ಶ್ರೀಲಂಕಾದಲ್ಲಿ ಭುಗಿಲೆದ್ದ ಮುಸ್ಲಿಂ ವಿರೋಧಿ ದಂಗೆ: ಓರ್ವ ಸಾವು
ಕೋಲಂಬೋ, ಮೇ 14: ಶ್ರೀಲಂಕಾದಲ್ಲಿ ಈಸ್ಟರ್ ಸಮಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಮುಸ್ಲಿಂ ವಿರೋಧಿ ದಂಗೆ ಆರಂಭವಾಗಿದ್ದು, ಓರ್ವ ಮುಸ್ಲಿಂನನ್ನು ಕೊಂದುಹಾಕಲಾಗಿದೆ.
45 ವರ್ಷ ವಯಸ್ಸಿನ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತನಾಗಿದ್ದಾನೆ.
ಮುಸ್ಲಿಂ ವಿರೋಧಿ ಸಂಘರ್ಷ: ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮ ಬ್ಲಾಕ್
ಈ ಘಟನೆಯ ನಂತರ ಶ್ರೀಲಂಕಾದಲ್ಲಿ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೆ ತರಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಹುತೇಕ ಸ್ಥಗಿತಗೊಂಡಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಅಂತರ್ಜಾಲ ಸೇವೆಯನ್ನೂ ಬಹುತೇಕ ಕಡೆಗಳಲ್ಲಿ ಸ್ಥಗಿತಗೊಳಿಸಲಾಗಿದ್ದು, ಸಂವಹನಕ್ಕೂ ಸಮಸ್ಯೆಯುಂಟಾಗಿದೆ.
ದಂಗೆಯ ಕಾರಣ ಸಾಮಾಜಿಕ ಮಾಧ್ಯಮಗಳ ಮೇಲೂ ನಿರ್ಬಂಧ ಹೇರಲಾಗಿದೆ.
ಭೀತಿಯಲ್ಲಿ ಮುಸ್ಲಿಂ ಸಮುದಾಯ
ಮುಸ್ಲಿಮರು ಮಾಲೀಕರಾಗಿರುವ ಅಂಗಡಿ, ವಾಣಿಜ್ಯ ಕೇಂದ್ರಗಳನ್ನು ಧ್ವಂಸ ಮಾಡುತ್ತಿರುವ ಘಟನೆ ನಡೆಯುತ್ತಿದ್ದು, ಮುಸ್ಲಿಮರು ಯಾರೇ ಕಂಡರೂ ಅವರ ಮೇಲೆ ಹಲ್ಲೆ ನಡೆಸುವ ಮನಸ್ಥಿತಿ ಹೆಚ್ಚಾಗಿದೆ.ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೊಳಿಸಲಾಗಿದೆಯಾದರೂ, ಪಿಲೀಸರ ಕಣ್ಣು ತಪ್ಪಿಸಿಯೂ ಹಿಂಸಾಚಾರಗಳು ವರದಿಯಾಗುತ್ತಿದೆ.
ಈಸ್ಟರ್ ಬಾಂಬ್ ಸ್ಫೋಟ
ಏಪ್ರಿಲ್ 21 ರಂದು ಸಂಜೆ ಶ್ರೀಲಂಕಾ ರಾಜಧಾನಿ ಕೊಲಂಬೋ ಬಳಿ ಎಂಟು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನ ಮೃತರಾಗಿದ್ದರೆ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮೊದಲಿಗೆ ಮೃತರ ಸಂಖ್ಯೆ 350 ಎನ್ನಲಾಗಿತ್ತು. ಆದರೆ ನಂತರ ಶ್ರೀಲಂಕಾ ಸರ್ಕಾರ ನಿಖರ ಸಂಖ್ಯೆಯನ್ನು ನೀಡಿತ್ತು.
ಇದಪ್ಪಾ ತಾಕತ್ತು! ದಾಳಿಯಾಗಿ ವಾರದೊಳಗೆ ಉಗ್ರರ ಚೆಂಡಾಡಿದ ಶ್ರೀಲಂಕಾ
ದಾಳಿಯ ಹೊಣೆ ಹೊತ್ತಿದ್ದ ಐಸಿಸ್
ಘಟನೆ ನಡೆದ ಎರಡು ದಿನದ ನಂತರ ಐಸಿಸ್ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಆದರೆ ಇದನ್ನು ಐಸಿಸ್ ಮಾಡಿದ್ದು ಎಂಬುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯವನ್ನು ಅದು ನೀಡಿಲ್ಲ.
ಸೇಡು ತೀರಿಸಿಕೊಳ್ಳಲು ಶ್ರೀಲಂಕಾ ಪ್ರಯತ್ನ
ಆದರೆ ಶ್ರೀಲಂಕಾ ಈ ದಾಳಿ ನಡೆದ ಒಂದು ವಾರದಲ್ಲೇ ಶ್ರೀಲಂಕಾದಲ್ಲಿ ಉಗ್ರರು ಅಡಗಿದ್ದ ತಾಣದ ಮೇಲೆ ದಾಳಿ ನಡೆಸಿ 15 ಜನರನ್ನು ಹತ್ಯೆ ಮಾಡಿತ್ತು. ಈ ಘಟನೆಯ ನಂತರ ಶ್ರೀಲಂಕಾದಲ್ಲಿ ಮುಸ್ಲಿಂ ವಿರೋಧಿ ಮನಸ್ಥಿತಿ ಹೆಚ್ಚಿದ್ದು, ಈಸ್ಟರ್ ಬಾಂಬ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಹಿಂಸೆ ಭುಗಿಲೆದ್ದಿದೆ.