ಹಿಂದೂಗಳು ಗರಂ, ಕುರಿಮಾಂಸ ತಿನ್ನುವ ಗಣೇಶನ ಜಾಹೀರಾತು
Recommended Video
ಸಿಡ್ನಿ, ಸೆ. 12: ಇಲ್ಲಿನ ಸ್ಥಳೀಯ ಟಿವಿ ಜಾಹೀರಾತೊಂದರಲ್ಲಿ ಹಿಂದೂಗಳ ಪ್ರಥಮ ಪೂಜ್ಯ ದೇವತೆ ಗಣೇಶನನ್ನು ಅವಮಾನಿಸಲಾಗಿದೆ. ಕುರಿ ಮಾಂಸವನ್ನು ಗಣೇಶ ಭಕ್ಷಿಸುವಂತೆ ತೋರಿಸಲಾಗಿದೆ ಎಂದು ಎನ್ನಾರೈಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿವಿ ಜಾಹೀರಾತು ಸಂಸ್ಥೆ ವಿರುದ್ಧ ದೂರು ಸಲ್ಲಿಸಲಾಗಿದೆ.
ಮಾಂಸ ಭಕ್ಷಣೆಗೆ ಪ್ರಚಾರ ನೀಡಲು ಈ ಟಿವಿ ಜಾಹೀರಾತು ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ ದೈನಂದಿನ ಬದುಕಿನಲ್ಲಿ ಬಳಸುವ ಆಹಾರಗಳು ಊಟದ ಟೇಬಲ್ ಮೇಲಿರುತ್ತದೆ. ಹಿಂದೂಗಳ ದೇವತೆ ಗಣೇಶ ಅಲ್ಲದೆ, ಜೀಸಸ್, ಬುದ್ಧ, ಸೈನ್ಟೋಲಾಜಿ ಸ್ಥಾಪಕ ರಾನ್ ಹುಬ್ಬಾರ್ಡ್ ಸೇರಿದಂತೆ ಹಲವಾರು ಮಂದಿಯ ಪ್ರತಿರೂಪದಂತಿರುವ ವ್ಯಕ್ತಿಗಳು ಕುಳಿತಿರುತ್ತಾರೆ.
ಈ ಸಂದರ್ಭದಲ್ಲಿ ಕುರಿ ಮಾಂಸ ಹಾಗೂ ಮದ್ಯ ಸೇವನೆಯನ್ನು ಎಲ್ಲರೂ ಸಾಮೂಹಿಕವಾಗಿ ಮಾಡುತ್ತಾರೆ. ಈ ದೃಶ್ಯಗಳಿಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಜಾಹೀರಾತುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಸಿಡ್ನಿಯಲ್ಲಿರುವ ಭಾರತೀಯ ದೂತವಾಸ ಕಚೇರಿ, ಈ ಬಗ್ಗೆ ಪ್ರಶ್ನಿಸಿ ಜಾಹೀರಾತು ಸಂಸ್ಥೆಗೆ ನೋಟಿಸ್ ನೀಡಿದೆ. ಕೂಡಲೇ ಜಾಹೀರಾತು ಪ್ರಸಾರ ಸ್ಥಗಿತಕ್ಕೆ ನಿರ್ದೇಶಿಸಿದೆ.