ರಷ್ಯಾ ನಿರೀಕ್ಷೆ ಹುಸಿ, ಅಮೆರಿಕ ಕಡೆ ವಾಲಿದ ಅರ್ಮೇನಿಯ
ಅರ್ಮೇನಿಯ-ಅಜೆರ್ಬೈಜಾನ್ ವಿಚಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ನಿರೀಕ್ಷೆ ಹುಸಿಯಾಗಿದೆ. ಈ ಹಿಂದೆ ತಮ್ಮದೇ ದೇಶದ ಭಾಗವಾಗಿದ್ದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ರಷ್ಯಾ ಮಾತಿಗೆ ಬೆಲೆ ಕೊಟ್ಟು, ಯುದ್ಧ ನಿಲ್ಲಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿತ್ತು. ಇದರ ಬೆನ್ನಲ್ಲೇ ಅರ್ಮೇನಿಯದ ವಿದೇಶಾಂಗ ಸಚಿವ ಅಮೆರಿಕದ ಶಕ್ತಿಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಯುದ್ಧ ನಿಲ್ಲಿಸುವ ಕುರಿತು ಅಮೆರಿಕದ ಸಹಾಯವನ್ನೂ ಅರ್ಮೇನಿಯ ವಿದೇಶಾಂಗ ಸಚಿವ ಯಾಚಿಸಿದ್ದು, ರಷ್ಯಾದ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಇನ್ನು ತಮ್ಮ ಬಳಿ ಬಂದ ಅರ್ಮೇನಿಯದ ಜನಪ್ರತಿನಿಧಿಗೆ ಮೈಕ್ ಪಾಂಪಿಯೋ ಶಾಂತಿ ಪಾಠ ಬೋಧಿಸಿದ್ದಾರೆ. ಯುದ್ಧ ನಿಲ್ಲಿಸಲು ಅರ್ಮೇನಿಯ-ಅಜೆರ್ಬೈಜಾನ್ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದಿದ್ದಾರೆ. ಈಗಾಗಲೇ 2 ತಿಂಗಳಿಗೂ ಹೆಚ್ಚು ಸಮಯದಿಂದ ಅರ್ಮೇನಿಯ-ಅಜೆರ್ಬೈಜಾನ್ ನಡುವೆ ಘೋರ ಯುದ್ಧ ನಡೆಯುತ್ತಿದೆ.
ಸಾವಿರಾರು ಜನ ಯುದ್ಧದಲ್ಲಿ ಮಡಿದಿದ್ದು, ಲಕ್ಷ ಲಕ್ಷ ನಿರಾಶ್ರಿತರು ಬೀದಿಗೆ ಬಿದ್ದು ಪರದಾಡುತ್ತಿದ್ದಾರೆ. ಪರಿಸ್ಥಿತಿ ಇಷ್ಟು ಘೋರವಾಗಿದ್ದರೂ ಅರ್ಮೇನಿಯ-ಅಜೆರ್ಬೈಜಾನ್ ನಾಯಕರು ಯುದ್ಧ ನಿಲ್ಲಿಸಲು ಸಿದ್ಧವಾಗಿಲ್ಲ. ಕೆಲ ವಾರಗಳಿಂದ ಪದೇಪದೆ ಕದನ ವಿರಾಮ ಉಲ್ಲಂಘನೆಯಾಗಿ, ಯುದ್ಧ ಮುಂದುವರಿದಿದೆ.
