ಅರಣ್ಯವೆಲ್ಲ ಹೊತ್ತಿ ಉರಿಯುತ್ತಿದೆ, ಆ ದೇಶದ ಪ್ರಧಾನಿ ಭಾರತಕ್ಕೆ ಬರಲ್ಲ
ಕ್ಯಾನಬೆರಾ, ಜನವರಿ.04: ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ತಮ್ಮ ಭಾರತದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಕಾಡ್ಗಿಚ್ಚಿನಿಂದ ಆಸ್ಟ್ರೇಲಿಯಾದಲ್ಲಿ ಸಸ್ಯ ಸಂಕುಲದ ಜೊತೆ ಪ್ರಾಣಿ ಸಂಕುಲವು ಸುಟ್ಟು ಭಸ್ಮವಾಗುತ್ತಿದ್ದು, ಆತಂಕವನ್ನು ಸೃಷ್ಟಿಸಿದೆ.
ಆಸ್ಟ್ರೇಲಿಯಾದಲ್ಲಿ ಹೊತ್ತಿಕೊಂಡ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಪ್ರವಾಸ ಕೈಗೊಳ್ಳದಿರಲು ಆಸ್ಟ್ರೇಲಿಯಾ ಪ್ರಧಾಮಂತ್ರಿ ಸ್ಕಾಟ್ ಮಾರಿಸನ್ ತೀರ್ಮಾನಿಸಿದ್ದಾರೆ. ಇನ್ನು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಮಾರಿಸನ್ ಅವರಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟ
ಜನವರಿ.13 ರಿಂದ 16ರವರೆಗೂ ಭಾರತದಲ್ಲಿ ಪ್ರವಾಸ ಕೈಗೊಳ್ಳಲು ಈ ಮೊದಲು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ನಿರ್ಧರಿಸಿದ್ದರು. ಆದರೆ, ಕಳೆದ ಒಂದು ವಾರದಿಂದ ಆಸ್ಟ್ರೇಲಿಯಾದ ಆಗ್ನೇಯ ಅರಣ್ಯ ಭಾಗದಲ್ಲಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಡುತ್ತಲೇ ಇದ್ದಾರೆ. ಇಂದಿಗೂ ಕೂಡಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಬದಲಿಗೆ ದಿನೇ ದಿನೆ ಆತಂಕ ಹೆಚ್ಚುತ್ತಲೇ ಇದೆ. ಹೀಗಾಗಿ ಭಾರತಕ್ಕೆ ಹೊರಟು ನಿಂತಿದ್ದ ಪ್ರಧಾನಿ ಸ್ಕಾಟ್ ಮಾರಿಸನ್ ತಮ್ಮ ಮೂರು ದಿನದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಪ್ರಾಣರಕ್ಷಣೆಗೆ 20 ಗಂಟೆ ಹಡಗಿನಲ್ಲಿ ಪ್ರಯಾಣ
ಆಸ್ಟ್ರೇಲಿಯಾದ ಆಗ್ನೇಯ ಭಾಗದಲ್ಲಿ ಹೊತ್ತಿಕೊಂಡ ಬೆಂಕಿ ಹಾಗೂ ಹೊಗೆಯ ತೀವ್ರತೆ ಜನರನ್ನು ಆತಂಕಕ್ಕೆ ದೂಡಿದೆ. ಮೆಲ್ಬರ್ನ್ ನಲ್ಲಿ ಸಾವಿರಾರು ಜನರು ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ 20 ಗಂಟೆಗಳ ಕಾಲ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಹೊತ್ತಿಕೊಂಡ ಕಾಡ್ಗಿಚ್ಚಿನಲ್ಲಿ 21 ಮಂದಿ ದಹನ
ಆಗ್ನೇಯ ಭಾಗ ಮೂರು ರಾಜ್ಯಗಳಲ್ಲಿ ಕಂಡು ಕೇಳರಿಯದಂತಾ ಕಾಡ್ಗಿಚ್ಚಿನ ದುರಂತವೊಂದು ಸಂಭವಿಸಿದೆ. ಈವರೆಗೆ 21ಕ್ಕೂ ಹೆಚ್ಚು ಮಂದಿ ಬೆಂಕಿಗೆ ಆಹುತಿಯಾಗಿದ್ದರೆ, ಮಲ್ಲಕೂಟ್ ಪ್ರದೇಶವೊಂದರಲ್ಲೇ ನಾಲ್ಕು ಸಾವಿರ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನು, ಕೆಲವು ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಲಕ್ಷಾಂತರ ಹೆಕ್ಟರ್ ಅರಣ್ಯ ಪ್ರದೇಶ ಭಸ್ಮ
ಕಳೆದ ಒಂದು ತಿಂಗಳಿನಿಂದ ಹೊತ್ತಿಕೊಂಡು ಉರಿಯುತ್ತಿರುವ ಜ್ವಾಲಾಗ್ನಿಗೆೆ ಲಕ್ಷಾಂತರ ಹೆಕ್ಟರ್ ಪ್ರದೇಶವು ಸುಟ್ಟು ಭಸ್ಮವಾಗಿದೆ. ಆಸ್ಟ್ರೇಲಿಯಾದಲ್ಲಿ 50 ಲಕ್ಷ ಹೆಕ್ಟರ್ ಪ್ರದೇಶದ ಅರಣ್ಯವು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ಪ್ರಾಣಿ-ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ.
ರಕ್ಷಣಾ ಕಾರ್ಯಾಚರಣೆಗೆ 3 ಸಾವಿರ ಪಡೆ
ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚಿನಿಂದ ಲಕ್ಷಾಂತರ ಜನರು ಆಂತಕದಲ್ಲೇ ದಿನ ದೂಡುವಂತಾಗಿದೆ. ಕಾಡ್ಗಿಚ್ಚು ಹೊತ್ತಿಕೊಂಡಿರುವ ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ವತಃ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ 3 ಸಾವಿರ ಮೀಸಲು ಪಡೆಗಳನ್ನು ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ನೌಕಾಪಡೆ ಸಹ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, 1 ಸಾವಿರ ಪ್ರಯಾಣಿಕರನ್ನು ಸಾಗಿಸುವ ಹಡಗಿನಲ್ಲಿ ಜನರನ್ನು ರಕ್ಷಿಸಲಾಗುತ್ತಿದೆ.