ರೊಹಿಂಗ್ಯಾ ನಿರಾಶ್ರಿತರಿಗೆ ಹೊಸ ಜಾಗ ಹುಡುಕಿದ ಬಾಂಗ್ಲಾದೇಶ
ನವದೆಹಲಿ, ಡಿಸೆಂಬರ್ 7: ಮಯನ್ಮಾರ್ನ ರಖಿನೆ ಪ್ರಾಂತ್ಯದಲ್ಲಿ 2016ರಲ್ಲಿ ನಡೆದ ಸೇನಾ ಕಾರ್ಯಾಚರಣೆ ಬಳಿಕ ಅಲ್ಲಿಂದ ಪರಾರಿಯಾದ ಎಂಟು ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಸಮುದಾಯದ ಮುಸ್ಲಿಮರು ಬಾಂಗ್ಲಾದೇಶದ ಕಾಕ್ಸ್ ಬಜಾರ್ನ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಭದ್ರತೆ ಮತ್ತು ತಾರ್ಕಿಕ ಕಾರಣಗಳಿಂದ ಅವರನ್ನು ಅಲ್ಲಿ ಇರಿಸಿರುವುದಾಗಿ ಬಾಂಗ್ಲಾದೇಶ ತಿಳಿಸಿತ್ತು. ಆದರೆ ಈಗ ರೊಹಿಂಗ್ಯಾ ನಿರಾಶ್ರಿತರಿಗೆ ಬಾಂಗ್ಲಾದೇಶ ಹೊಸ ತಾಣವನ್ನು ಹುಡುಕಿದೆ. ಬಂಗಾಳ ಕೊಲ್ಲಿಯ ನದಿಮುಖಜಭೂಮಿಯಲ್ಲಿ ನಿರ್ಮಿಸಲಾಗಿರುವ ನೂತನ ದ್ವೀಪಕ್ಕೆ ನಿರಾಶ್ರಿತರನ್ನು ಸ್ಥಳಾಂತರಿಸಲಾಗುತ್ತಿದೆ.
ಕಾಕ್ಸ್ ಬಜಾರ್ನಲ್ಲಿದ್ದ ಸುಮಾರು 1 ಲಕ್ಷ ರೊಹಿಂಗ್ಯಾ ನಿರಾಶ್ರಿತರನ್ನು ಬಾಂಗ್ಲಾದೇಶ ಈಗ ನಾವ್ಖಾಲಿ ಜಿಲ್ಲೆಯಿಂದ 40ಕಿಮೀ ದೂರದಲ್ಲಿರುವ ಹೊಸ ಭಸಾನ್ ಚಾರ್ ದ್ವೀಪಕ್ಕೆ ರವಾನಿಸುತ್ತಿದೆ. ರೊಹಿಂಗ್ಯಾ ನಿರಾಶ್ರಿತರ ಈ ಅಂತರ್ ದೇಶೀಯ ಗಡಿಪಾರಿನ ಕ್ರಮದ ಬಗ್ಗೆ ಸಂದೇಹಗಳು ವ್ಯಕ್ತವಾಗಿವೆ. ಆದರೆ ತಮ್ಮ ತವರು ದೇಶ ಮಯನ್ಮಾರ್ಗೆ ತೆರಳುವುದರ ಹೊರತಾಗಿ ಈ ನಿರಾಶ್ರಿತರಿಗೆ ಭಸಾನ್ ಚಾರ್ನಿಂದ ಹೊರಹೋಗಲು ಅವಕಾಶ ನೀಡುವುದಿಲ್ಲ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.
'ಕಣ್ಣಿಗೆ ಕಂಡವರನ್ನೆಲ್ಲಾ ಕೊಲೆ ಮಾಡಿ': ಹೇಗಿತ್ತು ರೊಹಿಂಗ್ಯಾ ಹತ್ಯಾಕಾಂಡ..?
