ಮಂಗಳೂರು-ಕುವೈಟ್ ಪ್ರಯಾಣಿಕರೇ ಗಮನಿಸಿ
ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆ ರಾಜ್ಯಗಳಾದ ಕೇರಳ, ಗೋವಾ ಕಡೆ ಹೋಗುತ್ತಿದ್ದ ಕುವೈಟಿಗಳಿಗೂ ಇದರಿಂದ ತೊಂದರೆಯಾಗಲಿದೆ. ಮುಂಬರುವ ವರ್ಷದಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಏಪ್ರಿಲ್ 1 ರಿಂದ ಬೇಸಿಗೆ ವೇಳಾಪಟ್ಟಿ ಬದಲಾವಣೆ ಕಾಣುತ್ತಿದ್ದು ಕುವೈಟ್-ಮಂಗಳೂರು-ಕೊಚ್ಚಿ ವಿಮಾನಯಾನ ಸೇವೆಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
ವಿಮಾನಯಾನ ಸೇವೆ ಗುತ್ತಿಗೆ ಆಧಾರದ ಮೇಲೆ ನಡೆಯುತ್ತಿದ್ದು,. ಏರ್ ಇಂಡಿಯಾ ವಿಮಾನಗಳ ಕೊರತೆ ಅನುಭವಿಸುತ್ತಿರುವುದರಿಂದ ಈ ರೀತಿ ಪ್ರಯಾಣಿಕ ವಿರೋಧಿ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾರಕ್ಕೆ ಮೂರು ಸಲ ಕೊಚ್ಚಿಯಿಂದ ಮಂಗಳೂರು ಮಾರ್ಗವಾಗಿ ಕುವೈಟ್ ಗೆ ವಿಮಾನ ಹಾರಾಟ ಕಾಣುತ್ತಿತ್ತು. ಈಗ ಈ ಸೇವೆ ನಿಂತರೆ ಕ್ಯಾಲಿಕಟ್ ನಿಂದ ಮಾತ್ರ ಕುವೈಟ್ ಕಡೆಗೆ ವಿಮಾನಯಾನ ಸಾಧ್ಯವಿದೆ.
ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಇನ್ನೂ ಆರ್ಥಿಕ ಬಿಕ್ಕಟ್ಟಿನ ಪಂಜರದಿಂದ ಹೊರ ಬಂದಿಲ್ಲ. ಈ ನಡುವೆ ಏರ್ ಇಂಡಿಯಾ ವಿಮಾನಗಳು ಮತ್ತೆ ಮೇಲಕ್ಕೇರುವಂತೆ ಮಾಡಲು ಸರ್ಕಾರ ಸಹಾಯ ಹಸ್ತ ಚಾಚಿತ್ತು.
ಉನ್ನತ ಮಟ್ಟದ ಕಾರ್ಯದರ್ಶಿಗಲ ಸಭೆಯಲ್ಲಿ ಏರ್ ಇಂಡಿಯಾ ಪುನುರುತ್ಥಾನಕ್ಕೆ ಸುಮಾರು 30,000 ಕೋಟಿ ರು ನೀಡಲು ಮುಂದಾಗಿ ಎರಡು ಮೂರು ವರ್ಷಗಳೇ ಕಳೆದಿದೆ. ಈ ಬೇಲ್ ಔಟ್ ಯೋಜನೆಗೆ ಹಲವರ ವಿರೋಧ ವ್ಯಕ್ತವಾಗಿದೆ. ಏರ್ ಲೈನ್ ಗೆ ಸಹಾಯ ಹಸ್ತ ಚಾಚುವ ಮೂಲಕ ಖಾಸಗಿಯವರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವುದೇ ಸರ್ಕಾರದ ಉದ್ದೇಶ ಎನ್ನಲಾಗುತ್ತಿದೆ ಎಂಬ ಕೂಗಿದೆ.