ಊರಿಗೆ ಊರೇ ಸರ್ವನಾಶ, ನೂರಾರು ಗುಡಿಸಲಿಗೆ ಬೆಂಕಿ ಇಟ್ಟ ಸೈನಿಕರು?
ಧಗಧಗನೆ ಹೊತ್ತಿ ಉರಿಯುತ್ತಿರುವ ಗುಡಿಸಲು, ಸ್ವಲ್ಪ ಹೊತ್ತಿನ ಮುಂಚೆ ಇದ್ದ ಸೂರು ಈಗಿಲ್ಲವಲ್ಲ ಎಂಬ ಕೊರಗು. ಆ ನೋವು ಸಹಿಸಲಾಗದೆ ಮುಗಿಲು ಮುಟ್ಟಿದ ಆಕ್ರಂದನ. ಅರೆರೆ ಇದು ಯಾವುದೋ ಯುದ್ಧ ಭೂಮಿಯ ಸೀನ್ ಅಲ್ಲ. ಯಾವುದೋ ರಾಕ್ಷಸರ ಕೃತ್ಯವಂತೂ ಅಲ್ಲವೇ ಅಲ್ಲ. ಆದ್ರೆ ರಕ್ಷಕರೇ ಭಕ್ಷಕರಾಗಿ ಗುಡಿಸಲಿಗೆ ಬೆಂಕಿ ಇಟ್ಟಿರುವ ಅಸಲಿ ಕಥೆ. ಯೆಸ್, ಮ್ಯಾನ್ಮಾರ್ ಮಿಲಿಟರಿ ದಂಗೆಯಲ್ಲಿ ಸಿಲುಕಿ 5 ತಿಂಗಳೇ ಉರುಳಿದೆ.
ಆದ್ರೂ ಅಲ್ಲಿನ ಸ್ಥಿತಿ ಹಿಡಿತಕ್ಕೆ ಬಂದಿಲ್ಲ, ಶಾಂತಿ ನೆಲಗೊಂಡಿಲ್ಲ. ಈ ಮಧ್ಯೆ ಮ್ಯಾನ್ಮಾರ್ ಸೈನಿಕರ ವಿರುದ್ಧ ಮ್ಯಾನ್ಮಾರ್ ಜನರು ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ಹಳ್ಳಿಗಾಡಿನ ಜನರ ಆಕ್ರೋಶ ತೀವ್ರಗೊಳ್ಳುತ್ತಿದೆ. ಮ್ಯಾನ್ಮಾರ್ ಸೇನೆ ವಿರುದ್ಧ ತಮ್ಮದೇ ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯನ್ನು ಸಹಿಸದ ಮ್ಯಾನ್ಮಾರ್ ಸರ್ವಾಧಿಕಾರಿಗಳು, ಮುಗ್ಧ ಹಳ್ಳಿ ಜನರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ.
ಜೀವ ಉಳಿಸಿಕೊಳ್ಳಲು ಹಳ್ಳಿಗಳನ್ನೇ ಬಿಟ್ಟು ಓಡಿ ಬರುತ್ತಿದ್ದಾರೆ ಲಕ್ಷ ಲಕ್ಷ ಜನ
ಇದೇ ರೀತಿ ಮ್ಯಾನ್ಮಾರ್ನ ಮಧ್ಯಭಾಗದ ಹಳ್ಳಿಯೊಂದರಲ್ಲಿ ಸೇನೆ-ಗ್ರಾಮಸ್ಥರ ನಡುವೆ ಭೀಕರ ಕಾಳಗ ನಡೆದಿದೆ. ಇದರಿಂದ ರೊಚ್ಚಿಗೆದ್ದ ಮ್ಯಾನ್ಮಾರ್ ಸೈನಿಕರು ಸುಮಾರು 200 ಗುಡಿಸಲಿಗೆ ಬೆಂಕಿ ಇಟ್ಟು, ಸುಟ್ಟು ಹಾಕಿರುವ ಆರೋಪ ಕೇಳಿಬಂದಿದೆ.
