ಕಾಬೂಲ್ನಲ್ಲಿ ಭಾರತ ಮೂಲದ ಅಫ್ಘಾನ್ ವ್ಯಕ್ತಿಯ ಅಪಹರಣ
ಕಾಬೂಲ್, ಸೆಪ್ಟೆಂಬರ್ 15: ಸುಮಾರು 50 ವರ್ಷ ಪ್ರಾಯದ ಭಾರತ ಮೂಲದ ಅಫ್ಘಾನ್ ವ್ಯಕ್ತಿಯನ್ನು ಕಾಬೂಲ್ನ ಕರ್ತೆ ಪಾರ್ವನ್ ಪ್ರದೇಶದಲ್ಲಿ ಬಂದೂಕು ತೋರಿಸಿ ಬೆದರಿಸಿ ಅಪಹರಣ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಕಾಳಿದಳದ ನಾಯಕ ಮಾಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದಾರೆ.
ಅಕಾಳಿದಳದ ನಾಯಕ ಮಾಜಿಂದರ್ ಸಿಂಗ್ ಸಿರ್ಸಾ ದೆಹಲಿಯ ಸಿಖ್ ಗುರುದ್ವಾರ ನಿರ್ವಹಣೆ ಸಮಿತಿಯ ಅಧ್ಯಕ್ಷರೂ ಕೂಡಾ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಾಜಿಂದರ್ ಸಿಂಗ್ ಸಿರ್ಸಾ, "ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಹಿಂದೂ ಸಿಖ್ ಕುಟುಂಬದ ಜೊತೆ ನಾನು ಮಾತುಕತೆ ನಡೆಸಿದ್ದೇನೆ. ಕಾಬೂಲ್ನಲ್ಲಿ ಅಪಹರಣಕ್ಕೆ ಒಳಗಾದ ವ್ಯಕ್ತಿಯ ಹೆಸರು ಬನ್ಸುರಿ ಲಾಲ್ ಎಂದು ತಿಳಿದು ಬಂದಿದೆ. ಆತ ಸ್ಥಳೀಯ ವ್ಯಾಪಾರಿ ಆಗಿದ್ದ. ಕುಟುಂಬವು ತಮ್ಮ ಸುರಕ್ಷತೆಯ ಬಗ್ಗೆ ತೀವ್ರ ಕಾಳಜಿ ವ್ಯಕ್ತ ಪಡಿಸಿದೆ," ಎಂದು ತಿಳಿಸಿದ್ದಾರೆ.
'ಅಫ್ಘಾನ್ ಸ್ಥಿತಿ ದುರ್ಬಲ, ಸರ್ಕಾರದಲ್ಲಿ ಸರ್ವರಿಗೂ ಪ್ರಾತಿನಿಧ್ಯ ಅಗತ್ಯ': ಭಾರತ
"ಸುಮಾರು 50 ವರ್ಷ ಪ್ರಾಯದ ಬನ್ಸುರಿ ಲಾಲ್ ಎಂಬ ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಕಾಬೂಲ್ನಲ್ಲಿ ಕಳೆದ ರಾತ್ರಿ ಅಪಹರಣ ಮಾಡಲಾಗಿದೆ. ಬನ್ಸುರಿ ಲಾಲ್ ಗೋದಾಮಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಪಹರಣ ಮಾಡಲಾಗಿದೆ. ಬಂದೂಕನ್ನು ಹಿಡಿದು ಬೆದರಿಸಿದ ಐದು ಮಂದಿ ಬನ್ಸುರಿ ಲಾಲ್ ಅನ್ನು ಕಾರಿಗೆ ಬಲವಂತವಾಗಿ ತಳ್ಳಿದ್ದಾರೆ. ಆತನ ಸಹೋದರ ಹಾಗೂ ಕುಟುಂಬದ ಇತರ ಮಂದಿಗಳು, ಹಿಂದೂ ಸಮುದಾಯದವರು ಸಹಾಯಕ್ಕಾಗಿ ಯಾಚಿಸಿದರು, ನಾನು ಸಹಾಯಕ್ಕಾಗಿ ಸರ್ಕಾರದ ಬಳಿ ಮನವಿ ಮಾಡುತ್ತಿದ್ದೇನೆ," ಎಂದು ಅಕಾಳಿದಳದ ನಾಯಕ ಮಾಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಅಕಾಳಿದಳದ ನಾಯಕ ಮಾಜಿಂದರ್ ಸಿಂಗ್ ಸಿರ್ಸಾ ತನ್ನ ಟ್ವೀಟ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು "ನಮಗೆ ಈ ಬಗ್ಗೆ ಮಾಹಿತಿ ಲಭಿಸಿದೆ, ನಾವು ತನಿಖೆಯನ್ನು ನಡೆಸುತ್ತಿದ್ದೇವೆ," ಎಂದು ತಿಳಿಸಿದೆ.
