ಅಕ್ರಮ ವಲಸಿಗರ ಪಟ್ಟಿಕೊಡಿ, ವಾಪಸ್ ಕರೆಸಿಕೊಳ್ಳುತ್ತೇವೆ: ಬಾಂಗ್ಲಾದೇಶ
ಢಾಕಾ, ಡಿಸೆಂಬರ್ 16: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳ ಪಟ್ಟಿಯನ್ನು ನೀಡುವಂತೆ ಮನವಿ ಮಾಡಲಾಗಿದ್ದು, ಅವರು ದೇಶಕ್ಕೆ ಮರಳಲು ಅವಕಾಶ ನೀಡುತ್ತೇವೆ ಎಂದು ಬಾಂಗ್ಲಾದೇಶ ತಿಳಿಸಿದೆ.
ಭಾರತದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕುರಿತಾದ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್, ಭಾರತದ ಈ ಪ್ರಕ್ರಿಯೆಗಳಿಂದ ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಸಹಜವಾಗಿದೆ ಮತ್ತು ತುಂಬಾ ಮಧುರವಾಗಿದೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಮಸೂದೆ: ನಿಮಗೆ ತಿಳಿದಿರಬೇಕಾದ ಪ್ರಮುಖ ಮಾಹಿತಿ
ಎನ್ಆರ್ಸಿ ಪ್ರಕ್ರಿಯೆಯು ಆಂತರಿಕ ವಿಚಾರವಾಗಿದೆ ಎಂದು ಭಾರತ ಹೇಳಿದೆ. ಇದು ಬಾಂಗ್ಲಾದೇಶಕ್ಕೆ ಯಾವುದೇ ರೀತಿ ತೊಂದರೆಯುಂಟುಮಾಡುವುದಿಲ್ಲ ಎಂಬ ಭರವಸೆ ನೀಡಿದೆ ಎಂದರು.
ಭಾರತದಿಂದ ಜನರನ್ನು ಹಿಂದಕ್ಕೆ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, ಆರ್ಥಿಕ ಕಾರಣಗಳಿಂದ ಭಾರತೀಯ ಪ್ರಜೆಗಳು ಕೂಡ ಬಾಂಗ್ಲಾದೇಶಕ್ಕೆ ಮಧ್ಯವರ್ತಿಗಳ ಮೂಲಕ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ ಎಂದು ಹೇಳಿದರು.
ಅಕ್ರಮ ಪ್ರವೇಶಿಸಿದರೆ ವಾಪಸ್
ಭಾರತದ ಗಡಿ ಮೂಲಕ ಕೆಲವು ಜನರು ಅಕ್ರಮವಾಗಿ ದೇಶದೊಳಗೆ ಪ್ರವೇಶಿಸುತ್ತಿದ್ದಾರೆ ಎಂಬ ವರದಿ ಕುರಿತಾದ ಪ್ರಶ್ನೆಗೆ ಅವರು, 'ಬಾಂಗ್ಲಾದೇಶಿಗಳ ಹೊರತಾಗಿ ಬೇರೆ ಯಾವುದೇ ಪ್ರಜೆಗಳು ಒಳನುಸುಳಲು ಪ್ರಯತ್ನಿಸಿದರೆ ಅವರನ್ನು ವಾಪಸ್ ಕಳುಹಿಸಲಾಗುವುದು' ಎಂದು ತಿಳಿಸಿದರು.
ವಾಪಸ್ ಬರುವುದು ಅವರ ಹಕ್ಕು
ಭಾರತದಲ್ಲಿ ಯಾವುದೇ ಬಾಂಗ್ಲಾದೇಶಿ ಪ್ರಜೆ ಅಕ್ರಮವಾಗಿ ನೆಲೆಸಿದ್ದರೆ ಅವರನ್ನು ವಾಪಸ್ ಕರೆಯಿಸಿಕೊಳ್ಳುವ ಸಲುವಾಗಿ ಪಟ್ಟಿ ನೀಡುವಂತೆ ಭಾರತಕ್ಕೆ ಮನವಿ ಮಾಡಿದ್ದೇವೆ. ಅವರಿಗೆ (ಬಾಂಗ್ಲಾದೇಶಿಯರು) ತಮ್ಮ ಸ್ವಂತ ದೇಶಕ್ಕೆ ಪ್ರವೇಶಿಸುವ ಹಕ್ಕು ಇರುವುದರಿಂದ ಅದಕ್ಕೆ ಅವಕಾಶ ನೀಡುತ್ತೇವೆ ಎಂದರು.
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ವಿದ್ಯಾರ್ಥಿಗಳ ಬಂಧನ, ಬಿಡುಗಡೆ
ಭಾರತ ಭೇಟಿ ರದ್ದುಗೊಳಿಸಲು ಕಾರಣ
ಗುರುವಾರ ಭಾರತಕ್ಕೆ ಭೇಟಿ ನೀಡಬೇಕಿದ್ದ ಎ.ಕೆ. ಅಬ್ದುಲ್ ಮೊಮೆನ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದರು. ಹುತಾತ್ಮ ವಿಚಾರವಾದಿಗಳ ದಿನ ಮತ್ತು ವಿಜಯ ದಿವಸದ ಆಚರಣೆಗಳಿಂದಾಗಿ ಬಿಡುವು ಸಿಕ್ಕಿರಲಿಲ್ಲ. ಹಾಗೆಯೇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಷಹ್ರಿಯಾರ್ ಖಾನ್ ಮತ್ತು ಸಚಿವಾಲಯದ ಕಾರ್ಯದರ್ಶಿಯ ಗೈರಿನ ಕಾರಣ ಹೆಚ್ಚಿನ ಕೆಲಸದ ಒತ್ತಡವಿತ್ತು. ಹೀಗಾಗಿ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾಗಿ ತಿಳಿಸಿದರು.
ಅಮಿತ್ ಶಾ ಹೇಳಿಕೆ ತಿರಸ್ಕರಿಸಿದ ಮೊಮೆನ್
ಮೊಮೆನ್ ಮತ್ತು ಗೃಹ ಸಚಿವ ಅಸಾದುಜಮಾನ್ ಖಾನ್ ಕಳೆದ ಗುರುವಾರ ಭಾರತಕ್ಕೆ ಭೇಟಿ ನೀಡಬೇಕಿತ್ತು. ಆದರೆ ಸಂಸತ್ನಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಉಂಟಾದ ಪ್ರತಿಭಟನೆ, ಗಲಾಟೆಯ ಕಾರಣ ಅವರು ಭೇಟಿ ರದ್ದುಗೊಳಿಸಿದ್ದರು ಎನ್ನಲಾಗಿತ್ತು. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಶೋಷಣೆ ನಡೆಯುತ್ತಿದೆ ಎಂಬ ಗೃಹ ಸಚಿವ ಅಮಿತ್ ಶಾ ಆರೋಪವನ್ನು ಮೊಮೆನ್ ತಿರಸ್ಕರಿಸಿದ್ದಾರೆ.