ಹೊಸ ಭಸಾನ್ ಚಾರ್ ದ್ವೀಪವು ವಾಸಕ್ಕೆ ಯೋಗ್ಯವಾಗಿಲ್ಲ. ಅತಿಯಾದ ಕೆಸರು ಮತ್ತು ಮಳೆಗಾಲದಲ್ಲಿ ನೀರಿಇನ ಹರಿವು ತೀವ್ರವಾಗಿರುವುದರಿಂದ ಬಾಂಗ್ಲಾದೇಶದ ಈ ನಡೆ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಭಸಾನ್ ಚಾರ್ ದ್ವೀಪವು ಬಾಂಗ್ಲಾದೇಶದ ಒಳಭಾಗದಲ್ಲಿ ಹರಿದು ಬರುವ ಅತ್ಯಂತ ಅಪಾಯಕಾರಿ ನದಿ ಮೇಘ್ನಾ ತಂದು ಸುರಿದ ಕೆಸರುಗಳಿಂದಾಗಿ ಕಳೆದ 14-15 ವರ್ಷಗಳ ಹಿಂದೆ ರಚನೆಯಾಗಿದೆ. ಮುಂದೆ ಓದಿ.
ಮಳೆಗಾಲದಲ್ಲಿ ಅಪಾಯಕಾರಿ
ಗಂಗಾ ನದಿಯ ಜತೆಗೂಡಿ ಮೇಘ್ನಾ ನದಿ ಜಗತ್ತಿನಲ್ಲಿಯೇ ಅತಿ ದೊಡ್ಡ ಮುಖಜಭೂಮಿಯನ್ನು ರಚಿಸಿರುವ ಮೂರು ನದಿಗಳ ವ್ಯವಸ್ಥೆಯಲ್ಲಿ ಒಂದಾಗಿದೆ. ಮೇಘ್ನಾ ನದಿಯ ಮೂಲ ಭಾರತದ ಮಣಿಪುರದ ಬೆಟ್ಟ. ಇದರ ಮೂಲಕ ಹೆಸರು ಬರಾಕ್ ನದಿ. ಸುಮಾರು 40 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಭಸಾನ್ ಚಾರ್ ದ್ವೀಪ, ಮಳೆಗಾಲದಲ್ಲಿ ನೀರಿನಿಂದ ಆವೃತವಾಗುತ್ತದೆ.
ಅನೇಕ ಸೌಲಭ್ಯಗಳ ನಿರ್ಮಾಣ
ಕಾಕ್ಸ್ ಬಜಾರ್ನಿಂದ ರೊಹಿಂಗ್ಯಾ ನಿರಾಶ್ರಿತರ ಸಂಖ್ಯೆಯನ್ನು ಕಡಿಮೆ ಮಾಡಲು ಶೇಖ್ ಹಸೀನಾ ಸರ್ಕಾರ ನಿರ್ಧರಿಸಿದಾಗ ಭಸಾನ್ ಚಾರ್ ದ್ವೀಪದಲ್ಲಿ ನಿರ್ಮಾಣ ಸೌಲಭ್ಯಗಳು ಆರಂಭವಾಗಿದ್ದವು. ಸರ್ಕಾರವು ಇಲ್ಲಿ ಚೀನಾ ಸೇರಿದಂತೆ ವಿವಿಧ ವಿದೇಶಿ ನಿರ್ಮಾಣ ಸಂಸ್ಥೆಗಳ ಮೂಲಕ ಆಶ್ರಯ ಮನೆಗಳು, ಆಸ್ಪತ್ರೆಗಳು, ಆಡಳಿತ ಕಚೇರಿಗಳು ಮತ್ತು ಮಸೀದಿಗಳನ್ನು ಸಹ ನಿರ್ಮಿಸಿದೆ ಎನ್ನಲಾಗಿದೆ.
ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ
ಮತ್ತಷ್ಟು ತಂಡಗಳ ರವಾನೆ
ರೊಹಿಂಗ್ಯಾಗಳ ಮೊದಲ ಬ್ಯಾಚ್ಅನ್ನು ಕಳೆದ ವಾರ ಹಡಗಿನ ಮೂಲಕ ಭಸಾನ್ ಚಾರ್ ದ್ವೀಪಕ್ಕೆ ರವಾನಿಸಲಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಮತ್ತಷ್ಟು ಹಡಗುಗಳು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ನಿರಾಶ್ರಿತರನ್ನು ಸಾಗಿಸುವ ಕಾರ್ಯ ಮುಂದುವರಿಸಲಿವೆ.
ಎರಡೂ ಕಡೆಗಳ ನಡುವೆ ಸಂಘರ್ಷ
ಮಯನ್ಮಾರ್ನಲ್ಲಿ ರೊಹಿಂಗ್ಯಾ ಸಮಸ್ಯೆ ಕಳೆದ ಕೆಲವು ವರ್ಷಗಳ ಹಿಂದೆ ಆರಂಭವಾಗಿತ್ತು. ರೊಹಿಂಗ್ಯಾಗಳನ್ನು ಸ್ಥಳೀಯರು ಎಂದು ಮಯನ್ಮಾರ್ ಪರಿಗಣಿಸುತ್ತಿಲ್ಲ. ಹೆಚ್ಚಿನ ರೊಹಿಂಗ್ಯಾಗಳಿಗೆ ಅಲ್ಲಿ ಮತದಾನ ಹಕ್ಕು ಇಲ್ಲ. ಬೌದ್ಧ ಪ್ರಾಬಲ್ಯದ ಮಯನ್ಮಾರ್ ಮತ್ತು ರೊಹಿಂಗ್ಯಾ ನಡುವೆ ಹಗೆತನ ಸಾಮಾನ್ಯವಾಗಿದೆ. ಅರಾಕನ್ ರೊಹಿಂಗ್ಯಾ ಸಾಲ್ವೇಷನ್ ಸೇನೆ ಎಂಬ ರೊಹಿಂಗ್ಯಾ ಸಂಘಟನೆ ಎರಡೂ ಕಡೆಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ರೊಹಿಂಗ್ಯಾ ನಿರಾಶ್ರಿತರ ಗಡಿಪಾರು: ಕೇಂದ್ರದ ನಿರ್ಧಾರಕ್ಕೆ ಅಡ್ಡಿ ಬರಲ್ಲ ಎಂದ ಸುಪ್ರೀಂ
ಮಯನ್ಮಾರ್ ಸೇನೆ ಕಾರ್ಯಾಚರಣೆ
2016ರಲ್ಲಿ ರಖಿಲೆ ಪ್ರಾಂತ್ಯದ ರೊಹಿಂಗ್ಯಾಗಳ ಮೇಲೆ ಕಾರ್ಯಾಚರಣೆ ನಡೆಸಿದ ಮಯನ್ಮಾರ್ ಸೇನೆ, ಅರಾಕನ್ ರೊಹಿಂಗ್ಯಾ ಸಾಲ್ವೇಷನ್ ಸೇನೆಯನ್ನು ಇಸ್ಲಾಮಿಸ್ಟ್ ಉಗ್ರರ ಸಂಘಟನೆ ಎಂದು ಕರೆದಿತ್ತು. ಈ ದಾಳಿಯಲ್ಲಿ ವ್ಯಾಪಕ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಪಗಳು ಕೇಳಿಬಂದಿದ್ದವು. ಇದರಿಂದ ಸಾವಿರಾರು ರೊಹಿಂಗ್ಯಾಗಳು ರಖಿನೆ ಪ್ರಾಂತ್ಯದಿಂದ ದೋಣಿಗಳಲ್ಲಿ ಕಂಡಕಂಡಲ್ಲಿಗೆ ಸಾಗಿದ್ದರು. ಅನೇಕ ದೇಶಗಳು ಭದ್ರತಾ ಬೆದರಿಕೆಯಿಂದ ಮತ್ತು ನಿರಾಶ್ರಿಯ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಾಗದ ಕಾರಣಕ್ಕೆ ಅವರಿಗೆ ಭೂಮಿ ನೀಡಲು ನಿರಾಕರಿಸಿದ್ದವು.