ತಾಲಿಬಾನ್ ಸರ್ಕಾರವಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಈ ಹಿಂದೂ ವ್ಯಕ್ತಿಯ ಅಪಹರಣ ನಡೆದಿರುವ ಬಗ್ಗೆ ಟ್ವೀಟ್ನಲ್ಲಿ ಪುನೀತ್ ಸಿಂಗ್ ಚಂದೂಕ್ ಹೇಳಿದ್ದಾರೆ. ಇದು ಪರಿಶೀಲಿಸದ ಟ್ವೀಟರ್ ಖಾತೆಯಾಗಿದ್ದು, ಈ ವ್ಯಕ್ತಿ ತನ್ನನ್ನು ತಾನು ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷರು ಎಂದು ಹೇಳಿಕೊಂಡಿದ್ದಾರೆ. ಇನ್ನು ಈ ಟ್ವೀಟ್, "ಬನ್ಸುರಿ ಲಾಲ್ ಭಾರತದ ಪ್ರಜೆ ಕಾಬೂಲ್ನಲ್ಲಿ ಅಪಹರಣಕ್ಕೆ ಒಳಗಾಗಿದ್ದಾರೆ, " ಎಂದು ಹೇಳಿದೆ.
ಭಾರತದ ಮೇಲೆ ದಾಳಿ ನಡೆಸಲು ಜೈಶ್ ಉಗ್ರರ ಸಂಚು: ವರದಿ
ಇನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾತ್ರವಲ್ಲದೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ರನ್ನು ಕೂಡಾ ಟ್ಯಾಗ್ ಮಾಡಲಾಗಿದೆ. ಇನ್ನು ಬೇರೆ ಮಾಧ್ಯಮಗಳು, ಬನ್ಸುರಿ ಲಾಲ್ ಕುಟುಂಬವು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಆಗಸ್ಟ್ 15 ರಂದು ತಮ್ಮ ವಶಕ್ಕೆ ಪಡೆದುಕೊಂಡಿದೆ. ಭಾರತವು ತಮ್ಮ ನೂರಾರು ನಾಗರಿಕರನ್ನು ಆ ಬಳಿಕ ಅಫ್ಘಾನಿಸ್ತಾನದಿಂದ ವಾಪಾಸ್ ಕರೆಸಿಕೊಂಡಿದೆ. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನಿಗಳನ್ನು ಕೂಡಾ ಭಾರತಕ್ಕೆ ಕರೆತರಲಾಗಿದೆ. ಇನ್ನು ಕಳೆದ ತಿಂಗಳು ಸುಮಾರು 150 ಭಾರತೀಯರನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳು ಅಪಹರಣ ಮಾಡಿದ್ದಾರೆ ಎಂದು ವರದಿಯಾಗಿತ್ತು. ಕಾಬೂಲ್ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ತಾವು ದೇಶವನ್ನು ತೊರೆಯಲು ವಿಮಾನಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಈ ಅಪಹರಣ ನಡೆದಿದೆ ಎಂದು ಹೇಳಲಾಗಿದೆ. ಆದರೆ ಸರ್ಕಾರವು ಬಳಿಕ ಆ ಜನರನ್ನು ಸಮೀಪದ ಪೊಲೀಸ್ ಠಾಣೆಗೆ ವಿಚರಣೆಗಾಗಿ ಮಾತ್ರ ಕರೆದೊಯ್ಯಲಾಗಿತ್ತು ಎಂದು ಸ್ಪಷ್ಟಪಡಿಸಿದೆ. ಸಂಚಾರ ಮಾಡಲು ಎಲ್ಲಾ ದಾಖಲೆಗಳು ಸರಿಯಾಗಿ ಇದೆಯೇ ಎಂದು ನೋಡಲು ಕರೆದೊಯ್ಯಲಾಗಿದೆ ಎಂದು ತಿಳಿಸಿದೆ. ಬಳಿಕ ಇವರೆಲ್ಲರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ವರದಿಯಾಗಿದೆ. ಇನ್ನು ಹಲವಾರು ಮಂದಿ ಭಾರತೀಯರು ಇನ್ನೂ ಕೂಡಾ ಅಫ್ಘಾನಿಸ್ತಾನದಲ್ಲೇ ಬಾಕಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
(ಒನ್ ಇಂಡಿಯಾ ಸುದ್ದಿ)