‘ಭಾರತವೇ ನಮ್ಮನ್ನು ಕಾಪಾಡಬೇಕು, ಅಮೆರಿಕ ನಮಗೆ ಮಾಡಿದ್ದು ಮಹಾಮೋಸ’
ಭೂಮಿ ಮೇಲೆ ಅಮೆರಿಕ ಎಲ್ಲೇ ಕಾಲಿಟ್ಟರೂ ಅಲ್ಲಿ ಅಲ್ಲೋಲ ಕಲ್ಲೋಲ ಗ್ಯಾರಂಟಿ. ಇದೇ ರೀತಿ 20 ವರ್ಷದ ಹಿಂದೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ಅಮೆರಿಕದ ಮಿಲಿಟರಿ, ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿದೆ. ಆದ್ರೆ ಈ ಕಷ್ಟದ ಸಂದರ್ಭದಲ್ಲಿ ದಿಢೀರ್ ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವುದು ಅಫ್ಘಾನಿಸ್ತಾನದ ಕಣ್ಣು ಕೆಂಪಾಗುವಂತೆ ಮಾಡಿದೆ. ಇದೇ ಕಾರಣಕ್ಕೆ ಅಫ್ಘಾನಿಸ್ತಾನದ ಅಧ್ಯಕ್ಷರು ರೊಚ್ಚಿಗೆದ್ದು, ಅಮೆರಿಕ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಅಮೆರಿಕ ಹಾಗೂ ನ್ಯಾಟೋ ಪಡೆಗಳು ನಮ್ಮ ಕೈಬಿಟ್ಟು ಹೋಗುತ್ತಿವೆ ಎಂದು ಆರೋಪಿಸಿದ್ದಾರೆ.
Recommended Video
ಇಷ್ಟು ಮಾತ್ರವಲ್ಲ, ಇನ್ನೂ ಹಲವು ಗಂಭೀರ ಆರೋಪ ಮಾಡಿದ್ದಾರೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ. ಅಫ್ಘಾನಿಸ್ತಾನ ನೆಮ್ಮದಿಯಾಗಿತ್ತು, ಅಫ್ಘಾನ್ನಲ್ಲಿ ಭಯೋತ್ಪಾದನೆಯೇ ಇರಲಿಲ್ಲ. ಆದರೆ 2001ರ ದಾಳಿ ಬಳಿಕ ಅಮೆರಿಕ ಮಿಲಿಟರಿ ಇಲ್ಲಿಗೆ ಸುಖಾಸುಮ್ಮನೆ ನುಗ್ಗಿತು. ಇದಾದ ಬಳಿಕ ಅಫ್ಘಾನಿಸ್ತಾನ ಅಕ್ಷರಶಃ ಹಿಂಸೆಯ ಕೂಪದಲ್ಲಿ ನರಳಿದೆ.
ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳು ವಶಕ್ಕೆ ಪಡೆದ ತಾಲಿಬಾನ್
ಈ 20 ವರ್ಷದಲ್ಲಿ ಅಫ್ಘಾನಿಸ್ತಾನ ಇಷ್ಟೊಂದು ಹಿಂಸೆ ಅನುಭವಿಸಲು ಕೆಲವರು ಪ್ರಮುಖ ಕಾರಣ ಎಂದು ಹೇಳುವ ಮೂಲಕ ಅಮೆರಿಕದ ವಿರುದ್ಧ ಕೆಂಡ ಕಾರಿದ್ದಾರೆ ಅಶ್ರಫ್ ಘನಿ. ಅಮೆರಿಕದ ವಿರುದ್ಧ ಕೆಂಡ ಕಾರುವ ಜೊತೆಗೆ ಭಾರತದ ಸಹಾಯವನ್ನೂ ನೆನೆದಿದ್ದಾರೆ ಘನಿ.
ಭಾರತವೇ ನಮ್ಮನ್ನು ಕಾಪಾಡಬೇಕು..!
