ಸುಪ್ರೀಂ ತೀರ್ಪು ವಿರುದ್ಧ ಹೊತ್ತಿ ಉರಿಯುತ್ತಿದೆ ಪಾಕ್, ಏನಿದು ಏಶಿಯಾ ಬೀಬಿ ಕೇಸ್?
ಧರ್ಮನಿಂದನೆ ಪ್ರಕರಣದಿಂದ ಏಶಿಯಾ ಬೀಬಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಖುಲಾಸೆ ಮಾಡಿದ ನಂತರ ದೇಶದಾದ್ಯಂತ ಭುಗಿಲೆದ್ದಿರುವ ಹಿಂಸಾಚಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಕರೆ ನೀಡಿರುವ ಬಂದ್ ಗೆ ದೇಶದ ಎಲ್ಲ ಪ್ರಮುಖ ರಸ್ತೆಗಳು ಬಂದ್ ಆಗಿವೆ.
ಕನಿಷ್ಠ ಹದಿನಾಲ್ಕು ಪ್ರಮುಖ ಧಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಕೈ ಜೋಡಿಸಿವೆ. ಟೈರ್ ಗಳಿಗೆ ಬೆಂಕಿ ಹೊತ್ತಿಸಿ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಧಾರ್ಮಿಕ ಮುಖಂಡರು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲಿನ ಮಾಧ್ಯಮಗಳ ವರದಿ ಪ್ರಕಾರ, ಹಲವು ನಗರಗಳಲ್ಲಿ ರಸ್ತೆ ಬಂದ್ ಮಾಡಿ, ವಾಹನಗಳಿಗೆ ತಡೆಯೊಡ್ಡಲಾಗುತ್ತಿದೆ. ಎಲ್ಲ ಮಳಿಗೆ ಹಾಗೂ ವ್ಯವಹಾರಗಳನ್ನು ಬಂದ್ ಮಾಡಿಸಲಾಗುತ್ತಿದೆ. ಕರಾಚಿಯ ಸ್ಟಾರ್ ಗೇಟ್ ನಿಂದ ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗೆ ಕೂಡ ತಡೆ ಮಾಡಲಾಗಿದೆ.
How is this jahalat related to religion or blasphemy? Every citizen has the right to protest peacefully but the Govt must take extra measures to stop such incidents. The Govt must establish its writ against such behavior & every sane citizen will support it, no time for politics. pic.twitter.com/hCdybxkqmF
— ƒв (@MutePaper) November 2, 2018
ನವೆಂಬರ್ 10ನೇ ತಾರೀಕಿನ ತನಕ ಪಂಜಾಬ್, ಸಿಂಧ್ ಹಾಗೂ ಬಲೂಚಿಸ್ತಾನ್ ನಲ್ಲಿ ಸೆಕ್ಷನ್ 144 ಹೇರಲಾಗಿದೆ. ಕರಾಚಿ, ಲಾಹೋರ್, ಇಸ್ಲಾಮಾಬಾದ್, ಪೇಶಾವರ್ ಎಲ್ಲ ಪ್ರಮುಖ ನಗರಗಳ ಮುಖ್ಯ ರಸ್ತೆಗಳಿಗೆ ತಡೆ ಮಾಡಿದ್ದು, ಯಾವುದೇ ವ್ಯಾಪಾರ-ವ್ಯವಹಾರ ನಡೆಯುತ್ತಿಲ್ಲ. ಪಂಜಾಬ್, ಬಲೂಚಿಸ್ತಾನ್ ಹಾಗೂ ಕರಾಚಿಯ ಬಹುತೇಕ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಗೌರವಿಸುವಂತೆ ಮನವಿ
ಸುಪ್ರೀಂ ಕೋರ್ಟ್ ನ ತೀರ್ಪನ್ನು ಗೌರವಿಸಿ ಎಂದು ಇಮ್ರಾನ್ ಖಾನ್ ನೇತೃತ್ವದ ಸರಕಾರ ಪ್ರತಿಭಟನಾನಿರತರನ್ನು ಮನವಿ ಮಾಡುತ್ತಿದೆ. ವಿರೋಧ ಪಕ್ಷದೊಂದಿಗೆ ಚರ್ಚೆ ನಡೆಸಿ, ಸನ್ನಿವೇಶವನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದೆ. ಆಂತರಿಕ ವ್ಯವಹಾರಗಳ ರಾಜ್ಯ ಸಚಿವ ಶೆಹ್ರ್ ಯಾರ್ ಅಫ್ರಿದಿ ಮಾತನಾಡಿ, ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಅಂತ್ಯ ಹಾಡುತ್ತೇವೆ. ಈಗಾಗಲೇ ಬಂದ್ ಮಾಡಿರುವ ರಸ್ತೆಗಳನ್ನು ತೆರವುಗೊಳಿಸುತ್ತೇವೆ ಎಂದಿದ್ದಾರೆ.