ರಷ್ಯಾ ಹೇಳಿದರೂ ಯುದ್ಧ ನಿಲ್ಲಲಿಲ್ಲ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ರಷ್ಯಾ ಒಂದು ಸುತ್ತಿನ ಶಾಂತಿ ಮಾತುಕತೆ ನಡೆಸಿತ್ತು. ಖುದ್ದು ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ನಿಲ್ಲಿಸಲು ಅಖಾಡ ಪ್ರವೇಶ ಮಾಡಿದ್ದರು. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿದ್ದವು. ಆದರೆ ಹೀಗೆ ಕದನ ವಿರಾಮಕ್ಕೆ ಒಪ್ಪಿದ ಕೆಲವೇ ಗಂಟೆಗಳ ಅಂತರದಲ್ಲಿ ಮತ್ತೆ ದಾಳಿ, ಪ್ರತಿದಾಳಿ ನಡೆದಿತ್ತು. ಹೀಗಾಗಿ ರಷ್ಯಾ ನಡೆಸಿದ ಸಂಧಾನ ವಿಫಲವಾಗಿದೆ. ಈಗಲೂ ಎರಡೂ ದೇಶಗಳ ಮಧ್ಯೆ ಗುಂಡಿನ ಕಾಳಗ ನಡೆಯುತ್ತಿದ್ದು, ಸಣ್ಣ ಸಣ್ಣ ಮಕ್ಕಳ ಜೊತೆ ಕುಟುಂಬಗಳು ಅಲ್ಲಿಂದ ಗುಳೆ ಹೊರಟಿವೆ. ಗುಳೆ ಹೊರಡುವವರ ಮೇಲೂ ಅಟ್ಯಾಕ್ ನಡೆಯುತ್ತಿದೆ.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯದ ವರದಿಗಳ ಪ್ರಕಾರ ಈಗಾಗಲೇ 100ಕ್ಕೂ ಹೆಚ್ಚು ನಾಗರಿಕರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ
ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.
ಮುನ್ನುಗ್ಗಿ ಬರಲಿದೆಯಾ ರಷ್ಯಾ ಮಿಲಿಟರಿ..?
ರಷ್ಯಾ ನಡೆಸಿರುವ ಸಂಧಾನಕ್ಕೆ ಎರಡೂ ದೇಶಗಳು ಬೆಲೆ ನೀಡಿಲ್ಲ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಮಿಲಿಟರಿ ಕಾರ್ಯಾಚರಣೆ ನಡೆಸಲಿದ್ದಾರಾ ಎಂಬ ಕುತೂಹಲ ಇಡೀ ಜಗತ್ತನ್ನು ಕಾಡುತ್ತಿದೆ. ದಂಡಂ ದಶಗುಣಂ ಎನ್ನುವ ಹಾಗೆ, ಮಾತಿಗೆ ಬಗ್ಗದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ಗೆ ಬಂದೂಕಿನ ಮೂಲಕ ಉತ್ತರ ನೀಡುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಪುಟಿನ್ ಸೇನೆ ಅಖಾಡ ಪ್ರವೇಶಕ್ಕೆ ಇದೀಗ ಸನ್ನಿವೇಶ ಸಿದ್ಧವಾಗಿದೆ.
ಸೋವಿಯತ್ ರಷ್ಯಾ ಭಾಗವಾಗಿದ್ದ ಅರ್ಮೇನಿಯ ಮತ್ತು ಅಜೆರ್ಬೈಜಾನ್
ಏಕೆಂದರೆ ಹಿಂದೆ ಸೋವಿಯತ್ ರಷ್ಯಾ ಭಾಗವಾಗಿದ್ದ ಅರ್ಮೇನಿಯ ಮತ್ತು ಅಜೆರ್ಬೈಜಾನ್ ತವರು ದೇಶದ ಮಾತನ್ನೇ ಕೇಳಲು ಸಿದ್ಧವಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಅರ್ಮೇನಿಯ ವಿದೇಶಾಂಗ ಸಚಿವ ಅಮೆರಿಕದ ಸಹಾಯ ಬೇಡಿದ್ದಾರೆ. ಇದು ರಷ್ಯಾ ಸರ್ಕಾರವನ್ನು ರೊಚ್ಚಿಗೆಬ್ಬಿಸಿದೆ. ಅಕಸ್ಮಾತ್ ರಷ್ಯಾ ಸೇನೆ ಅಖಾಡಕ್ಕೆ ಇಳಿದರೆ ಅರ್ಮೇನಿಯ ಮತ್ತು ಅಜೆರ್ಬೈಜಾನ್ ನಕ್ಷೆಯಿಂದಲೇ ಅಳಿಸಿ ಹೋಗುವುದು ಪಕ್ಕಾ.