ಯುದ್ಧ ನಿಂತರೂ ಹೊತ್ತಿ ಉರಿಯುತ್ತಿದೆ ಅರ್ಮೇನಿಯ ರಾಜಧಾನಿ
ಸುಮಾರು 2 ತಿಂಗಳ ಭೀಕರ ಯುದ್ಧ ಕಂಡ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಗಡಿಗಳು ಈಗ ತಾನೆ ನೆಮ್ಮದಿ ಕಾಣುತ್ತಿವೆ. ಆದರೆ ಇಂತಹ ಸಂದಿಗ್ಧ ಸಂದರ್ಭದಲ್ಲೇ ಅರ್ಮೇನಿಯ ಜನ ಪ್ರಧಾನಿಯ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ.
ನಗೊರ್ನೊ-ಕರಬಾಖ್ ಪ್ರದೇಶಗಳಿಗಾಗಿ ನಡೆಯುತ್ತಿದ್ದ ಯುದ್ಧ ನಿಲ್ಲಿಲು ಅರ್ಮೇನಿಯ ಪ್ರಧಾನಿ ನಿಕೋಲ್ ಪಶಿನ್ಯಾನ್ ಮಾಡಿಕೊಂಡ ಕದನ ವಿರಾಮ ಒಪ್ಪಂದ ಅವರ ಖುರ್ಚಿಗೆ ಕುತ್ತು ತಂದಿದೆ. ನಿಕೋಲ್ ಪಶಿನ್ಯಾನ್ ಮಾಡಿಕೊಂಡ ಒಪ್ಪಂದದಿಂದ ಅರ್ಮೇನಿಯ ಹಿನ್ನಡೆ ಅನುಭವಿಸಿದೆ, ಇದು ಆಡಳಿತ ಪಕ್ಷದ ದೌರ್ಬಲ್ಯವನ್ನು ಬಿಂಬಿಸುತ್ತಿದೆ ಎಂದು ಆರೋಪಿಸಿ ಹೋರಾಟ ನಡೆಸಲಾಗುತ್ತಿದೆ.
ಅಂತೂ, ಇಂತೂ ಯುದ್ಧ ಅಂತ್ಯಗೊಳಿಸಿದ ಮೊಂಡರು..!
ಸಾವಿರಾರು ಜನ ಬೀದಿಗಿಳಿದು ಪ್ರಧಾನಿ ನಿಕೋಲ್ ಪಶಿನ್ಯಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸುಮಾರು 2 ತಿಂಗಳ ಕಾಲ ನಿರಂತರವಾಗಿ ಕಚ್ಚಾಡಿದ್ದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಿನ್ನೆ ತಾನೆ ಶಾಂತಿ ಮಂತ್ರ ಜಪಿಸಿದ್ದವು.
'ದೊಡ್ಡಣ್ಣ'ನ ಮಾತಿಗೂ ಕೇರ್ ಮಾಡಲಿಲ್ಲ ಈ ಮೊಂಡರು..!
ರಷ್ಯಾ ನೇತೃತ್ವದಲ್ಲಿ ಎರಡೂ ರಾಷ್ಟ್ರಗಳು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇನ್ನೇನು ಅಲ್ಲಿ ಪರಿಸ್ಥಿತಿ ತಣ್ಣಗಾಯಿತು ಎಂದು ನಿಟ್ಟುಸಿರು ಬಿಡುವ ಸಂದರ್ಭದಲ್ಲೇ ಆಂತರಿಕ ಕಚ್ಚಾಟ ಶುರುವಾಗಿದೆ. ಜನ ಸರ್ಕಾರದ ವಿರುದ್ಧವೇ ಬೀದಿಗಿಳಿದು ಹೋರಾಟ ನಡೆಸುವಂತಾಗಿದೆ. ಹೀಗಾಗಿ ಅರ್ಮೇನಿಯ ರಾಜಧಾನಿ 'ಯೆರೆವಾನ್' ಅಕ್ಷರಶಃ ರಣರಂಗವಾಗಿ ಬದಲಾಗಿದೆ. ಹಿಂಸಾಚಾರ ಭುಗಿಲೆದ್ದಿದ್ದು, ಸೈನಿಕರು ಪರದಾಡುತ್ತಿದ್ದಾರೆ.
ಅರ್ಮೇನಿಯ ಒಳನುಗ್ಗಿದ ರಷ್ಯಾ ಸೇನೆ..!
