ಭಾರತದಲ್ಲಿ ಪ್ರವಾದಿ ಅವಹೇಳನ ಖಂಡಿಸಿದ ಅಮೆರಿಕ
ವಾಷಿಂಗ್ಟನ್, ಜೂ. 17: ಪ್ರವಾದಿ ಮೊಹಮ್ಮದ್ ಪೈಂಗಂಬರ್ ಕುರಿತ ಅವಹೇಳನಕಾರಿ ಹೇಳಿಕೆ ವಿರುದ್ಧ ಅಂತಾರಾಷ್ಟ್ರೀಯ ಖಂಡನೆಗಳು ಮುಂದುವರಿದಿದ್ದು, ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಅವರ ಹೇಳಿಕೆಗಳನ್ನು ಖಂಡಿಸಿದೆ.
ಮುಸ್ಲಿಂ ರಾಷ್ಟ್ರಗಳಲ್ಲಿ ಕೋಲಾಹಲ ಎಬ್ಬಿಸಿರುವ ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿ ವಕ್ತಾರರು ಮಾಡಿದ್ದ ಹೇಳಿಕೆಗಳನ್ನು ಯುನೈಟೆಡ್ ಸ್ಟೇಟ್ಸ್ ಖಂಡಿಸಿದ್ದು, ಇಬ್ಬರು ಬಿಜೆಪಿ ವಕ್ತಾರರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ ಮತ್ತು ಪಕ್ಷವು ಆ ಹೇಳಿಕೆಗಳನ್ನು ಸಾರ್ವಜನಿಕವಾಗಿ ಖಂಡಿಸಿರುವುದನ್ನು ನೋಡಿ ನಮಗೆ ಸಂತೋಷವಾಗಿದೆ ಎಂದು ಅಮೆರಿಕಾ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯವಲ್ಲ, ಭಾರತವನ್ನು ಪ್ರತಿನಿಧಿಸುತ್ತೇನೆ: ಬಾಕ್ಸರ್ ನಿಖತ್ ಜರೀನ್
ನಾವು ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಮಾನವ ಹಕ್ಕುಗಳ ಕಾಳಜಿಗಳ ಕುರಿತು ದೊಡ್ಡ ಹಂತಗಳಲ್ಲಿ ಭಾರತೀಯ ಸರ್ಕಾರದೊಂದಿಗೆ ಸಹಕಾರ ಬಯಸುತ್ತೇವೆ. ಅಲ್ಲದೆ ಮಾನವ ಹಕ್ಕುಗಳ ಗೌರವವನ್ನು ಉತ್ತೇಜಿಸಲು ನಾವು ಭಾರತವನ್ನು ಪ್ರೋತ್ಸಾಹಿಸುತ್ತೇವೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷದ ವಕ್ತಾರರಾದ ನೂಪುರ್ ಶರ್ಮಾ ಅವರು ಮೇ 26ರಂದು ಪ್ರವಾದಿ ಮುಹಮ್ಮದ್ ಕುರಿತು ದೂರದರ್ಶನದಲ್ಲಿ ಮಾಡಿದ ಟೀಕೆಗಳು ಇಸ್ಲಾಮಿಕ್ ದೇಶಾಗಳಾದ್ಯಂತ ಪ್ರತಿಭಟನೆಗಳನ್ನು ಪ್ರಚೋದಿಸಿವೆ.
ಶೇಖ್ ಹಸೀನಾ ಅವರಿಂದ ಔಪಚಾರಿಕ ಖಂಡನೆಗೆ ಒತ್ತಾಯ
ಇಬ್ಬರು ಬಿಜೆಪಿಗರ ಹೇಳಿಕೆಗಳು ಸಾಮಾನ್ಯವಾಗಿ ಭಾರತದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಶ್ರೀಮಂತ ಅರಬ್ ರಾಜ್ಯಗಳಲ್ಲಿ ರಾಜತಾಂತ್ರಿಕ ಪ್ರತಿಭಟನೆಗೆ ಕಾರಣವಾಯಿತು. ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಭಾರತದ ಆಪ್ತ ಮಿತ್ರ ಪ್ರಧಾನಿ ಶೇಖ್ ಹಸೀನಾ ಅವರಿಂದ ಔಪಚಾರಿಕ ಖಂಡನೆಗೆ ಒತ್ತಾಯಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಬಗ್ಗೆ ಪ್ರಚೋದನಕಾರಿ ಟ್ವೀಟ್ಗಳನ್ನು ಮಾಡಿರುವ ನುಪೂರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಬಿಜೆಪಿ ಈಗಾಗಲೇ ಅಮಾನತುಗೊಳಿಸಿದೆ.
ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ನೀತಿ
1990ರ ದಶಕದ ಉತ್ತರಾರ್ಧದಿಂದ ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗಿನ ಸಂಬಂಧಗಳನ್ನು ಉತ್ತಮವಾಗಿಸಲು ಪ್ರಯತ್ನಿಸುತ್ತಿದೆ. ಪ್ರಪಂಚದ ಎರಡು ದೊಡ್ಡ ಪ್ರಜಾಪ್ರಭುತ್ವಗಳು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ. ಆದಾಗ್ಯೂ, ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ನೀತಿಗಳನ್ನು ಅನುಸರಿಸುವ ಆರೋಪಗಳನ್ನು ನರೇಂದ್ರ ಮೋದಿ ಎದುರಿಸುತ್ತಿರುವಾಗ ಯುನೈಟೆಡ್ ಸ್ಟೇಟ್ಸ್ ಹಲವಾರು ಬಾರಿ ಭಾರತದಲ್ಲಿ ಮಾನವ ಹಕ್ಕುಗಳ ಬಗ್ಗೆ ಎಚ್ಚರಿಕೆಯಿಂದ ಕಳವಳಗಳನ್ನು ವ್ಯಕ್ತಪಡಿಸಿದೆ.
ಭಾರತೀಯ ರಾಯಭಾರಿಗಳನ್ನು ಕರೆಸಿ ಪ್ರತಿಭಟನೆ
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವಹೇಳನ ಕುರಿತು ಮುಸ್ಲಿಂ ದೇಶಗಳಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ವಸ್ತುಗಳ ಬಹಿಷ್ಕಾರಕ್ಕೂ ಇದು ಕಾರಣವಾಗಿತ್ತು. ಕುವೈತ್ ಸೇರಿದಂತೆ ಅರಬ್ ದೇಶಗಳು ದುಬೈ ಹಾಗೂ 15 ಮುಸ್ಲಿಂ ರಾಷ್ಟ್ರಗಳು ನುಪೂರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಹೇಳಿಕೆಗಳನ್ನು ಖಂಡಿಸಿ ತನ್ನ ದೇಶದಲ್ಲಿರುವ ಭಾರತೀಯ ರಾಯಭಾರಿಗಳನ್ನು ಕರೆಸಿ ಪ್ರತಿಭಟನೆ ದಾಖಲಿಸಿದ್ದವು. ಮುಂದುವರೆದು ಭಾರತ ಸರ್ಕಾರವು ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಬೇಕು ಎಂದು ಒತ್ತಾಯಿಸಿದ್ದವು.
ಇಬ್ಬರು ಮೃತರಾಗಿ, ವಾಹನಗಗಳಿಗೆ ಬೆಂಕಿ
ಪ್ರವಾದಿ ಅವಹೇಳನ ಖಂಡಿಸಿ ದೇಶದೊಳಗೂ ಸಾಕಷ್ಟು ಗಲಭೆಗಳು ಉಂಟಾಗಿದ್ದು, ಉತ್ತರಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಹರಿಯಾಣ, ದೆಹಲಿ ಜಮ್ಮುಕಾಶ್ಮೀರಗಳಲ್ಲಿ ಗಲಭೆಗಳು ನಡೆದು ಹಾನಿಗಳು ಸಂಭವಿಸಿದೆ. ಜಾರ್ಖಂಡ್ನ ರಾಂಚಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಮೃತರಾಗಿದ್ದು, ಬೈಕ್, ಕಾರು ಸೇರಿ ಹತ್ತಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ.
Recommended Video