ಮುಗ್ಧರ ಬಲಿ ಪಡೆದ ಯುದ್ಧ, ಮೆಹದಿ -ಮೆಲೆಕ್ ದುರಂತ ಪ್ರೇಮ
ಯಾರದ್ದೋ ಯುದ್ಧ ದಾಹಕ್ಕೆ ಇನ್ಯಾರೋ ಬಲಿಯಾಗುತ್ತಾರೆ. ಯುದ್ಧ ಬರೀ ಜೀವಗಳನ್ನು ಮಾತ್ರ ಬಲಿ ಪಡೆಯುವುದಿಲ್ಲ. ಶಾಂತಿ, ನೆಮ್ಮದಿ ಜೊತೆಗೆ ಪ್ರೇಮಿಗಳನ್ನೂ ಬಲಿಪಡೆಯುತ್ತದೆ ಯುದ್ಧ. ಹೀಗೆ ಜಗತ್ತಿನಲ್ಲಿ ನಡೆದ ಅದೆಷ್ಟೋ ಯುದ್ಧಗಳು ಲೆಕ್ಕವಿಲ್ಲದ ಪ್ರೇಮಿಗಳನ್ನು ಅಳಿಸಿ ಹಾಕಿವೆ. ಹೀಗೆ ಇತ್ತೀಚೆಗೆ ಕದನ ವಿರಾಮ ಒಪ್ಪಂದದ ಮೂಲಕ ಕೊನೆಗೊಂಡ ಅರ್ಮೇನಿಯ-ಅಜೆರ್ಬೈಜಾನ್ ಯುದ್ಧ ಕೂಡ ಪ್ರೇಮಿಗಳನ್ನ ಕೊಂದಿದೆ. ಅಂದಹಾಗೆ ಅಜೆರ್ಬೈಜಾನ್ ಪರವಾಗಿ ಯುದ್ಧಭೂಮಿಗೆ ಎಂಟ್ರಿ ಕೊಟ್ಟಿದ್ದ 25 ವರ್ಷ ವಯಸ್ಸಿನ ಮೆಹದಿ ಮಮಡೋವ್ ಎಂಬಾತನೇ ಈ ಸ್ಟೋರಿಯ ದುರಂತ ನಾಯಕ.
ಹಾಗೂ ಈ ಕತೆಯ ದುರಂತ ನಾಯಕಿಯ ಹೆಸರು ಮೆಲೆಕ್, ಅವಳಿಗಿನ್ನೂ 17 ವರ್ಷ ವಯಸ್ಸು. ಮೆಹದಿ-ಮೆಲೆಕ್ದು ನಿರ್ಮಲ ಪ್ರೀತಿ, ಪದಗಳಲ್ಲಿ ವರ್ಣಿಸಲಾಗದ ಅನುಬಂಧ. ಹೀಗಿರುವಾಗಲೇ ಇಬ್ಬರೂ ಮದುವೆಗೆ ಕೂಡ ಪ್ಲಾನ್ ಮಾಡಿರುತ್ತಾರೆ. ಇನ್ನೇನು ಜೀವನ ಹಾಲು ಜೇನಿನಂತೆ ಒಂದಾಗಲಿದೆ ಎನ್ನುವಾಗಲೇ ನಗೊರ್ನೊ-ಕರಬಾಖ್ ಪ್ರದೇಶಕ್ಕಾಗಿ ಯುದ್ಧ ಆರಂಭವಾಗಿತ್ತು. ನೋಡ ನೋಡುತ್ತಿದ್ದಂತೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಸೇನೆಗಳು ರೊಚ್ಚಿಗೆಬಿದ್ದು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದವು. ಅಪಾರ ದೇಶಾಭಿಮಾನ ಇದ್ದ ಮೆಹದಿ ಮಮಡೋವ್ ಅಜೆರ್ಬೈಜಾನ್ ಪರ ಹೋರಾಡಲು ಯುದ್ಧಕ್ಕೆ ಹೊರಡುತ್ತಾನೆ. ಆದರೆ ಹೀಗೆ ಹೋದವ ಮತ್ತೆ ವಾಪಸ್ ಬಂದಿದ್ದು ಹೆಣವಾಗಿ.
