ಚೀನಾ ಬಜೆಟ್: ಭಾರತ-ಅಮೆರಿಕಾಗೆ ಸೆಡ್ಡು ಹೊಡೆಯುವ ಯೋಜನೆ
ನವದೆಹಲಿ, ಮಾರ್ಚ್.05: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಭಾರತ ಸೇರಿದಂತೆ ನೆರೆಹೊರೆ ರಾಷ್ಟ್ರಗಳೊಂದಿಗೆ ಚೀನಾ ಸಂಘರ್ಷಕ್ಕೆ ಇಳಿದಿರುವುದು ಹೊಸ ವಿಷಯವೇನಲ್ಲ. ಇದರ ಮಧ್ಯೆ ಚೀನಾ ಆಂತರಿಕ ಭದ್ರತೆ ಮತ್ತು ರಕ್ಷಣಾ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಮೀಸಲಿಟ್ಟಿರುವುದು ಇದೀಗ ಸುದ್ದಿಯಾಗಿದೆ.
2021ನೇ ಸಾಲಿನಲ್ಲಿ ಚೀನಾ ರಕ್ಷಣಾ ಯೋಜನೆಗಳ ಮೇಲಿನ ವೆಚ್ಚದ ಪ್ರಮಾಣ ಶೇ.6.8ರಷ್ಟು ಏರಿಕೆಯಾಗಿದೆ. 2019ರ ಆರ್ಥಿಕ ವರ್ಷದ ನಂತರದಲ್ಲಿ ಮೊದಲ ಬಾರಿಗೆ ಅತಿಹೆಚ್ಚು ಹಣವನ್ನು ರಕ್ಷಣೆ ಮತ್ತು ಭದ್ರತಾ ವಲಯದಲ್ಲಿ ಹೂಡಿಕೆ ಮಾಡಲು ಚೀನಾ ಸರ್ಕಾರ ಮುಂದಾಗಿದೆ.
ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಅತಿರೇಕದ ಕ್ರಮಕ್ಕೆ ಸಿದ್ಧರಾಗಿ: ಬಿಪಿನ್ ರಾವತ್
ಮುಂಬರುವ 2021ನೇ ಆರ್ಥಿಕ ವರ್ಷದಲ್ಲಿ 208 ಬಿಲಿಯನ್ ಡಾಲರ್ ( 1.35 ಟ್ರಿಯನ್ ಯುವಾನ್ ) ಹಣವನ್ನು ರಕ್ಷಣಾ ಯೋಜನೆಗಳಿಗೆ ಖರ್ಚು ಮಾಡುವ ನಿರೀಕ್ಷೆಯಿದೆ ಎಂದು ಚೀನಾದ ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ. ರಕ್ಷಣಾ ಯೋಜನೆಗಳ ಮೇಲೆ ಚೀನಾ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದಕ್ಕೆ ಕಾರಣವೇನು. ಇದರ ಹಿಂದಿನ ಉದ್ದೇಶವೇನು. ಚೀನಾದ ಮುಂದಿನ ಪ್ಲ್ಯಾನ್ ಏನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಚಿತ್ರಸಾಕ್ಷ್ಯ: ಭಾರತದ ಮತ್ತೊಂದು ಗಡಿಯಲ್ಲಿ ಕಾಣಿಸಿಕೊಂಡ ಚೀನಾ ಸೇನೆ!
ಚೀನಾದಲ್ಲಿ ಕಳೆದ ವರ್ಷ ರಕ್ಷಣಾ ಯೋಜನೆಗೆ ನೀಡಿದ್ದೆಷ್ಟು?
ಚೀನಾ ಸರ್ಕಾರವು 2021ನೇ ಸಾಲಿನಲ್ಲಿ ಭಾರಿ ಹಣವನ್ನು ಆಂತರಿಕ ಭದ್ರತೆ ಮತ್ತು ರಕ್ಷಣಾ ಯೋಜನೆಗಳಿಗಾಗಿ ಮೀಸಲಿಟ್ಟಿದೆ. ಬೀಜಿಂಗ್ನಲ್ಲಿ ನಡೆದ ವಾರ್ಷಿಕ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಸಭೆಯ ಆರಂಭದಲ್ಲಿ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದೊಂದಿಗೆ ಹೋಲಿಸಿದ್ದಲ್ಲಿ ಶೇ. 6.6ರಷ್ಟು ಹೆಚ್ಚಾಗಿದೆ.
