ಇಂಡೋನೇಷ್ಯಾದಲ್ಲಿ ವ್ಯಕ್ತಿಯನ್ನು ಕೊಂದ ಪ್ರತೀಕಾರಕ್ಕೆ 292 ಮೊಸಳೆ ಹತ್ಯೆ
ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಕೊಂದಿತು ಎಂಬ ಸಿಟ್ಟಿನಲ್ಲಿ ಸಾರ್ವಜನಿಕರ ಗುಂಪು ಹತ್ತಿರ ಹತ್ತಿರ ಮುನ್ನೂರು ಮೊಸಳೆಗಳನ್ನು ಹತ್ಯೆ ಮಾಡಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಈ ಪ್ರತೀಕಾರದ ಹತ್ಯೆಯು ಪಪುವಾ ಪ್ರಾಂತ್ಯದಲ್ಲಿ ವರದಿಯಾಗಿದೆ. ಮೊಸಳೆಯಿಂದ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರದ ನಂತರ ಈ ಕೃತ್ಯ ಎಸಗಲಾಗಿದೆ.
ರಾಸಿನ ಮೇವಿಗಾಗಿ ಹುಲ್ಲು ಕೊಯ್ಯುವ ಸಂದರ್ಭದಲ್ಲಿ ಮೊಸಳೆ ಸಾಕಣೆ ಕೇಂದ್ರದೊಳಗೆ ಆತ ಬಿದ್ದು, ಮೊಸಳೆ ದಾಳಿಯಲ್ಲಿ ಸಾವಿಗೀಡಾಗಿದ್ದರು. ನಲವತ್ತೆಂಟು ವರ್ಷದ ಸುಗಿತೋ ಮೃತವ್ಯಕ್ತಿ. ಆತನ ಕಾಲನ್ನು ಹಿಡಿದಿದ್ದ ಮೊಸಳೆ, ಬಾಲದಿಂದ ಭೀಕರ ದಾಳಿ ನಡೆಸಿತ್ತು ಎಂದು ಪೊಲೀಸರು ಹಾಗೂ ಪರಿಸರಪ್ರೇಮಿಗಳು ತಿಳಿಸಿದ್ದಾರೆ.
ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ
ಸುಗಿತೋ ಸಂಬಂಧಿಕರು, ಸ್ಥಳೀಯರು, ಮೊಸಳೆ ಸಾಕಣೆ ಕೇಂದ್ರದ ಸುತ್ತ ಇರುವವರು ಸಿಟ್ಟುಗೊಂಡು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಮೃತ ವ್ಯಕ್ತಿ ಕುಟುಂಬಕ್ಕೆ ಪರಿಹಾರ ಕೊಡುವುದಾಗಿ ತಿಳಿಸಿ, ಒಪ್ಪಂದ ಕೂಡ ಮಾಡಿಕೊಂಡಿದ್ದ ಸ್ಥಳೀಯ ಮೊಸಳೆ ಸಂರಕ್ಷಣಾ ಸಂಸ್ಥೆಯು ಸಾಂತ್ವನ ಕೂಡ ಹೇಳಿತ್ತು.
ಆದರೆ, ನೂರಾರು ಸಂಖ್ಯೆಯಲ್ಲಿದ್ದ ಗುಂಪಿನ ಆಕ್ರೋಶ ಕಡಿಮೆ ಆಗಿಲ್ಲ. ಸಿಟ್ಟಿನಲ್ಲಿ ಮಚ್ಚು-ಕತ್ತಿಯಂಥ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿ, ಸಾಕಣೆ ಕೇಂದ್ರದಲ್ಲಿ 292 ಮೊಸಳೆಗಳನ್ನು ಕೊಂದುಹಾಕಲಾಗಿದೆ. ಅದರಲ್ಲಿ 4 ಇಂಚಿನ ಪುಟ್ಟ ಮರಿಯಿಂದ 2 ಮೀಟರ್ ಉದ್ದದ ಮೊಸಳೆವರೆಗೆ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆ ನಡೆಸಿ, ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಹಲವು ಬಗೆಯ ಮೊಸಳೆಗಳು ಕಂಡುಬರುತ್ತವೆ. ಅವು ಆಗಾಗ ದಾಳಿ ಮಾಡುವುದು ಹಾಗೂ ಮನುಷ್ಯರನ್ನು ಕೊಲ್ಲುವುದು ಸಹ ವರದಿ ಆಗುತ್ತದೆ. ಕಳೆದ ಮಾರ್ಚ್ ನಲ್ಲಿ ಇಲ್ಲಿನ ದ್ವೀಪವೊಂದರಲ್ಲಿ ಕಾರ್ಮಿಕನೊಬ್ಬನನ್ನ್ನು ತಿಂದುಹಾಕಿದ್ದ ಆರು ಮೀಟರ್ ಉದ್ದದ ಮೊಸಳೆಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು.
ಡೈವಿಂಗ್ ಗೆ ಹೆಸರಾದ ಇಲ್ಲಿನ ದ್ವೀಪವೊಂದರಲ್ಲಿ ಎರಡು ವರ್ಷಗಳ ಹಿಂದೆ ರಷ್ಯಾ ಪ್ರವಾಸಿಗನೊಬ್ಬನನ್ನು ಮೊಸಳೆ ಕೊಂದುಹಾಕಿತ್ತು.