ಯೋಧನ ಸಾವು, ಪ್ರೇಯಸಿ ಆತ್ಮಹತ್ಯೆ
ಇನ್ನೇನು ಯುದ್ಧ ನಿಂತು ಹೋಗುತ್ತೆ. ಇವತ್ತು ಕೊನೆಯಾಗುತ್ತೆ, ಯುದ್ಧಕ್ಕೆ ನಾಳೆ ಅಂತಿಮ ಮುದ್ರೆ ಬೀಳುತ್ತೆ ಅಂತಾ ನೂರಾರು ಕನಸು ಹೊತ್ತಿದ್ದಳು 17 ವರ್ಷ ವಯಸ್ಸಿನ ಮೆಲೆಕ್. ಆದರೆ ಅಲ್ಲಿ ನಡೆದಿದ್ದೇ ಬೇರೆ, ಯುದ್ಧ ಆರಂಭವಾದ ಕೆಲವು ದಿನಗಳ ಕಾಲ ಮಗ ಮೆಹದಿ ಮಮಡೋವ್ ಅಮ್ಮನಿಗೆ ಪತ್ರ ಬರೆಯುತ್ತಿರುತ್ತಾನೆ. ಆದರೆ ಕೆಲವು ವಾರಗಳಿಂದ ಪತ್ರವೇ ಬಂದಿರುವುದಿಲ್ಲ. ಕಡೆಗೆ ಮೆಹದಿ ಮಮಡೋವ್ ಬಗ್ಗೆ ವಿಚಾರಿಸಿದಾಗ ಆತ ಯುದ್ಧದಲ್ಲಿ ಶತ್ರುಗಳ ಗುಂಡಿಗೆ ಬಲಿಯಾಗಿರುವುದು ತಿಳಿದುಬಂದಿದೆ. ತನ್ನ ಪ್ರಿಯತಮನ ಸಾವಿನ ಸುದ್ದಿ ಕೇಳಿದ ಮೆಲೆಕ್ ತತ್ತರಿಸಿ ಹೋಗಿದ್ದಳು. ಜೀವನವೇ ಆಕೆಗೆ ಅರಿಯದಾಗಿ, ಜೀವವೇ ಭಾರವಾಗಿತ್ತು. ಹೀಗೆ ತನ್ನ ಪ್ರಿಯಕರ ಇಲ್ಲದ ಈ ಜಗತ್ತು ತನಗೂ ಬೇಡ ಎಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಅಮರ ಪ್ರೇಮಿ ಮೆಲೆಕ್.
ತಮ್ಮ ಮನೆಗೆ ಬೆಂಕಿ ಹಚ್ಚುತ್ತಿರುವ ಜನ, ಕಾರಣ ಮಾತ್ರ ಕರುಣಾಜನಕ
ಇಬ್ಬರ ಪ್ರೀತಿ ಮನೆಯವರಿಗೆ ಗೊತ್ತಿರಲಿಲ್ಲ
ಮೆಹದಿ ಮಮಡೋವ್, ಮೆಲೆಕ್ ಪ್ರೀತಿ ಮಾಡುತ್ತಿರುವ ವಿಚಾರ ಇಬ್ಬರ ಮನೆಯವರಿಗೂ ಗೊತ್ತಿರಲಿಲ್ಲ. ಈ ವಿಚಾರ ಅವರಿಗೆಲ್ಲಾ ತಿಳಿದಿದ್ದೇ ಯೋಧ ಮೆಹದಿ ಶವ ತವರಿಗೆ ಬಂದಾಗ. ತನ್ನ ಪ್ರಿಯಕರನ ದೇಹದ ಎದುರು ಮೆಲೆಕ್ ಬಿಕ್ಕಳಿಸುತ್ತಾ ಕೂತಾಗ. ಆದರೆ ಎಲ್ಲರೂ ಅಸಹಾಯಕ ಪರಿಸ್ಥಿತಿಯಲ್ಲಿದ್ದರು. ಮೆಹದಿ ಮಮಡೋವ್ ಮರಳಿ ಬರಲು ಸಾಧ್ಯ ಇರಲಿಲ್ಲ, ಮೆಲೆಕ್ ದುಖಃಕ್ಕೆ ಎಲ್ಲೆ ಇರಲಿಲ್ಲ. ಹೀಗೆ ಮೆಹದಿ ಅಂತ್ಯಸಂಸ್ಕಾರ ಮುಗಿದ ಕೆಲವೇ ಕ್ಷಣಗಳಲ್ಲಿ ಮೆಲೆಕ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೆಹದಿ ಸಾವಿನಿಂದ ಶಾಕ್ಗೆ ಒಳಗಾಗಿದ್ದ ಮೆಲೆಕ್, ಮನೆಯವರು ಮೆಹದಿ ಶವದ ಎದುರು ರೋಧಿಸುವಾಗ ಜೀವ ಕಳೆದುಕೊಂಡಿದ್ದಾಳೆ.
