ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಜಗದಲ್ಲಿ ಇಂಥವ್ರೂ ಇರ್ತಾರೆ?
ಕುವೈತ್, ಜು. 12 : "ಅಮ್ಮಾ ತಾಯೇ, ಕೌಳಾ ಹಾಕಿ ತಾಯೇ, ನಾಲ್ಕು ದಿನದಿಂದ ಏನೂ ತಿಂದಲ್ಲ ತಾಯೇ" ಅಂತ ದಯನೀಯವಾಗಿ ಗೋಗರಿಯದೆ ಪಿಸುಮಾತಿನಲ್ಲಿ ಆತ ಭಿಕ್ಷೆ ಬೇಡುತ್ತಿದ್ದ. ಭಾರತದಲ್ಲಾಗಿದ್ದರೆ ಕರುಣಾಮಯಿಗಳಾಗಿದ್ದವರು ಒಂದೆರಡು ರುಪಾಯಿ ನೀಡುತ್ತಿದ್ದರೇನೋ... ಆದರೆ, ಕುವೈತ್ ನಲ್ಲಿ ಪೊಲೀಸರು ಆತನ ಕೈಗೆ ಕೋಳ ತೊಡಿಸಿದ್ದರು.
ಏಕೆಂದರೆ, ಕುವೈತ್ ನಲ್ಲಿ ಭಿಕ್ಷಾಟನೆ ನಿಷಿದ್ಧ. ಬಹರೇನ್, ಒಮಾನ್, ಸೌದಿ ಅರೇಬಿಯಾ, ಯುಎಇನಲ್ಲಿ ಭಿಕ್ಷೆ ಬೇಡುವುದು ಕಾನೂನು ಬಾಹಿರವಾಗಿರುವುದನ್ನು ತಿಳಿದವರಿಗೆ ಇದರಲ್ಲಿ ವಿಶೇಷವೇನೂ ಕಾಣಿಸುವುದಿಲ್ಲ, ಇದು ಸುದ್ದಿಯೂ ಅಲ್ಲ. ಆದರೆ, ಮಸೀದಿಯೆದಿರು ಕೈಯೊಡ್ಡಿ ನಿಂತಿದ್ದವನ ಕೈಗೆ ಕೋಳ ಹಾಕಿ ಜೈಲಿಗಟ್ಟಿದ ಪೊಲೀಸರಿಗೆ ದಂಗುಬಡಿಯುವಂಥ ಸಂಗತಿ ಹೊರಬಿದ್ದಿತ್ತು.
ಸುದ್ದಿ ಏನಪ್ಪ ಅಂದ್ರೆ, ತನಗೆ ಇರಲು ಮನೆಯಿಲ್ಲ ಅಂತ ಚಿಕ್ಕಾಸಿಗೆ ಕೈಯೊಡ್ಡುತ್ತಿದ್ದ ಆ ವ್ಯಕ್ತಿಯ ಬ್ಯಾಂಕಿನಲ್ಲಿದ್ದುದು 5 ಲಕ್ಷ ಕುವೈತಿ ದಿನಾರ್. ಅಂದರೆ 10 ಕೋಟಿ ರುಪಾಯಿಗಳು! ಎಲಾ ಇವ್ನ? ಇವನನ್ನು ಭಿಕ್ಷೆ ಬೇಡುತ್ತಿರುವ ಬಡವ ಅಂತೀರಾ, ಶ್ರೀಮಂತ ಭಡವ ಅಂತೀರಾ? ಅಲ್ ಅಹ್ಮದಿ ಸ್ಟೇಷನ್ ಪೊಲೀಸರು ಈ ವಿದೇಶಿಯನ ವಿರುದ್ಧ ಕೇಸು ಜಡಿದು ಜೈಲಿಗಟ್ಟಿದ್ದಾರೆ. [ಭಾರತದ ಶ್ರೀಮಂತ ಭಿಕ್ಷುಕರ ಬಳಿ ಏನೇನಿದೆ?]
ಗಲ್ಫ್ ಕೋಆಪರೇಷನ್ ಕೌನ್ಸಿಲ್ ಸದಸ್ಯ ರಾಷ್ಟ್ರಗಳಲ್ಲಿ ಭಿಕ್ಷಾಟನೆ ಮಾಡುವಂತಿಲ್ಲ. ಅದರಲ್ಲೂ ರಂಜಾನ್ ತಿಂಗಳಲ್ಲಿ ಸ್ಥಳೀಯರಾಗಲಿ, ವಿದೇಶಿಯರಾಗಲಿ ಭಿಕ್ಷೆ ಬೇಡುವಂತೆಯೇ ಇಲ್ಲ. ಅಲ್ಲಿನ ಶ್ರೀಮಂತರು ತಾವಾಗಿಯೇ ದೀನರಿಗೆ ಸಾಕಷ್ಟು ದಾನ ಮಾಡುತ್ತಿರುತ್ತಾರೆ. ಹಣಕ್ಕಾಗಿ ಭಿಕ್ಷೆ ಬೇಡುವುದನ್ನು ಈ ಯಾವ ರಾಷ್ಟ್ರವೂ ಸಹಿಸುವುದಿಲ್ಲ.
ಹೀಗಾಗಿ ಭಿಕ್ಷೆ ಬೇಡಿಬೇಡಿಯೇ ಸಾಕಷ್ಟು ಜನರು ಶ್ರೀಮಂತರಾಗಿದ್ದಾರೆ ಗಲ್ಫ್ ರಾಷ್ಟ್ರಗಳಲ್ಲಿ. ಭಿಕ್ಷೆ ಕೇಳಿ ಜನರಿಗೆ ಹಿಂಸೆ ನೀಡುತ್ತಿದ್ದ ಏಷ್ಯನ್ನರು ಸೇರಿದಂತೆ 22 ಜನರನ್ನು ಏಪ್ರಿಲ್ ನಲ್ಲಿ ಪೊಲೀಸರು ಬಂಧಿಸಿದ್ದರು. ಮತ್ತೊಂದು ಸಂಗತಿಯೆಂದರೆ, ಭಿಕ್ಷೆ ಬೇಡುವವರಲ್ಲಿ ಶೇ.85ರಷ್ಟು ಜನರು ಏಷ್ಯನ್ನರು! [ಹಂಗಿನ ಅರಮನೆಗಿಂತ ಕಾರ್ಪೊರೇಷನ್ ತೊಟ್ಟಿಯೇ ಲೇಸು!]