ದೆಹಲಿಯಲ್ಲಿ ದಟ್ಟ ಹೊಗೆ: ಎರಡು ದಿನ ಲಾಕ್ಡೌನ್ ಮಾಡ್ತೀರಾ ಎಂದ ನ್ಯಾಯಾಲಯ
ನವದೆಹಲಿ, ನವೆಂಬರ್ 13: "ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದು ನಿಮಗೆ ಗೊತ್ತಿದೆಯೇ. ಜನರು ಈಗ ಮನೆಗಳಲ್ಲಿ ಇದ್ದರೂ ಮಾಸ್ಕ್ ಧರಿಸುವಂತಾ ದುಸ್ಥಿತಿ ನಿರ್ಮಾಣವಾಗಿದೆ," ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ.
ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಹೊಗೆ ಆವರಿಸಿ ಒಂದು ವಾರವೇ ಕಳೆದಿದೆ. ಕೇಂದ್ರ ಸರ್ಕಾರ ವಾಯು ಗುಣಮಟ್ಟ ಸೂಚ್ಯಂಕವನ್ನು ನಿಯಂತ್ರಿಸುವುದಕ್ಕೆ ದೀರ್ಘಾವಧಿ ಕ್ರಮಗಳಿಗೂ ಮೊದಲು ತುರ್ತು ಕ್ರಮ ಕೈಗೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಸೂಚನೆ ನೀಡಿದೆ.
ಉಸಿರಾಡಿದರೆ ಎಚ್ಚರ: ದೆಹಲಿಯಲ್ಲಿ ಆಪಾಯಕಾರಿ ಮಟ್ಟಕ್ಕೆ ತಲುಪಿದ ಗಾಳಿ!
ವಾಯು ಗುಣಮಟ್ಟವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಬಗ್ಗೆ ಸೋಮವಾರದೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾ. ಎನ್ ವಿ ರಮಣ ನೇತೃತ್ವದ ಪೀಠ ಸೂಚಿಸಿದೆ. "ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ನೀವು ಹೇಗೆ ಯೋಜಿಸುತ್ತೀರಿ ಎಂದು ನಮಗೆ ತಿಳಿಸಿ? ಎರಡು ದಿನಗಳ ಲಾಕ್ಡೌನ್? AQI (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಯೋಜನೆ ಏನು?," ಎಂದು ಕೋರ್ಟ್ ಪ್ರಶ್ನಿಸಿದೆ.
ಶನಿವಾರ ಕೇಂದ್ರ ಮತ್ತು ರಾಜ್ಯಗಳ ತುರ್ತು ಸಭೆ
ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಶನಿವಾರವೇ ತುರ್ತು ಸಭೆ ನಡೆಯಲಿದೆ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ನ್ಯಾಯಮೂರ್ತಿಗಳು, "ಕೇಂದ್ರ ಅಥಾವ ರಾಜ್ಯ ಸರ್ಕಾರಗಳು ಎಂಬ ಮಿತಿ ಹಾಗೂ ಜವಾಬ್ದಾರಿಯನ್ನು ಮೀರಿ ಸಮಸ್ಯೆಯನ್ನು ನೋಡಿ. ಮುಂದಿನ 2-3 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಯಾವುದಾದರೂ ಕ್ರಮ ತೆಗೆದುಕೊಳ್ಳಬೇಕು," ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಜನರಿಗೆ ಮನೆಗಳಿಂದ ಹೊರ ಬಾರದಂತೆ ಸಲಹೆ
ದೆಹಲಿಯಲ್ಲಿ ಗಾಳಿಯನ್ನು ಉಸಿರಾಡುವುದು "ದಿನಕ್ಕೆ 20 ಸಿಗರೇಟ್ ಸೇದಿದಂತೆ, ಪರಿಸ್ಥಿತಿಯ ಗಂಭೀರತೆಯನ್ನು ನಾವು ಅರಿತುಕೊಂಡಿದ್ದೇವೆ," ಎಂದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರದಂದು ಈ ಋತುವಿನಲ್ಲೇ ಅತ್ಯಂತ ಕೆಟ್ಟ ವಾಯು ಗುಣಮಟ್ಟವನ್ನು ದಾಖಲಿಸಿದ್ದು, ಜನರು ಮನೆಗಳಿಂದ ಅನಗತ್ಯವಾಗಿ ಹೊರಗೆ ಬಾರದಂತೆ ಕೇಂದ್ರೀಯ ಮಾಲಿನ್ಯದ ವಾಚ್ಡಾಗ್ ಸಲಹೆ ನೀಡಿದೆ.
