ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಒಡ್ಡಿದ ಇಮ್ರಾನ್ ಖಾನ್!
Recommended Video
ಇಸ್ಲಾಮಾಬಾದ್, ಆಗಸ್ಟ್ 06: "ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ನಡೆ ಮತ್ತೊಂದು ಪುಲ್ವಾಮಾ ದಾಳಿಗೆ ಮುನ್ನುಡಿ ಬರೆಯಬಹುದು" ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದಾರೆ.
ಪಾಕಿಸ್ತಾನ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, "ಮೋದಿ ಸರ್ಕಾರದ ನಡೆಯಿಂದ ಕಾಶ್ಮೀರದ ಜನರನ್ನು ಹೊಸಕಿಹಾಕಲು ಸಾಧ್ಯವಿಲ್ಲ" ಎಂದರು.
ಕಾಶ್ಮೀರ ನಿರ್ಧಾರದ ಬೆನ್ನಲ್ಲೇ ಅಣ್ವಸ್ತ್ರ ನೆನಪಿಸಿದ ಇಮ್ರಾನ್ ಖಾನ್
ಬಿಜೆಪಿ ತನ್ನ ಸಂಸ್ಥಾಪಕರಿಂದಲೇ ಮುಸ್ಲಿಮರನ್ನು ದ್ವಿತಿಯ ದರ್ಜೆ ನಾಗರಿಕರನ್ನಾಗಿ ನೋಡುವಂಥ ಸಿದ್ಧಾಂತವನ್ನು ಪಾಲಿಸುತ್ತಿದೆ ಎಮದು ಇದೇ ಸಂದರ್ಭದಲ್ಲಿ ಇಮ್ರಾನ್ ಖಾನ್ ದೂರಿದರು. ಜಿನ್ಹಾಗೆ ಅಂದೇ ಗೊತ್ತಿತ್ತು, ಆರೆಸ್ಸೆಸ್ ಭಾರತದಲ್ಲಿ ಕೇವಲ ಹಿಂದುಗಳನ್ನು ಮಾತ್ರ ನೋಡಲು ಬಯಸುತ್ತದೆ, ಮುಸ್ಲಿಮರನ್ನ ಅಲ್ಲಿ ದ್ವಿತಿಯ ದರ್ಜೆ ಪ್ರಜೆಗಳನ್ನಾಗಿ ನೋಡಲಾಗುತ್ತದೆ ಎಂದು. ಅವರ ಉದ್ದೇಶವನ್ನು ಮೊದಲಿಗೆ ಅರಿತಿದ್ದೇ ಜಿನ್ಹಾ" ಎಂದು ಇಮ್ರಾನ್ ಖಾನ್ ಹೇಳಿದರು.
"ಪಾಕಿಸ್ತಾನ ಸೃಷ್ಟಿಯಾಗಲೇ ಬಾರದಿತ್ತು ಎನ್ನುತ್ತಿದ್ದ ಹಲವರು ಕಾಶ್ಮೀರಿ ನಾಯಕರೇ ಈಗ ಜಿನ್ಹಾನ ದ್ವಿರಾಷ್ಟ್ರ ಸಿದ್ಧಾಂತವೇ ಸರಿ ಎನ್ನುತ್ತಿದ್ದಾರೆ. ಭಾರತ ಹಿಂದುಗಳಿಗೆ ಮಾತ್ರ ಆದ್ಯತೆ ನೀಡುತ್ತದೆ, ಆದರೆ ಪಾಕಿಸ್ತಾನ ಎಲ್ಲ ಮನುಷ್ಯರನ್ನೂ ಸಮಾನವಾಗಿ ಕಾಣುತ್ತದೆ" ಎಂದು ಖಾನ್ ಹೇಳಿದರು.
ಪುಲ್ವಾಮಾ ದಾಳಿ ನೆನಪಿಸಿದ ಇಮ್ರಾನ್ ಖಾನ್
2019 ರ ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಜೈಶ್ ಇ ಮೊಹಮ್ಮದ್ ಆತ್ಮಾಹುತಿ ಬಾಂಬರ್ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಭಾರತದ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಆ ಘಟನೆಗೂ ತನಗೂ ಸಂಬಂಧವೇ ಇಲ್ಲ ಎಂದು ಪಾಕಿಸ್ತಾನ ಹೇಳಿತ್ತು. ಆದರೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯನ್ನು ಹೊತ್ತುಕೊಂಡಿದ್ದು, ಮತ್ತು ಆ ಸಂಘಟನೆಗೆ ಪಾಕಿಸ್ತಾನವೇ ನೆಲೆ ನೀಡುತ್ತಿರುವುದು ಬಯಲಾದ ಮೇಲೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಟೀಕೆ ಎದುರಿಸಿತ್ತು. ಜೊತೆಗೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳುವಂತೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡವೂ ಹೆಚ್ಚಿತ್ತು. ಇದಾದ ನಂತರ ಭಾರತ ಪಾಕಿಸ್ತಾನದ ಭಯೋತ್ಪಾದಕ ನೆಲೆ ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ಸಹ ನಡೆಸಿತ್ತು.
ಸತ್ಯ ಒಪ್ಪಿಕೊಂಡ ಇಮ್ರಾನ್ ಖಾನ್
ಇಷ್ಟು ದಿನ ಪುಲ್ವಾಮಾ ದಾಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಪಾಕಿಸ್ತಾನ ಇದೀಗ ಆ ದಾಳಿಯನ್ನು ತಾನೇ ಮಾಡಿಸಿದ್ದು ಎಂಬುದಕ್ಕೆ ಸ್ವತಃ ಪುರಾವೆಯನ್ನು ನೀಡಿದೆ. ಆ ದೇಶದ ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿಯೇ ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನವನ್ನು ಮತ್ತೊಮ್ಮೆ ಹರಾಜಿಗೆ ಹಾಕಿದಂತಾಗಿದೆ!
ಆರ್ಟಿಕಲ್ 370 ರದ್ದು: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ 'ಏಕಾಂಗಿ'
ಅಣ್ವಸ್ತ್ರದ ಪ್ರಸ್ತಾಪ
370 ನೇ ವಿಧಿ ರದ್ದುಗೊಳಿಸಿದ ಕುರಿತು ಮಾತನಾಡಿದ್ದ ಇಮ್ರಾನ್ ಖಾನ್, "ಅಣ್ವಸ್ತ್ರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ಸಂಬಂಧ ಈ ನಡೆಯಿಂದ ಮತ್ತಷ್ಟು ಹದಗೆಡುತ್ತದೆ" ಎಂದಿದ್ದರು. ಈ ಮೂಲಕ ಅಣ್ವಸ್ತ್ರವನ್ನು ನೆನಪಿಸಿದ್ದರು.
ಯಾವ ಮಟ್ಟಕ್ಕಿಳಿಯಲೂ ಸಿದ್ಧ ಎಂದ ಸೇನೆ
ಕಾಶ್ಮೀರದ ಜನರ ಹಿತಕ್ಕಾಗಿ ತಾನು ಯಾವ ಮಟ್ಟಕ್ಕಾದರೂ ಹೋಗಲು ಸಿದ್ಧ ಎಂದು ಈಗಾಗಲೇ ಪಾಕ್ ಸೇನೆ ಹೇಳಿದೆ. ಜೊತೆಗೆ ಭಾರತದ ನಡೆಯ ಕುರಿತು ಈಗಾಗಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮೂದ್ ಖುರೇಶಿ ವಿಶ್ವಸಂಸ್ಥೆಗೆ ಪತ್ರವನ್ನೂ ಬರೆದಿದ್ದಾರೆ.