ಅಮೆರಿಕ ಸಂಪೂರ್ಣ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಇಡೀ ಅಫ್ಘಾನಿಸ್ತಾನ ಬೂದಿ ಮುಚ್ಚಿದ ಕೆಂಡವಾಗಿದೆ. ಒಂದು ಕಡೆ ತಾಲಿಬಾನ್ ಉಗ್ರರು ಮತ್ತೊಂದು ಕಡೆ ನಾಗರಿಕರು ದಂಗೆ ಏಳಬಹುದು ಎಂಬ ಆಂತರಿಕ ವರದಿ. ಇದೆಲ್ಲದರ ಮಧ್ಯೆ ಅಫ್ಘಾನಿಸ್ತಾನ ಅಧ್ಯಕ್ಷ ಘನಿ ನಡುಗಿ ಹೋಗಿದ್ದಾರೆ. ಹೆಂಗಪ್ಪ ನಮ್ಮ ಪರಿಸ್ಥಿತಿ ಎನ್ನುತ್ತಿದೆ ಅಲ್ಲಿನ ಸರ್ಕಾರ. ಆದ್ರೆ ಇದೇ ಹೊತ್ತಲ್ಲೇ ಅಮೆರಿಕ ನಾಯಕರಿಗೆ ಬಿಸಿ ಮುಟ್ಟಿಸಿರುವ ಘನಿ, ನಮ್ಮ ಸಂಕಷ್ಟದಲ್ಲಿ ಭಾರತ ಸಹಾಯ ಮಾಡಿದೆ. ಈಗಿನ ಸ್ಥಿತಿಯಲ್ಲಿ ಆಂತರಿಕ ಭದ್ರತೆ ಕಾಪಾಡಲು ಭಾರತವೂ ಸೇರಿದಂತೆ ಚೀನಾ, ರಷ್ಯಾ, ಇರಾನ್ ಸಹಾಯ ಬೇಕಿದೆ ಎಂದಿದ್ದಾರೆ. ಈ ಮೂಲಕ ಭಾರತ ನಮ್ಮ ಗೆಳೆಯ ಎಂಬ ವಿಚಾರವನ್ನ ಮತ್ತೊಮ್ಮೆ ಮನದಟ್ಟು ಮಾಡಿದೆ. ಅಮೆರಿಕದ ಶತ್ರು ರಾಷ್ಟ್ರಗಳನ್ನೂ ಹೊಗಳಿದ್ದಾರೆ ಘನಿ.
ಸರಿ ಇತ್ತು, ಹಾಳು ಮಾಡಿದ್ರು
ಅಫ್ಘಾನಿಸ್ತಾನ ನೆಮ್ಮದಿಯಾಗಿತ್ತು, ಇಲ್ಲಿ ಎಲ್ಲವೂ ಸರಿ ಇತ್ತು. ಆದರೆ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಬಂದ ಬಳಿಕ ಸಮಸ್ಯೆ ಹೆಚ್ಚಾಯಿತು. ಅಮೆರಿಕ ಹಿಂಸೆ ತಡೆಗಟ್ಟುವ ಕೆಲಸ ಮಾಡಲಿಲ್ಲ. ಈ ವಿಚಾರದಲ್ಲಿ ಆ ದೇಶ ಸೋತು ಹೋಗಿದೆ ಎಂದಿದ್ದಾರೆ ಅಫ್ಘಾನಿಸ್ತಾನದ ಅಧ್ಯಕ್ಷ. ಅವರಿಗೆ ಬೇಕಾದಷ್ಟು ದಿನ ಇದ್ದು, ಕಷ್ಟದ ಸಂದರ್ಭದಲ್ಲೇ ಕೈಕೊಟ್ಟು ಹೋಗುತ್ತಿದ್ದಾರೆ. ಅಮೆರಿಕ ಸೇನೆ ಹೊರ ಹೋಗುವ ವಿಚಾರ ಗೊತ್ತಾಗುತ್ತಿದ್ದಂತೆ ದಾಳಿಗಳು ಹೆಚ್ಚಾಗಿವೆ. ಸುಮಾರು 85ಕ್ಕೂ ಹೆಚ್ಚು ಅಫ್ಘಾನಿಸ್ತಾನಿ ಪ್ರಜೆಗಳು ಕೆಲವೇ ದಿನದಲ್ಲಿ ಪ್ರಾಣಬಿಟ್ಟಿದ್ದಾರೆ. ಈ ಹಿಂಸೆಗೆ ಯಾರು ಹೊಣೆ? ಎಂದು ಪರೋಕ್ಷವಾಗಿ ಅಮೆರಿಕವನ್ನೇ ಪ್ರಶ್ನಿಸಿದ್ದಾರೆ ಅಶ್ರಫ್ ಘನಿ.