ಈ ಹಿಂದೆಯೇ ರಷ್ಯಾ ಸೇನೆ ಕಾರ್ಯಾಚರಣೆ ಬಗ್ಗೆ ಹಿಂಟ್ ಸಿಕ್ಕಿತ್ತು. ತನ್ನ ಮಾತನ್ನು ಕೇಳದ ಅರ್ಮೇನಿಯ ಮತ್ತು ಅಜೆರ್ಬೈಜಾನ್ಗೆ ಪಾಠ ಕಲಿಸಲು ರಷ್ಯಾ ಪ್ಲಾನ್ ಮಾಡಿತ್ತು. ಈ ಪ್ಲಾನ್ ಪ್ರಕಾರ ರಷ್ಯಾ ಸೇನೆ ಇದೀಗ ಅರ್ಮೇನಿಯ ಒಳಗೆ ನುಗ್ಗಿದೆ.
ಅರ್ಮೇನಿಯ ಪರಿಸ್ಥಿತಿ ಹತೋಟಿಗೆ ತರುವ ನೆಪದಲ್ಲಿ ಅರ್ಮೇನಿಯದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ. ಅಷ್ಟಕ್ಕೂ 3 ದಶಕಗಳ ಹಿಂದೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ರಷ್ಯಾ ಭಾಗವಾಗಿದ್ದ ದೇಶಗಳು. ಸೋವಿಯತ್ ಒಕ್ಕೂಟದ ಪ್ರಾಂತ್ಯಗಳಾಗಿದ್ದ ಅರ್ಮೇನಿಯ-ಅಜೆರ್ಬೈಜಾನ್ ಸೋವಿಯತ್ ವಿಭಜನೆ ಬಳಿಕ ಬೇರೆ ಬೇರೆ ದೇಶಗಳಾದವು. ಹೀಗಾಗಿ ರಷ್ಯಾ ಈ ಎರಡೂ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದೆ ಎಂಬುದು ವಿರೋಧಿಗಳ ಆರೋಪವಾಗಿದೆ.
ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು.
ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು. ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.
ರಷ್ಯಾ ಮಾತಿಗೆ ಒಪ್ಪಿದ್ದೇ ಆಶ್ಚರ್ಯ..!
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಧ್ಯೆ ಯುದ್ಧ ಆರಂಭವಾದ ದಿನದಿಂದಲೇ ವಿಶ್ವದ ಹಲವು ದೇಶಗಳ ನಾಯಕರು ಶಾಂತಿ ಮಾತುಕತೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ರಷ್ಯಾ ಜೊತೆ ನಡೆದ ಮಾತುಕತೆಗೆ ಬೆಲೆ ಕೊಟ್ಟು ಯುದ್ಧ ನಿಲ್ಲಿಸುತ್ತಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿರಬಹುದು. ಆದರೆ ತಿಂಗಳ ಹಿಂದೆಯೂ ಇದೇ ರೀತಿ ಶಾಂತಿ ಒಪ್ಪಂದ ನಡೆದಿತ್ತು.
ಖದ್ದು ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಉನ್ನತ ಮಟ್ಟದ ಸಭೆ ನಡೆದು ಯುದ್ಧ ನಿಲ್ಲಿಸಲು ಒಪ್ಪಿಸಿದ್ದರು. ಆದರೆ ಹೀಗೆ ಶಾಂತಿ ಮಾತುಕತೆ ನಡೆದು 1 ದಿನ ಕಳೆಯುವ ಒಳಗೆ ಎರಡೂ ರಾಷ್ಟ್ರಗಳು ಮತ್ತೆ ಕಿತ್ತಾಡಿದ್ದವು. ಭೀಕರವಾದ ದಾಳಿ, ಪ್ರತಿದಾಳಿಯೂ ನಡೆದಿತ್ತು. ಈಗ ಮತ್ತೆ ರಷ್ಯಾ ನೇತೃತ್ವದಲ್ಲೇ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಕದನ ವಿರಾಮಕ್ಕೆ ಒಪ್ಪಿದ್ದು, ದಿಢೀರ್ ಯುದ್ಧ ಸ್ಫೋಟಿಸುವ ಸಾಧ್ಯತೆ ಇದೆ.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ಸಾವಿರಾರು ಅಮಾಯಕ ಜೀವಗಳು ಬಲಿಯಾಗಿವೆ.
ಡಿಸೆಂಬರ್ ವೇಳೆಗೆ ಅಸಹನೀಯ ಚಳಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ. ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.