ಪಂಜಾಬ್ ಕಡೆಗೆ ಬೆರಳು ತೋರಿಸಿದ ಕೇಂದ್ರ ಸರ್ಕಾರ
ವಾಯುಮಾಲಿನ್ಯದ ಹೆಚ್ಚಳದ ನಡುವೆ ಹುಲ್ಲು ಸುಡುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್ ಎದುರು ತಿಳಿಸಿದೆ. ಇದೇ ವೇಳೆ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದಕ್ಕೆ ಪಂಜಾಬ್ನಲ್ಲಿ ಬೆಳೆಗಳನ್ನು ಸುಡುತ್ತಿರುವುದೇ ಕಾರಣ ಎಂದು ಹೇಳಿದೆ. "ನಾವು ಹುಲ್ಲು ಸುಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ ಕಳೆದ ಐದಾರು ದಿನಗಳಲ್ಲಿ ಪಂಜಾಬ್ನಲ್ಲಿ ಉರಿಯುತ್ತಿರುವ ಹುಲ್ಲು ಕಡ್ಡಿಗಳ ಕಾರಣದಿಂದ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯ ಸರ್ಕಾರವು ಇದಕ್ಕೆ ಕಡಿವಾಣ ಹಾಕಬೇಕಿದೆ," ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರೈತರ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದ ಕೋರ್ಟ್
ಕೇಂದ್ರ ಸರ್ಕಾರದ ವಾದಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಪ್ರತಿಕ್ರಿಯೆ ನೀಡಿದರು. "ದೆಹಲಿಯಲ್ಲಿ ರೈತರಿಂದಲೇ ವಾಯು ಮಾಲಿನ್ಯ ಆಗುತ್ತಿದೆ ಎಂಬು ಏಕೆ ಬಿಂಬಿಸಲು ಹೊರಟಿದ್ದೀರಿ. ಇದು ವಾಯಮಾಲಿನ್ಯದ ಒಂದು ಶೇಕಡಾವಾರು ಪ್ರಮಾಣವಷ್ಟೇ ಆಗಿದೆ. ಉಳಿದವರ ಬಗ್ಗೆ ಏನು ಹೇಳುತ್ತೀರಿ. ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸುವುದಕ್ಕೆ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ. ನಿಮ್ಮ ಯೋಜನೆ ಏನು ಎಂಬುದನ್ನು ನೀವು ಮೊದಲು ನಮಗೆ ತಿಳಿಸಿರಿ, ಇದು ಕೇವಲ 2 ರಿಂದ 3 ದಿನಗಳ ಹಿಂದಿನ ಕಥೆಯಲ್ಲ," ಎಂದು ನ್ಯಾಯಮೂರ್ತಿಗಳು ಹೇಳಿದರು.
ರೈತರಿಗೆ ಪ್ರೋತ್ಸಾಹಧನ ಸಿಗದಿದ್ದರೆ ಬದಲಾವಣೆ ಅಸಂಭವ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಗಮನಸೆಳೆದರು. ಸಬ್ಸಿಡಿಯ ಹೊರತಾಗಿಯೂ, ಅನೇಕ ರೈತರಿಗೆ ಹುಲ್ಲು ಸುಡುವ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯ ಗಮನಿಸಿತು.
"ಎಲ್ಲದಕ್ಕೂ ರೈತರ ಮೇಲೆ ಬೊಟ್ಟು ಮಾಡಿ ತೋರಿಸುವುದು ಪ್ರತಿಯೊಬ್ಬರಿಗೂ ಫ್ಯಾಶನ್ ಆಗುತ್ತಿದೆ. ನೀವು ಪಟಾಕಿಯನ್ನು ನಿಷೇಧಿಸಿದ್ದೀರಿ, ಆದರೆ ಕಳೆದ 5-6 ದಿನಗಳಿಂದ ಏನಾಗುತ್ತಿದೆ" ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದರು.