ಮೊಬೈಲ್ ಸೇವೆಗಳು ಸಂಪೂರ್ಣ ಸ್ಥಗಿತ
ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಮಾತನಾಡಿ, ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್ ಹಾಗೂ ಗುಜ್ರಾನ್ ವಾಲಾ ಸೇರಿದಂತೆ ಪ್ರಮುಖ ನಗರದಲ್ಲಿ ಮೊಬೈಲ್ ಸೇವೆ ಇನ್ನೂ ಕೆಲ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ನಿಂದ ಐತಿಹಾಸಿಕ ತೀರ್ಪು ಬಂದ ನಂತರ ಅಲ್ಲಿನ ಚರ್ಚ್ ಗಳಿಗೆ ಭಾರೀ ಭದ್ರತೆ ಒದಗಿಸಲಾಗಿದೆ. ಹಾಗೂ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ರಕ್ಷಣೆ ಒದಗಿಸಲಾಗಿದೆ.
ಏಶಿಯಾ ಬೀಬಿಗೆ ಸ್ಪೇನ್ ಅಥವಾ ಫ್ರಾನ್ಸ್ ನಲ್ಲಿ ಆಶ್ರಯ
ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಧರ್ಮ ನಿಂದನೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಏಶಿಯಾ ಬೀಬಿ ಸದ್ಯದಲ್ಲೇ ದೇಶ ಬಿಟ್ಟು ತೆರಳುವ ಸಾಧ್ಯತೆ ಇದೆ. ಆಕೆ ವಿರುದ್ಧ ಧರ್ಮನಿಂದನೆ ಪ್ರಕರಣದಲ್ಲಿ ಪಾಕಿಸ್ತಾನ ಕೋರ್ಟ್ ಮರಣದಂಡನೆ ವಿಧಿಸಿತ್ತು. ಅಕ್ಟೋಬರ್ 31ರಂದು ಆಕೆ ನಿರಪರಾಧಿ ಎಂದು ಘೋಷಿಸಿ, ಪಾಕ್ ನ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಎಂಟು ವರ್ಷದಿಂದ ಆಕೆ ಜೈಲಿನಲ್ಲಿದ್ದರು. 47 ವರ್ಷದ ರೋಮನ್ ಕ್ಯಾಥೋಲಿಕ್ ಸಮುದಾಯದ ಏಶಿಯಾಗೆ ನಾಲ್ವರು ಮಕ್ಕಳು. ಆಕೆಗೆ ಆಶ್ರಯ ನೀಡಲು ಸ್ಪೇನ್ ಹಾಗೂ ಫ್ರಾನ್ಸ್ ಮುಂದೆ ಬಂದಿವೆ.
ಧರ್ಮನಿಂದನೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿತ್ತು
2009ರಲ್ಲಿ ನೆರೆಹೊರೆಯ ಇತರ ಮುಸ್ಲಿಮರು ನೀರು ಕುಡಿಯವ ಕಂಟೇನರ್ ನ ನೀರನ್ನೇ ಏಶಿಯಾ ಬೀಬಿ ಕುಡಿದಿದ್ದರು. ಆಗ ಅಲ್ಲಿನ ಮಹಿಳೆಯರು ಸಿಟ್ಟಾಗಿ, ಏಶಿಯಾ ಇಸ್ಲಾಮ್ ಗೆ ಮತಾಂತರ ಆಗಬೇಕು ಎಂದು ಒತ್ತಾಯಿಸಿದ್ದರು. ಅದನ್ನು ಆಕೆ ನಿರಾಕರಿಸಿದ್ದರು. ಆ ನಂತರ ಮಹಿಳೆಯರ ಗುಂಪು ಏಶಿಯಾ ಬೀಬಿ ಮೇಲೆ ಧರ್ಮ ನಿಂದನೆಯ ಆರೋಪ ಹೊರೆಸಿತ್ತು. ಈ ಆರೋಪದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆದು, ಮರಣದಂಡನೆ ವಿಧಿಸಲಾಗಿತ್ತು. ಧರ್ಮನಿಂದನೆ ಕಾನೂನಿನ ಅಡಿಯಲ್ಲಿ ಮರಣದಂಡನೆ ಶಿಕ್ಷೆ ಘೋಷಣೆ ಆದ ಮೊದಲ ಮಹಿಳೆ ಏಶಿಯಾ ಬೀಬಿ ಆಗಿದ್ದರು.