ಕೆನಡಾದಲ್ಲಿ ಕರೀಮಾ ಬಲೂಚ್ ನಿಗೂಢ ಸಾವು: ಯಾರಿದು ಬಲೂಚಿಸ್ತಾನ ಹೋರಾಟಗಾರ್ತಿ?
ನವದೆಹಲಿ, ಡಿಸೆಂಬರ್ 22: ಪಾಕಿಸ್ತಾನದಿಂದ 2016ರಲ್ಲಿ ತಪ್ಪಿಸಿಕೊಂಡು ಕೆನಡಾದಲ್ಲಿ ಆಶ್ರಯ ಪಡೆದಿದ್ದ ಬಲೂಚಿಸ್ತಾನದ ಕಾರ್ಯಕರ್ತೆ ಕರೀಮಾ ಬಲೂಚ್ ಅವರು ಟೊರಾಂಟೊದ ಲೇಕ್ಶೋರ್ ಪಟ್ಟಣ ಸಮೀಪದ ಹಾರ್ಬರ್ಫ್ರಂಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಕರೀಮಾ ಅವರು ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ನೆರವು ನೀಡುವಂತೆ ಟೊರಾಂಟೊ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದರು.
ಕೆನಡಾದ ಟೊರಾಂಟೊ ನಗರ ಸಮೀಪದಲ್ಲಿರುವ ದ್ವೀಪವೊಂದರಲ್ಲಿ ಕರೀಮಾ ಬಲೂಚ್ ಅವರ ಮೃತದೇಹ ಪೊಲೀಸರಿಗೆ ದೊರೆತಿದೆ. ಕರೀಮಾ ಅವರ ಪತಿ ಹಮ್ಮಲ್ ಹೈದರ್ ಮತ್ತು ಸಹೋದರ ಆಕೆಯ ಮೃತದೇಹವನ್ನು ಗುರುತಿಸಿದ್ದಾರೆ. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಕರೀನಾ ಬಲೂಚ್ ಅವರ ಸಾವಿನ ಹಿಂದೆ ಪಾಕಿಸ್ತಾನದ ಕೈವಾಡ ಇರುವ ಶಂಕೆಯಿದ್ದು, ಕೆನಡಾದ ಭದ್ರತಾ ಸಂಸ್ಥೆ ಸಿಎಸ್ಐಎಸ್, ಈ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಪಾಕಿಸ್ತಾನದ ಐಎಸ್ಐ ಏಜೆಂಟ್ಗಳನ್ನು ನಿಗ್ರಹಿಸಲು ಪ್ರಧಾನಿ ಜಸ್ಟಿನ್ ಟ್ರುಡೋ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಕರೀಮಾ ಅವರ ಸಾವಿನ ಹಿನ್ನೆಲೆಯಲ್ಲಿ ಬಲೂಚ್ ರಾಷ್ಟ್ರೀಯ ಚಳವಳಿಯು 40 ದಿನಗಳ ಶೋಕಾಚರಣೆ ಘೋಷಿಸಿದೆ. ಮುಂದೆ ಓದಿ.
ಯಾರಿದು ಕರೀಮಾ?
ಬಲೂಚಿಸ್ತಾನವನ್ನು ಪಾಕಿಸ್ತಾನದ ಹಿಡಿತದಿಂದ ಸ್ವತಂತ್ರಗೊಳಿಸುವ ಹೋರಾಟದಲ್ಲಿ ಮುಂಚೂಣಿ ಮಹಿಳೆಯರಲ್ಲಿ ಕರೀಮಾ ಒಬ್ಬರು. ಬಲೂಚ್ ವಿದ್ಯಾರ್ಥಿ ಸಂಘಟನೆ (ಆಜಾದ್) ವಿದ್ಯಾರ್ಥಿ ಘಟಕದ ನಾಯಕಿಯಾಗಿ ಕರೀಮಾ ಜನಪ್ರಿಯತೆ ಗಳಿಸಿದ್ದರು. ಈ ಸಂಘಟನೆ ಪಾಕಿಸ್ತಾನದಿಂದ ಬಲೂಚಿಸ್ತಾನಕ್ಕೆ ವಿಮೋಚನೆ ದೊರಕಿಸುವ ವಿದ್ಯಾರ್ಥಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಬಲೂಚ್ ವಿದ್ಯಾರ್ಥಿ ಸಂಘಟನೆಯ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆ ಕರೀಮಾ ಅವರದು. ಸಂಘಟನೆಯ ಮುಖ್ಯಸ್ಥರಾಗಿದ್ದ ಜಾಹಿದ್ ಬಲೂಚ್ ಅವರನ್ನು 2014ರಲ್ಲಿ ಅಪಹರಿಸಿದ ಬಳಿಕ ಕರೀಮಾ ಈ ಸಂಘಟನೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಜೀವ ಬೆದರಿಕೆಯಿಂದ ಪರಾರಿ
ಬಲೂಚ್ ವಿದ್ಯಾರ್ಥಿ ಸಂಘಟನೆ (ಆಜಾದ್) ಅನ್ನು ಭಯೋತ್ಪಾದನಾ ಸಂಘಟನೆಯನ್ನು ಪಾಕಿಸ್ತಾನ ಸರ್ಕಾರವು 2013ರ ಮಾರ್ಚ್ 15ರಂದು ನಿಷೇಧಿಸಿತ್ತು. ಬಲೂಚಿಸ್ತಾನದಲ್ಲಿ ಕರೀಮಾ ಚಟುವಟಿಕೆಗಳು ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ಚರ್ಚೆಯ ವಿಷಯವಾಗಿತ್ತು. ಇದರಿಂದ ತಮ್ಮ ಪ್ರಾಣಕ್ಕೆ ಬೆದರಿಕೆ ಇರುವುದನ್ನು ಅರಿತ ಅವರು 2016ರಲ್ಲಿ ಕೆಲವು ಸ್ನೇಹಿತರು ಮತ್ತು ಬಲೂಚ್ ಹೋರಾಟಗಾರರ ನೆರವಿನಿಂದ ಪರಾರಿಯಾಗಿ ಕೆನಡಾದಲ್ಲಿ ಆಶ್ರಯ ಪಡೆದಿದ್ದರು.