800 ಕೊಲೆ, 5000 ಜನ ಅರೆಸ್ಟ್?
ಜಾಗತಿಕ ಸಂಸ್ಥೆಗಳು ನೀಡಿರುವ ಅಂಕಿ-ಅಂಶ ಹೇಳುವಂತೆ ಮ್ಯಾನ್ಮಾರ್ ಮಿಲಿಟರಿಗೆ ದಂಗೆಯಲ್ಲಿ ಈವರೆಗೂ ಸುಮಾರು 800 ಜನರನ್ನ ಕೊಲೆ ಮಾಡಲಾಗಿದೆ. ಹಾಗೇ 5000 ಜನರನ್ನ ಸರ್ವಾಧಿಕಾರಿಗಳು ಹಿಡಿದು ಜೈಲಿಗೆ ಹಾಕಿಸಿದ್ದಾರೆ. ಇನ್ನು ನಾಪತ್ತೆಯಾದ ಮಹಿಳೆಯರು, ಮಕ್ಕಳ ಸಂಖ್ಯೆಯಂತೂ ಲೆಕ್ಕಕ್ಕೆ ಸಿಗುತ್ತಿಲ್ಲ. ಹೀಗೆ ಇಡೀ ಮ್ಯಾನ್ಮಾರ್ ಅಕ್ಷರಶಃ ನರಕವಾಗಿದೆ. ಇಷ್ಟೆಲ್ಲಾ ಹಿಂಸೆ ನಡೆಯುತ್ತಿದ್ರೂ ಬಲಶಾಲಿ ರಾಷ್ಟ್ರಗಳ ಬಾಯಿ ಬಂದ್ ಆಗಿದೆ ಎಂಬ ಆರೋಪವಿದೆ. ಯಾಕಂದ್ರೆ ಚೀನಾ ವಿರುದ್ಧ ಮ್ಯಾನ್ಮಾರ್ ಒಂದು ಅಸ್ತ್ರವಾಗಿದ್ದು, ಮ್ಯಾನ್ಮಾರ್ ಜೊತೆಗಿನ ಸಂಬಂಧ ಹಾಳು ಮಾಡಿಕೊಳ್ಳಲು ನಂ. 1 ರಾಷ್ಟ್ರಗಳಿಗೆ ಇಷ್ಟವಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹಳ್ಳಿಯಿಂದ ಕಾಡಿಗೆ ಎಸ್ಕೇಪ್..!
ಅವರೆಲ್ಲಾ ಇಷ್ಟುದಿನ ನೆಮ್ಮದಿಯಾಗಿ ತಮ್ಮ ತಮ್ಮ ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದರು, ಆದರೆ ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಜೀವ ಉಳಿಸಿಕೊಳ್ಳಲು ಲಕ್ಷಾಂತರ ಜನ ತಾವು ಹುಟ್ಟಿಬೆಳೆದ ಮನೆ ಮತ್ತು ಊರನ್ನೇ ಬಿಟ್ಟು ಓಡಿ ಬರುತ್ತಿದ್ದಾರೆ. ಕ್ರೂರ ಸೇನಾಧಿಕಾರಿಗಳ ಕೈಗೆ ಸಿಗದಂತೆ ಕಾಡುಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಅಂದಹಾಗೆ ಇದು ಮ್ಯಾನ್ಮಾರ್ನ ಹಳ್ಳಿಗಳ ಕರುಣಾಜನಕ ಕಥೆ, ವ್ಯಥೆ. ಫೆಬ್ರುವರಿಯಲ್ಲಿ ನಡೆದ ಸೇನಾ ದಂಗೆ ವಿರೋಧಿಸಿ ಇಡೀ ಕೆಂಡವಾಗಿದೆ. ಸಾವಿರಾರು ಜನ ಹಿಂಸೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಸೇನೆ ಇವರನ್ನೆಲ್ಲಾ ಕೊಂದು ಹಾಕಿದೆ ಎಂಬ ಆರೋಪವಿದೆ. ಅದರಲ್ಲೂ ಸಾವಿರ ಸಾವಿರ ಮಂದಿ ಕಾಣೆಯಾಗಿರೋದು ಭಯ ಹುಟ್ಟಿಸುತ್ತಿದೆ. ಆದರೆ ಈ ಹೊತ್ತಲ್ಲೇ ಹಳ್ಳಿಗಳಿಗೂ ಹಿಂಸಾಚಾರ ಹಬ್ಬಿದೆ.
