ಪ್ರಧಾನಿ ಮೋದಿ ಹಾಗೂ ಕಮಲಾ ಹ್ಯಾರಿಸ್ ಸಭೆಯಲ್ಲಿ 'ಸಹಜ ಪಾಲುದಾರರ' ಮಾತು
ನವದೆಹಲಿ, ಸೆಪ್ಟೆಂಬರ್ 24: ಭಾರತದ ಮತ್ತು ಅಮೆರಿಕಾ ರಾಷ್ಟ್ರಗಳು ಸಹಜ ಪಾಲುದಾರರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆದಿದ್ದಾರೆ. ಯುಎಸ್ ಶ್ವೇತ ಭವನದಲ್ಲಿ ಮೊದಲ ವ್ಯಕ್ತಿಗತ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚರ್ಚೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದು ಹಾಗೂ ಪರಸ್ಪರ ಮತ್ತು ಜಾಗತಿಕ ಹಿತಾಸಕ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
"ಭಾರತ ಮತ್ತು ಅಮೆರಿಕಾ ರಾಷ್ಟ್ರಗಳು ಸಹಜ ಪಾಲುದಾರರಾಗಿವೆ. ನಮ್ಮಲ್ಲಿ ಒಂದೇ ರೀತಿಯ ಮೌಲ್ಯಗಳು, ಭೌಗೋಳಿಕ ಹಾಗೂ ರಾಜಕೀಯ ಹಿತಾಸಕ್ತಿಗಳಿವೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೈರಲ್ ಫೋಟೋ; ವಿಮಾನದಲ್ಲೂ ಮೋದಿ ಕೆಲಸದಲ್ಲಿ ಬ್ಯುಸಿ!
"ಭಾರತ ಮತ್ತು ಯುಎಸ್ ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳೆಂದು ತಿಳಿಸಿದ ಪ್ರಧಾನಿ ಮೋದಿ, ಎರಡು ದೇಶಗಳು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಮತ್ತು ಅವುಗಳ ಸಹಕಾರವು ಕ್ರಮೇಣ ಹೆಚ್ಚುತ್ತಿದೆ," ಎಂದರು.
ಜೂನ್ ತಿಂಗಳಿನಲ್ಲಿ ದೂರವಾಣಿ ಕರೆ:
ಶುಕ್ರವಾರ ಪ್ರಧಾನಿ ಮೋದಿ ಹಾಗೂ ಕಮಲಾ ಹ್ಯಾರಿಸ್ ನಡುವಿನ ಮೊದಲ ಭೇಟಿಯಾಗಿತ್ತು. ಭಾರತದ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಜೂನ್ ತಿಂಗಳಿನಲ್ಲಿ ಉಭಯ ನಾಯಕರು ದೂರವಾಣಿ ಮೂವಕ ಮಾತನಾಡಿದ್ದರು.
ಕಮಲಾ ಹ್ಯಾರಿಸ್ ರನ್ನು ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ:
"ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ನಿಮ್ಮ ಆಳ್ವಿಕೆಯಲ್ಲಿ ನಮ್ಮ ನಡುವಿನ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ಎತ್ತರಕ್ಕೆ ತಲುಪಲಿವೆ ಅಂತಾ ನನಗೆ ಭರವಸೆಯಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಮಲಾ ಹ್ಯಾರಿಸ್ ಅವರಿಗೆ ಹೇಳಿದ್ದಾರೆ. ಕಮಲಾ ಹ್ಯಾರಿಸ್ ಜಗತ್ತಿನ ಹಲವು ಜನರ ಪಾಲಿನ ಸ್ಪೂರ್ತಿಯ ಮೂಲ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಭಾರತಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಕಮಲಾ ಹ್ಯಾರಿಸ್, ಯುನೈಟೆಡ್ ಸ್ಟೇಟ್ಸ್ನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ.