ಮೋದಿಗೆ ರಕ್ಷಾ ಬಂಧನ ಸಂದೇಶ
2016ರಲ್ಲಿ ಕರೀಮಾ ಬಲೂಚ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಾ ಬಂಧನದ ಸಂದೇಶ ರವಾನಿಸಿದ್ದರು. ವಿಡಿಯೋ ಸಂದೇಶ ಕಳುಹಿಸಿದ್ದ ಕರೀಮಾ, 'ಈ ದಿನ ನಾನು ನಿಮ್ಮ ಬಳಿ ಬಂದಿದ್ದೇನೆ ಮತ್ತು ನಿಮ್ಮನ್ನು ನಮ್ಮ ಸಹೋದರ ಎಂದು ಪರಿಗಣಿಸುತ್ತಿದ್ದೇವೆ ಎಂದು ಹೇಳಲು ಬಯಸಿದ್ದೇವೆ. ನೀವು ಬಲೂಚ್ ನರಮೇಧ, ಬಲೂಚಿಸ್ತಾನದಲ್ಲಿನ ಯುದ್ಧ ಅಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿಯಾಗುತ್ತೀರಿ ಮತ್ತು ಕಣ್ಮರೆಯಾದ ಸಹೋದರರ ಸಹೋದರಿಯರ ಪಾಲಿನ ಧ್ವನಿಯಾಗುತ್ತೀರಿ ಎಂದು ನಾವು ನಿರೀಕ್ಷಿಸಿದ್ದೇವೆ' ಎಂದು ಹೇಳಿದ್ದರು.
ವಿಶ್ವಸಂಸ್ಥೆಯಲ್ಲೂ ಪ್ರಸ್ತಾಪ
ಬಲೂಚಿಸ್ತಾನದ ಸಂಪನ್ಮೂಲಗಳನ್ನು ಕಿತ್ತುಕೊಳ್ಳುತ್ತಿರುವ ಪಾಕಿಸ್ತಾನ, ಜನರನ್ನು ಅಲ್ಲಿಂದ ತೆರವುಗೊಳಿಸುತ್ತಿದೆ ಎಂದು 2019ರಲ್ಲಿ ಕರೀಮಾ ಆರೋಪಿಸಿದ್ದರು. ಸ್ವಿಟ್ಜರ್ಲೆಂಡಿನಲ್ಲಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿಯೂ ಅವರು ಬಲೂಚಿಸ್ತಾನದ ಸಮಸ್ಯೆ ಪ್ರಸ್ತಾಪಿಸಿದ್ದರು.
ತುಂಬಲಾಗದ ನಷ್ಟ
ಕರೀಮಾ ಬಲೂಚ್ ಅವರ ಬಲಿದಾನ ಬಲೂಚ್ ದೇಶ ಮತ್ತು ರಾಷ್ಟ್ರೀಯ ಚಳವಳಿಗೆ ಬಹುದೊಡ್ಡ ನಷ್ಟ ಎಂದು ಬಲೂಚ್ ರಾಷ್ಟ್ರೀಯ ಚಳವಳಿ (ಬಿಎನ್ಎಂ) ವಕ್ತಾರರು ಹೇಳಿದ್ದಾರೆ.
'ಬಾನುಕ್ ಕರೀಮಾ ಅವರ ಸಾವಿನಿಂದ ನಾವು ದೂರದೃಷ್ಟಿತ್ವದ ನಾಯಕಿಯನ್ನು ಮತ್ತು ರಾಷ್ಟ್ರೀಯ ಸಂಕೇತವನ್ನು ಕಳೆದುಕೊಂಡಿದ್ದೇವೆ. ಈ ಮಹಾನ್ ನಷ್ಟದ ಪರಿಹಾರವನ್ನು ಶತಮಾನಗಳವರೆಗೂ ತುಂಬಿಸಿಕೊಳ್ಳುವುದು ಅಸಾಧ್ಯ' ಎಂದು ಅವರು ಹೇಳಿಕೆ ನೀಡಿದ್ದಾರೆ.