ಕೋರ್ಟ್ಗೆ ಹಾಜರಾದ ಮಾಜಿ ಪ್ರಧಾನಿ! 4 ತಿಂಗಳ ಬಳಿಕ ಜನರೆದುರು ಪ್ರತ್ಯಕ್ಷ!
ರೊಹಿಂಗ್ಯಾ ಹಿಂಸಾಚಾರ ರಿಪೀಟ್..?
ಅದು 2016ರ ಅಂತ್ಯಕಾಲ. ಜಗತ್ತು ಮ್ಯಾನ್ಮಾರ್ ಕಡೆಗೆ ದಿಟ್ಟಿಸಿ ನೋಡಿತ್ತು. ರೊಹಿಂಗ್ಯಾ ಮುಸ್ಲೀಮರ ಮೇಲೆ ದಿಢೀರ್ ದಾಳಿ ನಡೆದು ನೋಡ ನೋಡುತ್ತಿದ್ದಂತೆ ಸಾವಿರಾರು ರೊಹಿಂಗ್ಯಾಗಳು ಜೀವ ಕಳೆದುಕೊಂಡರು. ಈ ಹೊತ್ತಲ್ಲೇ ಅಮಾನುಷ ಘಟನೆಗಳು ನಡೆದವು. ರೊಹಿಂಗ್ಯಾ ಮುಸ್ಲೀಮರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿತ್ತು. ಹಲವು ಮಹಿಳೆಯರನ್ನ ರೇಪ್ & ಮರ್ಡರ್ ಮಾಡಿದ್ದರು ಎಂಬ ಆಘಾತಕಾರಿ ವಿಚಾರ ಜಗತ್ತನ್ನು ತಲ್ಲಣಗೊಳಿಸಿತ್ತು. 24 ಸಾವಿರ ರೊಹಿಂಗ್ಯಾಗಳು ಗಲಭೆಯಲ್ಲಿ ಹತ್ಯೆಯಾದರೆ, 1 ಮಿಲಿಯನ್ ರೊಹಿಂಗ್ಯಾಗಳು ಮ್ಯಾನ್ಮಾರ್ ಬಿಟ್ಟು ಓಡಿ ಹೋದರು. ಹೀಗೆ ರೊಹಿಂಗ್ಯಾ ಮುಸ್ಲೀಮರ ಮೇಲೆ ದಾಳಿ ನಡೆಸಿದ್ದು ಮ್ಯಾನ್ಮಾರ್ನ ಸೇನೆ ಎಂಬ ಆರೋಪ ಇದೆ. ಈಗಲೂ ಮ್ಯಾನ್ಮಾರ್ ಮಿಲಿಟರಿ ಹಳ್ಳಿಗಳಲ್ಲಿ ವಾಸವಿರುವ ಜನರ ಮೇಲೆ ಕ್ರೂರ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮಿಲಿಟರಿ ಆಡಳಿತ ಅಬ್ಬರ
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಮ್ಯಾನ್ಮಾರ್ ಸೇನೆ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮ ಟೀಕಿಸಿವೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲ್ಲಿನ ಸೇನಾಧಿಕಾರಿಗಳು, ಪ್ರತಿಭಟನೆ ನಡೆಸುತ್ತಿರುವ ಜನರನ್ನ ಚದುರಿಸಲು ಬಲಪ್ರಯೋಗ ಮಾಡುತ್ತಿದ್ದಾರೆ.