವೇನಿರಬಹುದೆಂದು ತನಿಖೆ ನಡೆಸುತ್ತಿದ್ದೇವೆ. ಅಪಾಯದಿಂದ ಪಾರಾಗಿದ್ದೇವೆ ಎಂದು ಈಗಲೇ ಭಾವಿಸುವ ಅಗತ್ಯವಿಲ್ಲ ಎಂದು ಹೇಳಿದ್ದು, ಶಂಕಿತರಿಗೆ ಸೇರಿದ್ದ ಕಾರಿನಲ್ಲಿ ಸುಧಾರಿತ ಸ್ಫೋಟಕಗಳು, ಕೆಲವೊಂದು ಸಂದೇಶ ಬರೆದಿದ್ದ ಮಷೀನ್ ಗಳು ದೊರೆತಿವೆ. ಆ ಸ್ಫೋಟಕಗಳನ್ನೆಲ್ಲ ನಿಷ್ಕ್ರಿಯಗೊಳಿಸಲಾಗಿದೆ ಎಂದು ವಿವರ ನೀಡಿದ್ದಾರೆ.
ಒಂದು ಮಸೀದಿ ಅಲ್ ನೂರ್ ಎಂದು ಗುರುತಿಸಲಾಗಿದ್ದು, 30ರಿಂದ 40ರ ಆಸುಪಾಸಿನಲ್ಲಿರುವ ಬಿಳಿ ವ್ಯಕ್ತಿಯೊಬ್ಬ, ಮಿಲಿಟರಿ ದಿರಿಸು ಮತ್ತು ಹೆಲ್ಮೆಟ್ ಧರಿಸಿದ್ದ. ಮಸೀದಿ ಹೊಕ್ಕು ಶುಕ್ರವಾರದ ಪ್ರಾರ್ಥನೆಗೆ ಬಂದಿದ್ದ ಮುಸ್ಲಿಂ ಸಮುದಾಯದವರ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದಾನೆ. ಯಾರೂ ತಪ್ಪಿಸಿಕೊಳ್ಳಲಾರದಂತೆ ಕಂಡವರನ್ನೆಲ್ಲ ಹತ್ಯೆಗೈದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ ಓರ್ವ ವ್ಯಕ್ತಿಯನ್ನು ಅತೀ ಹತ್ತಿರದಿಂದಲೇ ಕೊಲೆ ಮಾಡಿದ್ದಾನೆ. ಒಂದು ಮಾಹಿತಿಯ ಪ್ರಕಾರ ಮಸೀದಿಯಲ್ಲಿ ಆ ಸಮಯದಲ್ಲಿ 300ಕ್ಕೂ ಹೆಚ್ಚು ಜನರಿದ್ದರು.
'1992ರ ಬಳಿಕ ಮೊದಲ ಶೂಟೌಟ್ ನ್ಯೂಜಿಲೆಂಡ್ಗೆ ಇಂದು ಕರಾಳದಿನ'
ಈ ಘಟನೆಯ ನಂತರ ದೇಶದಲ್ಲಿರುವ ಎಲ್ಲ ಮಸೀದಿಗಳನ್ನು ಮುಚ್ಚಬೇಕು, ಯಾರೂ ಮಸೀದಿಗೆ ಪ್ರಾರ್ಥನೆಗೆಂದು ಹೋಗಬಾರದು, ಕ್ರೈಸ್ಟ್ ಚರ್ಚ್ ನಲ್ಲಿ ಯಾರೂ ಸದ್ಯಕ್ಕೆ ರಸ್ತೆಯಲ್ಲಿ ಅಡ್ಡಾಡಬಾರದು, ಮನೆಯಲ್ಲಿಯೇ ಇರಬೇಕು, ಯಾರಾದರೂ ಶಂಕಿತ ಕಂಡುಬಂದರೆ ಕೂಡಲೆ ಮಾಹಿತಿ ನೀಡಬೇಕು ಎಂದು ಪೊಲೀಸರು ಆದೇಶಿಸಿದ್ದಾರೆ.
ನ್ಯೂಜಿಲೆಂಡ್ ಜೊತೆ ಟೆಸ್ಟ್ ಕ್ರಿಕೆಟ್ ಆಡಲು ಬಂದಿದ್ದ ಬಾಂಗ್ಲಾದೇಶದ ಆಟಗಾರರು ಅದೇ ಮಸೀದಿಯಲ್ಲಿದ್ದರು. ಅದೃಷ್ಟವಶಾತ್ ಅವರು ಕೂದಲೆಳೆಯಲ್ಲಿ ಈ ದುರ್ಘಟನೆಯಿಂದ ಪಾರಾಗಿದ್ದಾರೆ. ಈ ಘಟನೆಯ ನಂತರ ಎರಡೂ ದೇಶಗಳ ನಡುವೆ ಮಾರ್ಚ್ 16ರಿಂದ ಆರಂಭವಾಗಬೇಕಿದ್ದ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ನ್ಯೂಜಿಲ್ಯಾಂಡ್ನ ಮಸೀದಿಯಲ್ಲಿ ಶೂಟೌಟ್, 6ಕ್ಕೂ ಹೆಚ್ಚು ಮಂದಿ ಹತ್ಯೆ
ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ನಡೆದ ಹತ್ಯಾಕಾಂಡದಿಂದ ದಯಾಮಯನಾದ ಅಲ್ಲಾಹು ನಮ್ಮನ್ನೆಲ್ಲ ಕಾಪಾಡಿದ್ದಾನೆ. ನಾವು ತುಂಬಾ ಅದೃಷ್ಟವಂತರು. ಇಂಥ ಘಟನೆ ಎಂದೂ ನಡೆಯಬಾರದು, ಇಂಥದನ್ನು ಎಂದೂ ನೋಡಲು ಇಚ್ಛಿಸುವುದಿಲ್ಲ. ನಮಗಾಗಿ ಪ್ರಾರ್ಥನೆ ಸಲ್ಲಿಸಿ ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಮುಷ್ಫಿಕರ್ ರಹೀಮ್ ಅವರು ಟ್ವೀಟ್ ಮಾಡಿದ್ದಾರೆ.