ರೈತರ ವಿರುದ್ಧ ನಾವು ಆಪಾದಿಸುತ್ತಿಲ್ಲ ಎಂದು ವಾದ
"ನಾವು ರೈತರನ್ನು ಮಾತ್ರ ಹೇಳುತ್ತಿಲ್ಲ, ನಾವು ಅದನ್ನು ಎಂದಿಗೂ ಹೇಳಿಲ್ಲ," ಎಂದು ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟಪಡಿಸಿದರು. "ನಾವು ಧೂಳು ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ರಾಜ್ಯ ಸರ್ಕಾರಗಳಿಗೂ ಈ ವಿಷಯದಲ್ಲಿ ಜವಾಬ್ದಾರಿಯಿದೆ. ಇದು ಹಂಚಿಕೆಯ ಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರಗಳು ಸೋಮವಾರ ಅಫಿಡವಿಟ್ ಸಲ್ಲಿಸಲು ನಾನು ವಿನಂತಿಸುತ್ತೇನೆ," ಎಂದರು.
ಸಾಲಿಸಿಟರ್ ಜನರಲ್ ಉತ್ತರಿಸಿದ ನಂತರ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಾಧೀಶರು, "ನಾನು ಶೇಕಡಾವಾರು ಎಷ್ಟು ಪ್ರಮಾಣ ಎಂದು ಹೇಳಲು ಬಯಸುವುದಿಲ್ಲ. ಆದರೆ ಬೆಳೆ ಸುಡುವುದು ಒಂದು ಪ್ರಮಾಣವಾದರೆ, ಉಳಿದ ಧೂಳು ಮತ್ತು ದೆಹಲಿಯಲ್ಲಿ ವಾಹನಗಳಿಂದ ಹೆಚ್ಚು ವಾಯು ಮಾಲಿನ್ಯವಾಗುತ್ತಿದೆ ಎಂದರು.
ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟ
ಶುಕ್ರವಾರದ ಹೊತ್ತಿಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ಮಟ್ಟದಿಂದ ಸುಧಾರಿಸಿದಂತೆ ಗೋಚರಿಸಿತು. ರಾಷ್ಟ್ರ ರಾಜಧಾನಿಯನ್ನು ಆವರಿಸಿರುವ ಹೊಗೆ ಮತ್ತು ಮಬ್ಬಿನ ದಟ್ಟವಾದ ಪದರದಿಂದ ಜನರು ಜಾಗೃತರಾದರು. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಪ್ರಕಾರ ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 390 ಆಗಿತ್ತು. ಸಂಜೆ 4 ರ ಹೊತ್ತಿಗೆ ದೆಹಲಿಯಲ್ಲಿ 24-ಗಂಟೆಗಳ ಸರಾಸರಿ AQI 471 ಆಗಿತ್ತು. ಇದು ಈ ಋತುವಿನಲ್ಲೇ ಅತ್ಯಂತ ಕಳಪೆ ಗುಣಮಟ್ಟ ಎಂದು ದಾಖಲಾಗಿದ್ದು, ಗುರುವಾರ ಅದೇ ವಾಯು ಗುಣಮಟ್ಟ ಸೂಚ್ಯಂಕ 411 ಆಗಿತ್ತು.
ಉಸಿರಾಡುವ ಗಾಳಿ ಗುಣಮಟ್ಟ ಹೀಗೆ ಇರಬೇಕು
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹಾಳಾಗಿ ಹೋಗಿದ್ದು, ಇಲ್ಲಿ ಗಾಳಿಯೇ ವಿಷಾನಿಲವಾಗಿ ಪರಿವರ್ತನೆ ಆಗಿ ಬಿಟ್ಟಿದೆ. ಹಾಗಿದ್ದರೆ ಗಾಳಿಯ ಗುಣಮಟ್ಟದ ಪ್ರಮಾಣ ಎಷ್ಟಿರಬೇಕು ಎಂದು ನೋಡುವುದಾದರೆ,
- 00-50 ಉತ್ತಮ
- 51-100 ತೃಪ್ತಿದಾಯಕ
- 101-200 ಮಧ್ಯಮ
- 201-300 ಕಳಪೆ
- 301-400 ಅತಿಕಳಪೆ
- 401-500 ಅಪಾಯಕಾರಿ
- 500 ನಂತರ ಅತಿ ಅಪಾಯಕಾರಿ
ಸದ್ಯ ದೆಹಲಿಯಲ್ಲಿನ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟವನ್ನೂ ಕೂಡಾ ಮೀರಿ ಹೋಗಿದೆ.