ತಾಲಿಬಾನಿ ಉಗ್ರರಿಗೆ ಹೊಸ ನಾಯಕನಾದ ಯಾಕೂಬ್!
ನಾವು, ತಾಲಿಬಾನ್ ಒಂದೇ..!
ಇದೇ ಮೊದಲ ಬಾರಿ ತಾಲಿಬಾನ್ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿರುವ ಅಶ್ರಫ್ ಘನಿ, ತಾಲಿಬಾನ್ ಮತ್ತು ನಾವು ಒಂದೇ ದೇಶದವರು. ಆದರೆ ನಮ್ಮ ನಮ್ಮ ನಡುವೆ ಜಗಳ ಶುರುವಾಗಿದ್ದು, ಇದರ ಲಾಭ ಬೇರೆಯವರು ಪಡೆಯುತ್ತಿದ್ದಾರೆ. ಹೀಗಾಗಿ ನಾವು ಒಂದಾಗಬೇಕಿದೆ ಎಂದು ಮನವಿ ಮಾಡಿದ್ದಾರೆ. ತಾಲಿಬಾನ್ ಮುಖಂಡರು ಶಾಂತಿ ಒಪ್ಪಂದ ಪಾಲಿಸಬೇಕು ಎಂದು ಕೇಳಿಕೊಂಡಿದ್ದಾರೆ ಘನಿ. ಈ ಮೂಲಕ ತಾಲಿಬಾನ್ ಉಗ್ರರ ಜೊತೆಗೆ ಬದುಕುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಅತ್ತ ತಾಲಿಬಾನ್ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ತನ್ನದೇ ದೇಶದ ಪ್ರಜೆಗಳನ್ನ ಬಾಂಬ್ ಬ್ಲ್ಯಾಸ್ಟ್ ಮಾಡುತ್ತಾ, ಗುಂಡು ಹಾರಿಸುತ್ತಾ ಹತ್ಯೆ ಮಾಡುತ್ತಿದೆ.
ಒಂದೊಂದೇ ಹಳ್ಳಿ ಸ್ವಾಹ..!
ತಾಲಿಬಾನ್ ಉಗ್ರರು ಅದೆಷ್ಟು ಕಿರಾತಕರು ಎಂಬುದನ್ನ ಬಿಡಿಸಿ ಹೇಳಬೇಕಾದ ಅಗತ್ಯತೆ ಇಲ್ಲ. ಒಂದು ಕಾಲದ ಸ್ವರ್ಗದಂತಹ ಜಾಗ ಅಫ್ಘಾನಿಸ್ತಾನ ಇಂದು ನರಕವಾಗಿ ಬದಲಾಗಲು ತಾಲಿಬಾನ್ ಗ್ಯಾಂಗ್ ಕಾರಣವಾಯಿತು. ಆದರೆ 20 ವರ್ಷಗಳ ಹಿಂದೆ ಅಮೆರಿಕ ಸೇನೆ ಭಾರಿ ಪ್ರಮಾಣದಲ್ಲಿ ತನ್ನ ಗ್ಯಾಂಗ್ ಕರೆದುಕೊಂಡು ಬಂದಿತ್ತು. ಆ ಬಳಿಕ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿತ್ತು ಎನ್ನಬಹದಾದರೂ ಉಗ್ರರ ದಾಳಿ ನಿಂತಿರಲಿಲ್ಲ. ಈಗ ದಿಢೀರ್ ಅಮೆರಿಕ ಸೇನೆ ಜಾಗ ಖಾಲಿ ಮಾಡುತ್ತಿದ್ದು, ತಾಲಿಬಾನ್ ಕಿರಾತಕರು ಒಂದೊಂದೇ ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಜನರನ್ನ ಮನಸ್ಸಿಗೆ ಬಂದಂತೆ ಹಿಂಸಿಸುತ್ತಿದ್ದಾರೆ.