ಭೂತಾನ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಆರಂಭಿಸಲು ಆಹ್ವಾನ
ಥಿಂಪು, ಡಿಸೆಂಬರ್ 26: ಭೂತಾನ್ ದೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಆರಂಭಿಸಿ. ಕರ್ನಾಟಕದಿಂದ ಬರುವ ಪ್ರವಾಸಿಗರಿಗೆ ಹಾಗೂ ಉದ್ಯೋಗಕ್ಕಾಗಿ ಇಲ್ಲಿಗೆ ಬರುವವರಿಗೆ ಅದರಿಂದ ಅನುಕೂಲವಾಗಲಿ. ಸಹಕಾರ-ಸಂಪರ್ಕದ ಕೊಂಡಿಯಾಗಲಿ ಎಮ್ದು ಭೂತಾನ್ ನ ಖ್ಯಾತ ಛಾಯಾಗ್ರಾಹಕ ಮತ್ತು ರೋಟರಿ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಯಶಿ ದೋರ್ಜಿ ಹೇಳಿದ್ದಾರೆ.
ಭೂತಾನ್ ದೇಶದ ರಾಜಧಾನಿ ಥಿಂಪುವಿನಲ್ಲಿ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದ ನಂತರ ಅವರು ಮಾತನಾಡಿ, ಭೂತಾನ್ ದೇಶ ಆಧುನಿಕತೆಯತ್ತ ಮುಖ ಮಾಡಿರುವುದೇ ಇತ್ತೀಚೆಗೆ. ಆದರೂ ಮೂಲ ಸ ಸಂಸ್ಕೃತಿ, ಆಚಾರ, ಸಂಪ್ರದಾಯಗಳನ್ನು ಉಳಿಸಿಕೊಂಡಿದೆ ಎಂದರು.[ಭೂತಾನ್ ಮಕ್ಕಳ ಮುಗ್ಧತೆ, ಪ್ರೀತಿ ಮತ್ತು ಬಿಡಿ ಚಿತ್ರಗಳು]
ಪ್ರಕೃತಿ ಸೌಂದರ್ಯ, ಮಾಲಿನ್ಯರಹಿತ ಪರಿಸರ ಮತ್ತು ಸಂತುಷ್ಟ ಜನರಿರುವ ದೇಶ ಭೂತಾನ್ ಎಂದು ಜಗತ್ತಿನಾದ್ಯಂತ ಇರುವ ಜನರು ಇಲ್ಲಿಗೆ ಬರುತ್ತಾರೆ. ಕನ್ನಡಿಗರೂ ಬಹಳಷ್ಟು ಮಂದಿ ಬಂದಿದ್ದಾರೆ, ಬರುತ್ತಾರೆ. ಭಾರತದ ಐಟಿ ಉದ್ಯಮ ಭೂತಾನ್ ನಲ್ಲೂ ತೊಡಗಿಸಿಕೊಂಡಿದೆ.. ಅಲ್ಲಿನ ಉದ್ಯೋಗಿಗಳು ಅದರಲ್ಲೂ ಕನ್ನಡಿಗ ಉದ್ಯೋಗಿಗಳು ಇಲ್ಲಿಗೆ ಬಂದಿದ್ದಾರೆ.
ಅದ್ದರಿಂದ ಕನ್ನಡ ಭಾಷೆ, ಸಾಹಿತ್ಯ-ಸಂಸ್ಕೃತಿಯನ್ನು ನಮ್ಮ ದೇಶದ ಜನರಿಗೆ ಪರಿಚಯಿಸಿ. ಕನ್ನಡ ನಾಡಿನವರಿಗೆ ಅನುಕೂಲವಾಗುವಂತೆ ಕನ್ನಡ ಸಾಹಿತ್ಯ ಪರಿಷತ್ ಘಟಕ ಶುರು ಮಾಡಿ ಎಂದು ಸಲಹೆ ಮಾಡಿದರು. ಇನ್ನು ಶಿಡ್ಲಘಟ್ಟದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಭೂತಾನ್ ನ ಬರ್ಡ್ ಮ್ಯಾನ್ ಎಂದೇ ಖ್ಯಾತರಾದ ಯಶಿ ದೋರ್ಜಿ ಅವರನ್ನು ಸನ್ಮಾನಿಸಲಾಯಿತು.[ರಾಜ್ಯೋತ್ಸವಕ್ಕೆ 'ಸ್ವಲ್ಪ ಕನ್ನಡ ಬರುತ್ತೆ' ವಾಟ್ಸ್ ಅಪ್ ಗ್ರೂಪ್]
ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಪತ್ರಿಕಾ ಪ್ರತಿನಿಧಿಗಳಾದ ಎ.ಶಶಿಕುಮಾರ್, ರಮೇಶ್, ಜಂಗಮಕೋಟೆ ಹೋಬಳಿ ಸಂಚಾಲಕ ಜಗದೀಶ್ ಬಾಬು, ಕಸಬಾ ಹೋಬಳಿ ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ತಾಲ್ಲೂಕು ಮಾಜಿ ಅಧ್ಯಕ್ಷ ರೂಪಸಿ ರಮೇಶ್, ವಿಜಯಪುರ ಕಸಾಪ ಘಟಕದ ಉಪಾಧ್ಯಕ್ಷ ಮುನಿನಾರಾಯಣ, ಸದಸ್ಯರಾದ ಮಲ್ಲಿಕಾರ್ಜುನ, ಮಂಜುನಾಥ, ಛಾಯಾ ರಮೇಶ್, ಮುನೇಗೌಡ, ರಾಜೇಶ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.