ಬಾಂಗ್ಲಾದೇಶದಲ್ಲಿ ಪತ್ರಕರ್ತೆಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು!
ಢಾಕಾ, ಆಗಸ್ಟ್ 29: ಬಾಂಗ್ಲಾದೇಶದ ಸುದ್ದಿ ವಾಹಿನಿಯೊಂದರ ವರದಿಗಾರ್ತಿಯೊಬ್ಬರನ್ನು ಅವರ ಮನೆಯಲ್ಲೇ ಕೊಚ್ಚಿ ಕೊಂದಿರುವ ಘಟನೆ ನಡೆದಿದೆ.
ಬಾಂಗ್ಲಾದೇಶ ರಾಜಧಾನಿ ಢಾಕಾದಿಂದ 150 ಕಿ.ಮೀ.ದೂರದ ಪಬ್ನಾ ಜಿಲ್ಲೆಯ ರಾಧಾನಗರ್ ನ ನಿವಾಸಿಯಾಗಿದ್ದ 32 ವರ್ಷ ವಯಸ್ಸಿನ ಸುಬರ್ನಾ ನೋದಿ ಅವರ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ.
ಎಂಥ ದುರಂತ! ಪ್ರವಾಹದ ವರದಿಗೆ ತೆರಳಿ ಶವವಾಗಿ ಹಿಂದಿರುಗಿದ ಪತ್ರಕರ್ತ
ಆನಂದ ಟಿವಿ ಖಾಸಗಿ ಸುದ್ದಿವಾಹಿನಿಯ ಬಾತ್ಮೀದಾರೆಯಾಗಿದ್ದ ಸುಬರ್ನಾ ನೋದಿ ಅವರನ್ನು ಹತ್ಯೆಗೈದವರಿಗೆ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಡೈಲಿ ಜಾಗ್ರತೋ ಬಾಂಗ್ಲಾ ಎಂಬ ದಿನಪ್ರತಿಕೆಯಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಿದ್ದರು.
ಪತಿಯಿಂದ ವಿಚ್ಛೇದನ ಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಒಂಭತ್ತು ವರ್ಷದ ಮಗಳಿದ್ದಾಳೆ.
ಮೋಟಾರ್ ಸೈಕಲ್ಗಳಲ್ಲಿ ಬಂದ ಸುಮಾರು10 ರಿಂದ 12 ಜನರಿದ್ದ ತಂಡವು ರಾತ್ರಿ 10.45ರ ವೇಳೆಯಲ್ಲಿ ಮೊದಲಿಗೆ ಅವರ ಮನೆಯ ಕರೆಗಂಟೆ ಬಾರಿಸಿದರು. ಸುಬರ್ನಾ ಬಾಗಿಲು ತೆರೆಯುತ್ತಿದ್ದಂತೆ ಒಳ ನುಗ್ಗಿದ ಹಂತಕರು ಆಯುಧದಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಸಾಧ್ಯತೆಯಿದೆ ಎಂದು ಪಬ್ನಾದ ಹೆಚ್ಚುವರಿ ಎಸ್ಪಿ ಗೌತಮ್ ಕುಮಾರ್ ಬಿಸ್ವಾಸ್ ಅವರು ಹೇಳಿದ್ದಾರೆ.