ಸಮಾಧಿ ಬಳಿಯೂ ಒಂದಾದ ಪ್ರೇಮಿಗಳು
ಯೋಧ ಮೆಹದಿಯ ಅಂತ್ಯಸಂಸ್ಕಾರ ಮಾಡಿದ್ದ ಕಂಗಳಲ್ಲಿ ಕಂಬನಿ ಒದ್ದೆಯಾಗಿರುವಾಗಲೇ ಮೆಲೆಕ್ ಸಾವು ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಎರಡೂ ಕುಟುಂಬಗಳು ಕಂಗಾಲಾಗಿ ಹೋಗಿದ್ದಾರೆ. ಮೆಲೆಕ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ದಾರಿ ಕಾಣದವರಂತೆ ತತ್ತರಿಸಿದ್ದ ಮೆಹದಿ ಹಾಗೂ ಮೆಲೆಕ್ ಕುಟಂಬಸ್ಥರು, ಕಡೆಗೆ ಮೆಹದಿ ಚಿರನಿದ್ರೆಗೆ ಜಾರಿದ ಜಾಗದ ಪಕ್ಕದಲ್ಲೇ ಮೆಲೆಕ್ ಸಮಾಧಿ ಮಾಡಿದ್ದಾರೆ. ಹೀಗೆ ಅಮರ ಪ್ರೇಮಿಗಳು ಸಾವಿನಲ್ಲಿ ಮಾತ್ರ ಒಂದಾಗಲಿಲ್ಲ. ಸಮಾಧಿ ಜಾಗದಲ್ಲೂ ಒಂದಾಗಿದ್ದಾರೆ. ನೋಡಲು ಈ ಯುದ್ಧ ಸಣ್ಣದೆಂದು ಭಾವಿಸಿದರೂ ಅರ್ಮೇನಿಯ-ಅಜೆರ್ಬೈಜಾನ್ ಯುದ್ಧದಲ್ಲಿ ಸಾವಿರಾರು ಯೋಧರು ಹಾಗೂ ಸಾಮಾನ್ಯರು ಬಲಿಯಾಗಿದ್ದಾರೆ. ಲಕ್ಷಾಂತರ ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ಯುದ್ಧ ನಿಂತರೂ ಹೊತ್ತಿ ಉರಿಯುತ್ತಿದೆ ಅರ್ಮೇನಿಯ ರಾಜಧಾನಿ
ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು. ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು. ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.
ಸಾವಿರಾರು ಅಮಾಯಕರನ್ನು ಕೊಂದು ಹಾಕಿದ ಸರ್ವಾಧಿಕಾರಿಗಳು
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ಸಾವಿರಾರು ಅಮಾಯಕ ಜೀವಗಳು ಬಲಿಯಾಗಿವೆ.