ಆಗಸ್ಟಾವೆಸ್ಟ್ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್
ನವದೆಹಲಿ, ಸೆಪ್ಟೆಂಬರ್ 18 : ಆಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಪ್ರಮುಖ ಆರೋಪಿಯೊಬ್ಬರನ್ನು ಭಾರತಕ್ಕೆ ಗಡಿಪಾರು ಮಾಡಲು ಯುಎಇ ಕೋರ್ಟ್ ನಿರ್ಧರಿಸಿರುವುದು, ಲೋಕಸಭೆಗೆ ಮೊದಲು ಕಾಂಗ್ರೆಸ್ಸಿಗೆ ಕಂಟಕವಾಗುವ ಸಾಧ್ಯತೆ ಹೆಚ್ಚಿಸಿದೆ.
3,700 ಕೋಟಿ ರುಪಾಯಿ ಹಗರಣದಲ್ಲಿ ಬ್ರಿಟನ್ ಮೂಲದ ಮಧ್ಯವರ್ತಿಯಾಗಿರುವ ಕ್ರಿಸ್ಚಿಯನ್ ಮೈಕೆಲ್ ನನ್ನು ಭಾರತಕ್ಕೊಪ್ಪಿಸಲು ಕೋರ್ಟ್ ನಿರ್ಧರಿಸಿದೆ. ರಫೇಲ್ ಡೀಲ್ ಹಿಡಿದುಕೊಂಡು ಆಡಳಿತ ಪಕ್ಷವನ್ನು ಇಬ್ಬಂದಿಗೆ ಸಿಲುಕಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಹಗರಣ ಮುಜುಗರಕ್ಕೀಡು ಮಾಡುವ ಸಾಧ್ಯತೆಯಿದೆ.
ಆಗಸ್ಟಾವೆಸ್ಟ್ಲ್ಯಾಂಡ್ ಹಗರಣ: ಮಧ್ಯವರ್ತಿ ಕ್ರಿಸ್ಟಿಯಾನ್ ಮೈಕೆಲ್ ಸಿಬಿಐ ವಶಕ್ಕೆ
2010ರಲ್ಲಿ ಯುಪಿಎ ಸರಕಾರವಿದ್ದಾಗ ಆಗಸ್ಟಾವೆಸ್ಟ್ಲ್ಯಾಂಡ್ ಮತ್ತು ಭಾರತೀಯ ವಾಯು ಸೇನೆಯ ನಡುವೆ 12 ಆಗಸ್ಟಾವೆಸ್ಟ್ಲ್ಯಾಂಡ್ ಎಡಬ್ಲ್ಯೂ101 ಹೆಲಿಕಾಪ್ಟರ್ ಗಳನ್ನು ಕೊಳ್ಳುವ ಕರಾರಾಗಿತ್ತು. ಈ ಹೆಲಿಕಾಪ್ಟರ್ ಗಳನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಇತರ ವಿವಿಐಪಿಗಳಿಗಾಗಿ ಕೊಳ್ಳಲಾಗುತ್ತಿತ್ತು.
ಆದರೆ, ಆಂಗ್ಲೋ ಇಟಾಲಿಯನ್ ಕಂಪನಿಯ ಜೊತೆ ಈ ಡೀಲ್ ಕುದುರಿಸಲು ಭಾರತೀಯ ರಾಜಕಾರಣಿಗಳಿಗೆ ಲಂಚ ನೀಡಲೆಂದು ಆಗಸ್ಟಾವೆಸ್ಟ್ಲ್ಯಾಂಡ್ ಕಂಪನಿ ಮಧ್ಯವರ್ತಿಯಾಗಿದ್ದ ಕ್ರಿಸ್ಚಿಯನ್ ಮೈಕೆಲ್ ಗೆ 225 ಕೋಟಿ ರುಪಾಯಿ ನೀಡಿತ್ತು. 2013ರ ಫೆಬ್ರವರಿ 13ರಂದು ಆಗಸ್ಟಾವೆಸ್ಟ್ಲ್ಯಾಂಡ್ ಕಂಪನಿಯ ಮೂಲ ಕಂಪನಿಯಾದ ಫಿನ್ಮೆಕಾನಿಕಾದ ಸಿಇಓ ಗುಸೆಪ್ಪಿ ಓರ್ಸಿ ಬಂಧನವಾಗುತ್ತಿದ್ದಂತೆ ಈ ಹಗರಣ ಬೆಳಕಿಗೆ ಬಂದಿತು.
