ಪಂಜ್ಶೀರ್ ಇನ್ನೂ ಸೋತಿಲ್ಲ, ನಾನು ದೇಶದಿಂದ ಓಡಿಯೂ ಹೋಗಿಲ್ಲ: ಅಮ್ರುಲ್ಲಾ
ಪಂಜ್ಶೀರ್ ಇನ್ನೂ ಸೋತಿಲ್ಲ, ನಾನು ದೇಶದಿಂದ ಪಲಾಯನವೂ ಆಗಿಲ್ಲ ಎಂದು ಅಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಾಲೇಹ್ ಹೇಳಿದ್ದಾರೆ.
ಪಂಜ್ಶೀರ್ನ್ನು ಉಳಿಸಿಕೊಳ್ಳಲು ಸ್ಥಳೀಯರು ಹಾಗೂ ಸೈನಿಕರು ನಿರಂತರ ಹೋರಾಟ ನಡೆಸುತ್ತಿದ್ದಾರೆ, ಯಾವುದೇ ಕಾರಣಕ್ಕೂ ತಾಲಿಬಾನ್ಗೆ ಪಂಜ್ಶೀರನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಹೊಸ ಸರ್ಕಾರದಲ್ಲಿ ಪ್ರಾತಿನಿಧ್ಯಕ್ಕೆ ಅಫ್ಘಾನ್ ಮಹಿಳೆಯರ ಹೋರಾಟ
ಅಮ್ರುಲ್ಲಾ ಅಫ್ಘಾನಿಸ್ತಾನದಿಂದ ಓಡಿಹೋಗಿದ್ದಾರೆ ಎಂದು ಮಾಧ್ಯಮಗಳು ಮಾಡುತ್ತಿರುವ ವರದಿ ಆದಾರ ರಹಿತವಾದದ್ದು, ನಾನು ಪಂಜ್ಶೀರ್ನಲ್ಲಿಯೇ ಇದ್ದೇನೆ ಎಲ್ಲಾ ಭದ್ರತಾ ಸಿಬ್ಬಂದಿಗಳ ಜತೆ ಮಾತುಕತೆ ನಡೆಸುತ್ತಾ ಅವರೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ.
ನಮಗೆ ಗೊತ್ತಿಗೆ ಇದು ಕಷ್ಟದ ಪರಿಸ್ಥಿತಿ ಎಂದು ಆದರೆ ಕಠಿಣ ಸಂದರ್ಭವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದಾರ್, ಅಫ್ಘಾನಿಸ್ತಾನ ಸರ್ಕಾರದ ಮುಖ್ಯಸ್ಥನಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಸರ್ಕಾರದ ನೇತೃತ್ವವನ್ನು ಮುಲ್ಲಾ ಬರಾದಾರ್ ವಹಿಸಲಿದ್ದಾನೆ ಎಂದು ತಾಲಿಬಾನ್ ಮೂಲಗಳು ಶುಕ್ರವಾರ ತಿಳಿಸಿವೆ.
ಕತಾರ್ನಲ್ಲಿರುವ ತಾಲಿಬಾನ್ನ ರಾಜಕೀಯ ಕಚೇರಿಯ ಮುಖ್ಯಸ್ಥನಾಗಿರುವ ಬರಾದಾರ್ ಜತೆಗೆ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಮಗ ಮೊಹಮ್ಮದ್ ಯಾಕೂಬ್ ಹಾಗೂ ಸಂಘಟನೆಯ ಹಿರಿಯ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜೈ ಅವರನ್ನು ನೇಮಿಸಲಾಗಿದೆ ಎಂದು ಮೂಲಗಳು ಹೇಳಿವೆ.
'ಎಲ್ಲ ಮೂವರೂ ನಾಯಕರು ಕಾಬೂಲ್ಗೆ ತೆರಳಿದ್ದಾರೆ. ಹೊಸ ಸರ್ಕಾರದ ಘೋಷಣೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ' ಎಂದು ತಾಲಿಬಾನ್ ಅಧಿಕಾರಿಯೊಬ್ಬ ತಿಳಿಸಿದ್ದಾನೆ.
ಸರ್ವಸಮ್ಮತ ಸರ್ಕಾರವನ್ನು ರಚಿಸಲು ತಾಲಿಬಾನ್ ಬಯಸಿದೆ. ಈಗ ಮಧ್ಯಂತರ ಸರ್ಕಾರವನ್ನು ರಚಿಸಲಾಗುತ್ತಿದ್ದು, ಅದು ತಾಲಿಬಾನ್ ಸದಸ್ಯರನ್ನು ಮಾತ್ರವೇ ಒಳಗೊಳ್ಳಲಿದೆ. ಸರ್ಕಾರವು 25 ಸಚಿವಾಲಯಗಳನ್ನು, ಒಂದು ಸಲಹಾ ಮಂಡಳಿ ಅಥವಾ ಶುರಾ ಒಳಗೊಂಡಿರಲಿದೆ. ಶುರಾದಲ್ಲಿ 12 ಮಂದಿ ಮುಸ್ಲಿಂ ವಿದ್ವಾಂಸರು ಸದಸ್ಯರಾಗಿರುತ್ತಾರೆ.
ತಾಲಿಬಾನ್ನ ಪರಮೋಚ್ಛ ಧಾರ್ಮಿಕ ನಾಯಕ ಹೈಬತುಲ್ಲಾ ಅಖುಂಜದಾ, ಧಾರ್ಮಿಕ ವಿಚಾರಗಳ ಬಗ್ಗೆ ಗಮನ ಹರಿಸಲಿದ್ದಾನೆ ಮತ್ತು ಇಸ್ಲಾಂನ ಚೌಕಟ್ಟುಗಳ ಒಳಗೆ ಕಾರ್ಯನಿರ್ವಹಿಸಲಿದ್ದಾನೆ ಎಂದು ಮತ್ತೊಂದು ಮೂಲ ತಿಳಿಸಿದೆ.
ಆರರಿಂದ ಎಂಟು ತಿಂಗಳ ಒಳಗೆ ಬೃಹತ್ ಸಮಾರಂಭವಾದ ಲೋಯಾ ಜಿರ್ಗಾವನ್ನು ನಡೆಸಲು ಯೋಜನೆ ರೂಪಿಸಿದೆ. ಇಲ್ಲಿ ಅಫ್ಘಾನಿಸ್ತಾನ ಸಮಾಜದ ಹಿರಿಯರು ಹಾಗೂ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿ ಸಂವಿಧಾನದ ಹಾಗೂ ಭವಿಷ್ಯದ ಸರ್ಕಾರದ ರಚನೆ ಕುರಿತಾಗಿ ಚರ್ಚೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.