ಬೈಡನ್, ಹ್ಯಾರಿಸ್ ಬಗ್ಗೆ ಪ್ರಧಾನಿ ಹೊಗಳಿಕೆ:
"ನಮ್ಮ ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಕಠಿಣ ಸಂದರ್ಭದಲ್ಲಿ ಜೋ ಬೈಡನ್ ಹಾಗೂ ನೀವು ಅಧಿಕಾರ ಸ್ವೀಕರಿಸಿದ್ದೀರಿ. ಅಲ್ಪಾವಧಿಯಲ್ಲಿಯೇ ಕೊವಿಡ್-19, ಹವಾಮಾನ ಬದಲಾವಣೆ ಅಥವಾ ಕ್ವಾಡ್ ವಿಷಯದಲ್ಲಿ ಅನೇಕ ಸಾಧನೆಗಳನ್ನು ಮಾಡಿ ತೋರಿಸಿದ್ದೀರಿ," ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಗ್ಗಟ್ಟಿನ ಮಾತು ಜ್ಞಾಪಿಸಿಕೊಂಡ ಪ್ರಧಾನಿ ಮೋದಿ:
"ನೀವು ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಲು ನಮಗೆ ಅವಕಾಶ ಸಿಕ್ಕಿತು. ಭಾರತವು ಕೋವಿಡ್ -19 ಸೋಂಕಿನ ಕಠಿಣ ಅಲೆಯೊಂದಿಗೆ ಹೋರಾಡುತ್ತಿರುವ ಸಂದರ್ಭದಲ್ಲಿ ನಮ್ಮ ಒಂದು ಸಂವಾದ ನಡೆಯಿತು. ಆ ಸಮಯದಲ್ಲಿ ನೀವು ಆಡಿರುವ ಒಗ್ಗಟ್ಟಿನ ಮಾತುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ" ಎಂದು ಮೋದಿ ಹೇಳಿದರು.
40 ಲಕ್ಷ ಜನರೇ ಸ್ನೇಹ ಸೇತುವೆ:
ಭಾರತವು ಕೊವಿಡ್-19 ಸೋಂಕಿನ ಕಠಿಣ ಅಲೆಗಳ ವಿರುದ್ಧ ಹೋರಾಡುತ್ತಿದ್ದ ವೇಳೆಯಲ್ಲಿ ಯುಎಸ್ ಸರ್ಕಾರ, ಯುಎಸ್ ಮೂಲದ ಕಂಪನಿಗಳು ಮತ್ತು ಭಾರತೀಯ ವಲಸಿಗರು ಬಹಳ ಸಹಾಯಕವಾಗಿದ್ದಾರೆ ಎಂದು ಮೋದಿ ಹೇಳಿದರು. ಭಾರತೀಯ ಮೂಲದ ನಾಲ್ಕು ಮಿಲಿಯನ್ ಜನರು ಎರಡು ದೇಶಗಳ ನಡುವಿನ ಸ್ನೇಹದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
"ಭಾರತ ಬಹುಮುಖ್ಯ ಪಾಲುದಾರ" ಎಂದ ಹ್ಯಾರಿಸ್:
ಯುನೈಟೆಡ್ ಸ್ಟೇಟ್ಸ್ ಪಾಲಿಗೆ ಭಾರತವು ಬಹುಮುಖ್ಯ ಪಾಲುದಾರ ಎಂದು ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಜೊತೆಗೆ ಶೀಘ್ರದಲ್ಲೇ ಕೊರೊನಾವೈರಸ್ ಲಸಿಕೆಗಳ ರಫ್ತು ಪುನರಾರಂಭಿಸುವ ಕುರಿತಾದ ನವದೆಹಲಿಯ ಘೋಷಣೆಯನ್ನು ಸ್ವಾಗತಿಸಿದ್ದಾರೆ. ಸಾಂಕ್ರಾಮಿಕ ರೋಗದ ಎರಡನೇ ಅಲೆ ಹೆಚ್ಚಾದ ಹಿನ್ನೆಲೆ 2021ರ ಏಪ್ರಿಲ್ನಲ್ಲಿ ಭಾರತವು ಕೋವಿಡ್ -19 ಲಸಿಕೆಗಳ ರಫ್ತು ನಿಲ್ಲಿಸಿತು. ಸೋಮವಾರ ಭಾರತವು ಹೆಚ್ಚುವರಿ ಕೋವಿಡ್ -19 ಲಸಿಕೆಗಳ ರಫ್ತನ್ನು 2021 ರ ನಾಲ್ಕನೇ ತ್ರೈಮಾಸಿಕದಲ್ಲಿ ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ಪುನರಾರಂಭಿಸುವುದಾಗಿ ಮತ್ತು ಕೋವಾಕ್ಸ್ ಜಾಗತಿಕ ಪೂಲ್ಗೆ ತನ್ನ ಬದ್ಧತೆಯನ್ನು ಪೂರೈಸಲು ಹೇಳಿದೆ.