ಕುರಾನ್ ಬಗ್ಗೆ ಸಲ್ಮಾನ್ ರಶ್ದಿ ಮತ್ತೊಂದು ವಿವಾದಕಾರಿ ಹೇಳಿಕೆ
ಪವಿತ್ರ ಕುರಾನ್ ಅಷ್ಟೊಂದು ಎಂಜಾಯ್ ಮಾಡಬಲ್ಲ ಗ್ರಂಥವಲ್ಲ ಎನ್ನುವ ಹೇಳಿಕೆಯನ್ನು ಬ್ರೂಕರ್ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ ನೀಡುವ ಮೂಲಕ, ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತನ್ನ ವಿವಾದಕಾರಿ ಹೇಳಿಕೆ ಮತ್ತು ಕೃತಿಯಿಂದ ಸದಾ ಸುದ್ದಿಯಲ್ಲಿರುವ ಲೇಖಕ ಸಲ್ಮಾನ್ ರಶ್ದಿ, ಮುಸಲ್ಮಾನರ ಪವಿತ್ರ ಗ್ರಂಥ ಕುರಾನ್ ವಿರುದ್ದ ಹೇಳಿಕೆ ನೀಡಿ, ಮತ್ತೆ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನೈಋತ್ಯ ಇಂಗ್ಲೆಂಡಿನ ಚೆಲ್ತನ್ ಹ್ಯಾಮ್ ಸಾಹಿತ್ಯ ಉತ್ಸವದಲ್ಲಿ ಮಾತನಾಡುತ್ತಿದ್ದ ರಶ್ದಿ, ಪವಿತ್ರ ಕುರಾನ್ ಅಷ್ಟೊಂದು ಎಂಜಾಯ್ ಮಾಡಬಲ್ಲ ಗ್ರಂಥವಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಮೈಸೂರಲ್ಲಿ ಬ್ಯಾಂಕ್ ಚಲನ್ ಹಿಂಭಾಗ ಕುರಾನ್ ಪಠ್ಯ
ಎಪ್ಪತ್ತು ವರ್ಷದ, ಬ್ರೂಕರ್ ಪ್ರಶಸ್ತಿ ವಿಜೇತ ಲೇಖಕ ಸಲ್ಮಾನ್ ರಶ್ದಿ, 'ಸೆಟಾನಿಕ್ ವರ್ಸಸ್' ಎನ್ನುವ ತನ್ನ ಕೃತಿಯಲ್ಲಿ ಧರ್ಮನಿಂದನೆಗೆ ಗುರಿಯಾಗಿದ್ದರು. ಜೊತೆಗೆ, ಇವರ ತಲೆಗೆ ಮುಸ್ಲಿಂ ಧಾರ್ಮಿಕ ಮುಖಂಡರು ಬಹುಮಾನ ಘೋಷಿಸಿದ್ದರು.
ಇದಾದ ನಂತರ ವಿವಾದದಿಂದ ದೂರವಿದ್ದ ರಶ್ದಿ ಈಗ ಮತ್ತೆ ವಿವಾದಕಾರಿ ಹೇಳಿಕೆ ನೀಡಿದ್ದಾರೆ. ಕುರಾನ್ ಗ್ರಂಥವನ್ನು ಇನ್ನಷ್ಟು ಮಾನವೀಯತೆಗೊಳಿಸಿ ತಿದ್ದುಪಡಿ ಮಾಡಬಹುದೇ ಎನ್ನುವ ಪ್ರಶ್ನೆಗೆ, ತಿದ್ದುಪಡಿ ಮಾಡಬೇಕೆಂದರೆ ಅದನ್ನು ಓದಬೇಕು, ಆದರೆ ಕುರಾನ್ ಅನುಭವಿಸಿ ಓದುವ ಗ್ರಂಥವಲ್ಲ ಎಂದಿದ್ದಾರೆಂದು ಡೈಲಿಮೇಲ್ ಪತ್ರಿಕೆ ವರದಿ ಮಾಡಿದೆ.
ಯಾವುದೇ ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳದೇ ಮನುಷ್ಯ ಅನ್ಯೋನ್ಯವಾಗಿ ಬದುಕುವಂತಿದ್ದರೆ, ಈ ವಿಶ್ವವೇ ಪ್ರಶಾಂತವಾದ ಸ್ಥಳ. ಆದರೆ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ, ಸಾವುನೋವು ಸಂಭವಿಸುತ್ತಲೇ ಇರುತ್ತದೆ ಎಂದು ಸಲ್ಮಾನ್ ರಶ್ದಿ ವಿಷಾದ ವ್ಯಕ್ತ ಪಡಿಸಿದ್ದಾರೆ.
1988ರಲ್ಲಿ ಮುಸ್ಲಿಮರ ಗುರು ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಬರೆದು ರಶ್ದಿ, ವಿಶ್ವದ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಸ್ಲಾಂ ವಿರೋಧಿ ರಶ್ದಿ ಹತ್ಯೆಗೈಯುವುದರಲ್ಲಿ ತಪ್ಪೇನಿಲ್ಲ ಎಂದು ಧಾರ್ಮಿಕ ಮುಖಂಡ ಅಯಾತೊಲ್ಲ ಖೊಮೆನಿ ಫತ್ವಾ ಹೊರಡಿಸಿದ್ದರು.