ಇಟಲಿಯ ನ್ಯೂಸ್ ಪೇಪರ್ ಲೆಟ್ಟೇರಾ 43 ಪ್ರಕಾರ, ಮೈಕೆಲ್ ತಂದೆ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಹತ್ತಿರವಾಗಿದ್ದ. ಇಟಲಿಯ ಕೋರ್ಟ್ ನಲ್ಲಿ ಸಲ್ಲಿಸಲಾದ ಚಾರ್ಚ್ ಶೀಟ್ ಪ್ರಕಾರ ತಿಳಿದುಬಂದಿದ್ದೇನೆಂದರೆ, ಹೆಲಿಕಾಪ್ಟರ್ ನಿರ್ಮಾತೃ ಕಂಪನಿಯಿಂದ ಈ ಡೀಲ್ ಕುದುರಿಸಲು 'ಕುಟುಂಬ' 200 ಕೋಟಿ ರುಪಾಯಿ ಲಂಚ ಪಡೆದಿದೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : 34 ಮಂದಿ ವಿರುದ್ಧ ಚಾರ್ಜ್ ಶೀಟ್
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಧ್ಯವರ್ತಿ ಕ್ರಿಸ್ಚಿಯನ್ ಮೈಕೆಲ್ ನನ್ನು ಒಪ್ಪಿಸಬೇಕೆಂದು ಭಾರತ ಮನವಿ ಸಲ್ಲಿಸಿತ್ತು. ಮೈಕೆಲ್ ವಿರುದ್ಧ ಪ್ರಬಲವಾದ ಸಾಕ್ಷ್ಯಾಧಾರಗಳು ಇದ್ದಿದ್ದರಿಂದ ಈ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಭಾರತಕ್ಕೆ ಮೈಕೆಲ್ ನನ್ನು ಒಪ್ಪಿಸಲು ಆದೇಶ ನೀಡಿದೆ. ಈ ಆದೇಶ ಅರೇಬಿಕ್ ಭಾಷೆಯಲ್ಲಿದ್ದು, ಭಾಷಾಂತರವಾಗಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಚಾರ್ಚ್ ಶೀಟ್ ಹಾಕಿದೆ. ದುಬೈನಲ್ಲಿರುವ ತನ್ನದೇ ಕಂಪನಿಯಾದ ಗ್ಲೋಬಲ್ ಸರ್ವೀಸಸ್ ಎಫ್ಜಡ್ಇ ಮೂಲಕ ಮೈಕೆಲ್ ಹಣ ನೀಡಿದ್ದ. ಈ ಪ್ರಕರಣದಲ್ಲಿ ಮಾಜಿ ವಾಯು ಸೇನಾಪತಿ ಎಸ್ ಪಿ ತ್ಯಾಗಿ ಮತ್ತು ಆತನ ಸಂಬಂಧಿ ಸೇರಿದಂತೆ ಹಲವರ ವಿರುದ್ಧ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊರಿಸಲಾಗಿದೆ.
ತನಿಖೆ ನಡೆಸುತ್ತಿರುವ ಭಾರತದ ಮತ್ತು ಯುಎಇ ಅಧಿಕಾರಿಗಳು ಮೈಕೆಲ್ ಮೇಲೆ ಇಲ್ಲದ ಒತ್ತಡ ಹೇರುತ್ತಿದ್ದು, ಇಟಲಿ ಮೂಲದ ಭಾರತದ ರಾಜಕಾರಣಿಯೊಬ್ಬರ ಹೆಸರನ್ನು ಹೆಸರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪವನ್ನು ಸಿಬಿಐ ಸಾರಾಸಗಟಾಗಿ ತಳ್ಳಿಹಾಕಿತ್ತು. ಮೈಕೆಲ್ ನನ್ನು ವಶಕ್ಕೆ ತೆಗೆದುಕೊಂಡ ಮೇಲೆ ಸಿಬಿಐ ವಿಚಾರಣೆ ನಡೆಸಲಿದೆ.