ಹಣಕಾಸು ಸಚಿವಾಲಯ ಈ ಬಗ್ಗೆ ನೀಡಿದ ಮಾಹಿತಿ
"ರಾಷ್ಟ್ರೀಯ ರಕ್ಷಣೆ ಮತ್ತು ಸಶಸ್ತ್ರ ಪಡೆಗಳ ಆಧುನೀಕರಣವನ್ನು ತೀವ್ರವಾಗಿ ಬೆಂಬಲಿಸಬೇಕಿದೆ. ಈ ನಿಟ್ಟಿನಲ್ಲಿ ಬಲವಾದ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಇದರಿಂದ ಚೀನಾದ ರಕ್ಷಣಾ ಸಾಮರ್ಥ್ಯವು ಹಂತಹಂತವಾಗಿ ಬೆಳೆಯುವುದಕ್ಕೆ ಸಹಾಯವಾಗುತ್ತದೆ" ಎಂದು ಕೇಂದ್ರ ರಕ್ಷಣಾ ಸಚಿವಾಲಯವು ತಿಳಿಸಿದೆ.
ರಕ್ಷಣಾ ವಲಯದಲ್ಲಿ ಖರ್ಚು ಹೆಚ್ಚಾಗಲು ಕಾರಣ?
ಭಾರತ ಮತ್ತು ಚೀನಾದ ಗಡಿ ಪ್ರದೇಶದಲ್ಲಿ ಯೋಧರ ಮುಖಾಮುಖಿ ಸಂಘರ್ಷದ ನಂತರದಲ್ಲಿ ಉಭಯ ರಾಷ್ಟ್ರಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಾ ವಾತಾವರಣ ನಿರ್ಮಾಣವಾಗಿತ್ತು. ಇದರ ಜೊತೆ ವಿಶ್ವದ ದೊಡ್ಡಣ್ಣ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ರಕ್ಷಣಾ ಸಾಮರ್ಥ್ಯದೊಂದಿಗೆ ಚೀನಾ ಪೈಪೋಟಿಗೆ ಇಳಿದಿದೆ. ಅದಕ್ಕಾಗಿ ಚೀನಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಅತ್ಯಾಧುನಿಕ ಶೈಲಿಯಲ್ಲಿ ಆಧುನೀಕರಿಸಲು ಮುಂದಾಗಿರುವ ಹಿನ್ನೆಲೆ ಹೆಚ್ಚಿನ ಹಣವನ್ನು ರಕ್ಷಣೆ ಮತ್ತು ಭದ್ರತಾ ವಲಯಕ್ಕಾಗಿ ಮೀಸಲು ಇರಿಸುತ್ತಿದೆ.
ಚೀನಾ ರಕ್ಷಣಾ ಸಾಮರ್ಥ್ಯದ ವೃದ್ಧಿಸುವ ಗುರಿ
"ಚೀನಾದ ಮಿಲಿಟರಿ ಪಡೆಗಳಿಗೆ ತರಬೇತಿ ನೀಡಿ ಸೇನಾ ಸನ್ನದ್ಧತೆಯನ್ನು ಹೆಚ್ಚಿಸಲಾಗುತ್ತದೆ. ಎಲ್ಲ ವಲಯಗಳಲ್ಲಿ ಎಲ್ಲಾ ಸಂದರ್ಭಗಳಲ್ಲೂ ಎದುರಾಗುವ ಅಪಾಯಗಳನ್ನು ಸುರಕ್ಷಿತವಾಗಿ ಎದುರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ದೇಶದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ" ಎಂದು ರಾಷ್ಟ್ರೀಯ ಶಾಸಕಾಂಗ ವರದಿಯಲ್ಲಿ ಚೀನಾದ ಪ್ರೀಮಿಯರ್ ಕೆಕಿಯಾಂಗ್ ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ
ಭಾರತ ಮತ್ತು ಚೀನಾ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಉಭಯ ರಾಷ್ಟ್ರಗಳ ಯೋಧರ ನಡುವೆ ಮುಖಾಮುಖಿ ಸಂಘರ್ಷವಾಗಿತ್ತು. 2020ರ ಜುಲೈ ತಿಂಗಳಿನಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರೆ, ಚೀನಾದ ಕನಿಷ್ಠ ನಾಲ್ವರು ಸೈನಿಕರು ಮೃತಪಟ್ಟಿದ್ದರು. 1975ರ ಬಳಿಕ ಮೊದಲ ಬಾರಿ ಎರಡು ರಾಷ್ಟ್ರಗಳ ನಡುವೆ ನಡೆದ ಸಂಘರ್ಷದಲ್ಲಿ ಸೈನಿಕರು ಸಾವನ್ನಪ್ಪಿದ್ದರು.