ಧರ್ಮನಿಂದನೆ: ಪಾಕಿಸ್ತಾನ ಕೋರ್ಟ್ನಲ್ಲಿ ಗುಂಡಿಕ್ಕಿ ಆರೋಪಿ ಹತ್ಯೆ
ಇಸ್ಲಾಮಾಬಾದ್, ಜುಲೈ 29: ಅರಾಜಕತೆಯ ಸಂಘರ್ಷ ಮತ್ತು ಭಯೋತ್ಪಾದಕರ ಕೃತ್ಯಗಳಿಂದ ಬೆಚ್ಚಿರುವ ಪಾಕಿಸ್ತಾನದಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. ಧರ್ಮನಿಂದನೆ ಆರೋಪ ಹೊತ್ತಿದ್ದ ವ್ಯಕ್ತಿ ಮೇಲೆ ಕೋರ್ಟ್ನಲ್ಲೇ ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ತಾಹೀರ್ ಅಹ್ಮದ್ ನಸೀಮ್ ಎಂದು ಗುರುತಿಸಲಾಗಿದೆ.
ಈತ ತಾನು ಪ್ರವಾದಿ ಎಂದು ಹೇಳಿಕೊಂಡಿದ್ದ. ಈ ಕಾರಣಕ್ಕೆ ಧರ್ಮನಿಂದನೆ ಆರೋಪ ಹೊರಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪೇಶಾವರ ಕೋರ್ಟ್ಗೆ ಇಂದು ವಿಚಾರಣೆಗಾಗಿ ಕರೆತರಲಾಗಿತ್ತು. ಆದರೆ ವಿಚಾರಣೆಗೆ ಕರೆತಂದಾಗಲೇ ನಸೀಮ್ನ ಹತ್ಯೆ ನಡೆದಿದೆ.
ಲಾಹೋರ್ನಲ್ಲಿ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತನೆಗೆ ಯತ್ನ: ಭಾರತ ಖಂಡನೆ
ಬಂದೂಕು ಕೈಯಲ್ಲಿ ಹಿಡಿದು ಕೋರ್ಟ್ ಒಳಗೆ ನುಗ್ಗಿದ ಅನಾಮಿಕ ನಸೀಮ್ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. 6 ಸುತ್ತು ಗುಂಡು ಹಾರಿಸಿ ನಸೀಮ್ನನ್ನು ಹತ್ಯೆ ಮಾಡಲಾಗಿದೆ ಅಂತಾ ಪೇಶಾವರ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಗುಂಡು ಹಾರಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆಗೀಡಾದ ನಸೀಮ್ 2018ರಿಂದಲೂ ಪೊಲೀಸರ ಕಸ್ಟಡಿಯಲ್ಲಿದ್ದ. ಇನ್ನು ಗುಂಡಿನ ಸದ್ದು ಕೇಳುತ್ತಿದ್ದಂತೆ ಪೇಶಾವರದ ಕೋರ್ಟ್ ಆವರಣ ಬೆಚ್ಚಿಬಿದ್ದಿತ್ತು. ಜೀವ ಉಳಿಸಿಕೊಳ್ಳಲು ಜನ ತಕ್ಷಣ ಕಾಲಿಗೆ ಬುದ್ಧಿ ಹೇಳಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ವಿವಾದಾತ್ಮಕ ಕಾನೂನಿಗೆ ಹತ್ತಾರು ಮಂದಿ ಬಲಿ
1980-90 ರ ದಶಕದಲ್ಲಿ ಅಧಿಕಾರದಲ್ಲಿದ್ದ ಮಿಲಿಟರಿ ಸರ್ಕಾರ ಪಾಕ್ನಲ್ಲಿ ಕಟ್ಟುನಿಟ್ಟಿನ ಧರ್ಮನಿಂದನೆ ಕಾನೂನು ಜಾರಿಗೆ ತಂದಿತ್ತು. ಧರ್ಮನಿಂದನೆ ಮಾಡಿದವರ ವಿರುದ್ಧ ಮರಣ ದಂಡನೆ ವಿಧಿಸಬಹುದಾದ ಹಕ್ಕು ಈ ಕಾನೂನಿಗೆ ಇದೆ. ಮಿಲಿಟರಿ ಆಡಳಿತಗಾರ ಜಿಯಾ-ಉಲ್-ಹಕ್ ಧರ್ಮನಿಂದನೆ ಕಾನೂನನ್ನು ಪಾಕಿಸ್ತಾನಕ್ಕೆ ಪರಿಚಯಿಸಿದ್ದ.
ಈ ಕಾನೂನಿನ ಅಡಿಯಲ್ಲಿ ಈವರೆಗೂ ಗಲ್ಲಿಗೇರಿಸಿದ ಉದಾಹರಣೆ ಇಲ್ಲ. ಆದರೆ ಆರೋಪಿಗಳು, ವಿಚಾರಣೆ ನಡೆಸಿದ್ದ ಜಡ್ಜ್ಗಳು ಮತ್ತು ವಕೀಲರನ್ನೇ ಹತ್ಯೆ ಮಾಡಲಾಗಿದೆ. ಇನ್ನು ವರದಿಯೊಂದರ ಪ್ರಕಾರ 1990ರಿಂದ ಈವರೆಗೂ 77ಕ್ಕೂ ಹೆಚ್ಚು ಪಾಕಿಸ್ತಾನಿಯರು ಈ ವಿವಾದಾತ್ಮಕ ಕಾನೂನಿನ ಕಾರಣಕ್ಕೆ ಜೀವ ಕಳೆದುಕೊಂಡಿದ್ದಾರೆ. ಈಗ ಹತ್ಯೆಯಾಗಿರುವ ನಸೀಮ್ ವಿರುದ್ಧ ಪಾಕಿಸ್ತಾನದ ದಂಡ ಸಂಹಿತೆಯ 295-ಎ, 295-ಬಿ ಮತ್ತು 295-ಸಿ ಸೆಕ್ಷನ್ಗಳ ಅಡಿ ಕೇಸ್ ದಾಖಲಾಗಿತ್ತು.
ಧರ್ಮದ ಹೆಸರಲ್ಲಿ ನಿರಂತರ ಹತ್ಯೆಗಳು
ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ. ಕೆಲವು ಭಾಗಗಳಲ್ಲಿ ಉಗ್ರರ ಹಾವಳಿ ವಿಪರೀತವಾಗಿದ್ದರೆ, ಮತ್ತೆ ಕೆಲ ಪ್ರದೇಶಗಳಲ್ಲಿ ಧರ್ಮಾಂಧರ ಹಾವಳಿ ಹೆಚ್ಚಾಗಿದೆ. ಈ ಕಾರಣಕ್ಕೆ ಪಾಕ್ನಲ್ಲಿ ಬೇರೆ ಧರ್ಮಿದವರು ಬಿಡಿ, ಮುಸ್ಲಿಂ ಧರ್ಮಿಯರು ಕೂಡ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಹಾಡುಗಾರರು, ಶಿಕ್ಷಕರನ್ನು ಧರ್ಮದ ನೆಪವೊಡ್ಡಿ ಹತ್ಯೆಗೈದ ಉದಾಹರಣೆಗಳಿವೆ. ಹೀಗಾಗಿ ಮುಕ್ತವಾಗಿ ಮಾತನಾಡಲು ಕೂಡ ಪಾಕಿಸ್ತಾನಿಯರು ಭಯಪಡುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ.