ಅಫ್ಘಾನಿಸ್ತಾನ ಬಿಟ್ಟು ಕೊಡದಿದ್ದರೆ ಏನ್ ಮಾಡುತ್ತಿದ್ದರು ಗೊತ್ತಾ ತಾಲಿಬಾನಿಗಳು?
ಕಾಬೂಲ್, ಆಗಸ್ಟ್ 16: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪ್ರದೇಶಕ್ಕೆ ತಾಲಿಬಾನ್ ಸಂಘಟನೆ ಉಗ್ರರು ಲಗ್ಗೆ ಇಡುತ್ತಿದ್ದಂತೆ ಶಾಂತವಾಗಿದ್ದ ನಗರದ ಇಡೀ ಚಿತ್ರಣವೇ ಬದಲಾಗಿ ಹೋಗಿದೆ. ದೇಶದ ಚುಕ್ಕಾಣಿ ಹಿಡುದ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಅಶ್ರಫ್ ಘನಿಯವರೇ ರಾಜಧಾನಿಯಿಂದ ಕಾಲ್ಕಿತ್ತಿದ್ದಾರೆ. ಜಾಗತಿಕ ಮಾಧ್ಯಮಗಳ ವರದಿ ಪ್ರಕಾರ, ಅಘ್ಘಾನಿಸ್ತಾನವನ್ನೇ ತೊರೆದಿರುವ ಘನಿ ಯುನೈಟೆಡ್ ಸ್ಟೇಟ್ಸ್ ಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ರಕ್ಕಸರ ರೌದ್ರನರ್ತನಕ್ಕೆ ಎಡೆ ಮಾಡಿಕೊಡಬಾರದು ಎಂಬ ಉದ್ದೇಶದಿಂದಲೇ ತಾವು ದೇಶವನ್ನು ತೊರೆದು ಹೋಗಿರುವುದಾಗಿ ಅಧ್ಯಕ್ಷ ಅಶ್ರಫ್ ಘನಿ ಹೇಳುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಧಿಕಾರದ ಗದ್ದುಗೆ ಏರುವುದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ಸಾವಿರ ಸಾವಿರ ಜನರು ದೇಶವನ್ನು ತೊರೆದು ವಿದೇಶಗಳಿಗೆ ಹಾರುತ್ತಿದ್ದಾರೆ.
ತಾಲಿಬಾನ್ ಪಾರುಪತ್ಯ: ಅಫ್ಘಾನ್ ಗದ್ದುಗೆ ಬಿಟ್ಟು ಇಳಿದ ಅಧ್ಯಕ್ಷ ಅಶ್ರಫ್ ಘನಿ!
ತಮ್ಮ ಪ್ರಾಣ ಉಳಿಸಿಕೊಳ್ಳುವುದಕ್ಕೆ ಸಾರ್ವಜನಿಕರು ಅಫ್ಘಾನ್ ಮತ್ತು ರಾಜಧಾನಿ ಕಾಬೂಲ್ನಿಂದ ಹಾರಿ ಹೋಗುತ್ತಿದ್ದಾರೆ. ಶಾಂತಿಯುತ ರೀತಿಯಲ್ಲಿ ಅಧಿಕಾರ ವರ್ಗಾವಣೆ ಮಾಡುವಂತೆ ಆಗ್ರಹಿಸಿದ ತಾಲಿಬಾನ್ ಅನ್ನು ಎದುರಿಸಲಾಗದೇ ಅಧ್ಯಕ್ಷರು ದೇಶವನ್ನು ತೊರೆದರಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ತಾವು ಅಫ್ಘಾನ್ ತೊರೆಯುವುದಕ್ಕೆ ಮೂಲ ಕಾರಣವೇನು ಎಂಬುದನ್ನು ಸ್ವತಃ ಅಶ್ರಫ್ ಘನಿ ಬಿಚ್ಚಿಟ್ಟಿದ್ದಾರೆ. ಅಶ್ರಫ್ ಘನಿ ನೀಡಿದ ಉತ್ತರ ಹಾಗೂ ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಗೊಂದಲಮಯ ವಾತಾವರಣದ ಬಗ್ಗೆ ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.
ದೇಶ ಬಿಟ್ಟು ಹೋಗಿದ್ದೇಕೆ ಅಶ್ರಫ್ ಘನಿ
"60 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕಾಬೂಲ್ ನಗರದಲ್ಲಿ ರಕ್ತಪಾತದ ಮೂಲಕ "ದೊಡ್ಡ ಮಾನವ ದುರಂತ" ಸಂಭವಿಸದಿರಲಿ ಎಂದು ನಾನು ದೇಶ ತೊರೆದಿದ್ದೇನೆ. ಯುದ್ಧ ಪೀಡಿತ ರಾಷ್ಟ್ರವನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ತನ್ನ ಮುಂದಿನ ಉದ್ದೇಶವನ್ನು ಬಹಿರಂಗ ಪಡಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ತಮ್ಮ ಭವಿಷ್ಯದ ಬಗ್ಗೆ ಗೊಂದಲಮಯವಾಗಿ ಯೋಚಿಸುತ್ತಿರುವ ಸಾರ್ವಜನಿಕರಿಗೆ ಧೈರ್ಯ ತುಂಬಬೇಕಿದೆ," ಎಂದು ಅಶ್ರಫ್ ಘನಿ ಹೇಳಿದ್ದಾರೆ.
ತಾಲಿಬಾನ್ ಪ್ರವೇಶದ ಬೆನ್ನಲ್ಲೇ ಅಧ್ಯಕ್ಷರು ಜೂಟ್!
ಕಳೆದ ಆಗಸ್ಟ್ 15ರ ಭಾನುವಾರ ಮೊದಲು ಕಾಬೂಲ್ ಹೊರವಲಯಕ್ಕೆ ತಾಲಿಬಾನ್ ಉಗ್ರರು ಲಗ್ಗೆ ಇಟ್ಟರು. ಅಫ್ಘಾನ್ ಸರ್ಕಾರಕ್ಕೆ ಅಲ್ಲಿಂದಲೇ ಸಂದೇಶ ರವಾನಿಸಿದ ತಾಲಿಬಾನ್ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ಎಚ್ಚರಿಕೆ ನೀಡಿತು. ತಾಲಿಬಾನ್ ಕಾಬೂಲ್ ನಗರದಲ್ಲಿ ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಅಲರ್ಟ್ ಆದರು. ಸಂಜೆ ವೇಳೆಗೆ ತಮ್ಮ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋಹಿಬ್ ಜೊತೆಗೆ ಓಮನ್ ರಾಷ್ಟ್ರಕ್ಕೆ ಹಾರಿದರು. ಸೋಮವಾರದ ವೇಳೆಗೆ ಓಮನ್ ನಿಂದ ಯುನೈಟೆಡ್ ಸ್ಟೇಟ್ಸ್ ನತ್ತ ಅಶ್ರಫ್ ಘನಿ ಹಾರಿದ್ದಾರೆ ಎಂದು ತಿಳಿದು ಬಂದಿದೆ.
ಅಧ್ಯಕ್ಷ ಅಶ್ರಫ್ ಘನಿ ನೀಡಿದ ಮೊದಲ ಪ್ರತಿಕ್ರಿಯೆ
ಅಫ್ಘಾನಿಸ್ತಾನ ತೊರೆದ ಬಳಿಕ ಅಧ್ಯಕ್ಷ ಅಶ್ರಫ್ ಘನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. "ತಾಲಿಬಾನ್ ಸಶಸ್ತ್ರ ಪಡೆಯಾಗಿ ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ನಾನು ಏನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ದೊಡ್ಡ ಸವಾಲಿನ ಪ್ರಶ್ನೆ ಆಗಿತ್ತು. ಕಳೆದ 20 ವರ್ಷಗಳಿಂದ ನಾನು ಯಾವ ರಾಷ್ಟ್ರವನ್ನು ರಕ್ಷಿಸುವುದಕ್ಕಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೆನೋ ಇಂದು ಅದೇ ನೆಚ್ಚಿನ ದೇಶವನ್ನು ಬಿಟ್ಟು ಹೋಗುವಂತಾ ಸ್ಥಿತಿ ಎದುರಾಗಿದೆ," ಎಂದಿದ್ದಾರೆ.
ರಕ್ತಪಾತ ತಪ್ಪಿಸಲು ಅಫ್ಘಾನ್ ತೊರೆದ ಅಶ್ರಫ್ ಘನಿ
"ತಾಲಿಬಾನ್ ಉಗ್ರರು ನನ್ನನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು. ಅವರು ಇಡೀ ಕಾಬೂಲ್ ಮತ್ತು ಕಾಬೂಲ್ ಜನತೆ ಮೇಲೆ ದಾಳಿ ನಡೆಸುವುದಕ್ಕಾಗಿ ಬಂದಿದ್ದರು. ಈಗಾಗಲೇ ಅಸಂಖ್ಯಾತ ಜನರು ಹುತಾತ್ಮರಾಗಿದ್ದು, ಅದು ಹಾಗೆ ಮುಂದುವರಿದಿದ್ದರೆ ಕಾಬೂಲ್ ನಗರದ ವಿನಾಶಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತಿತ್ತು. ಅದರಿಂದ 60 ಲಕ್ಷ ಜನಸಂಖ್ಯೆಯುಳ್ಳ ನಗದಲ್ಲಿ ಮಾನವ ದುರಂತವೊಂದು ನಡೆದು ಹೋಗುತ್ತಿತ್ತು. ಈ ರಕ್ತಪಾತವನ್ನು ತಡೆಯುವ ಉದ್ದೇಶದಿಂದ ಅಧಿಕಾರವನ್ನು ತ್ಯಜಿಸುವುದು ಉತ್ತಮ ಎನಿಸಿ ಈ ನಿರ್ಧಾರ ತೆಗೆದುಕೊಂಡಿದ್ದೆನು," ಎಂದು ಅಶ್ರಫ್ ಘನಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಾಲಿಬಾನ್ ಕೈಗೆ ಅಫ್ಘಾನ್ ಪ್ರಜೆಗಳ ಭವಿಷ್ಯ
"ತಾಲಿಬಾನ್ ಉಗ್ರ ಸಂಘಟನೆಯು ಖಡ್ಗ ಮತ್ತು ಬಂದೂಕುಗಳ ಮೂಲಕ ತೀರ್ಪನ್ನು ಗೆದ್ದಿದೆ. ಈಗ ದೇಶವಾಸಿಗಳ ಗೌರವ, ಸಂಪತ್ತು ಮತ್ತು ಸ್ವಾಭಿಮಾನವನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಅವರು ನ್ಯಾಯಬದ್ಧವಾಗಿ ಪ್ರಜೆಗಳ ಹೃದಯವನ್ನು ಗೆದ್ದಿಲ್ಲ. ಇತಿಹಾಸದ ಪುಸ್ತಕದಲ್ಲಿ ಅನ್ಯಾಯದ ಮಾರ್ಗವಾಗಿ ಅಧಿಕಾರ ಹಿಡಿದವರಿಗೆ ಅದು ಶಾಶ್ವತವಾಗಿ ಉಳಿಯುವುದಿಲ್ಲ, ಅಂಥ ಅಧಿಕಾರವು ಅವರಿಗೆ ನ್ಯಾಯವನ್ನು ಒದಗಿಸುವುದಿಲ್ಲ," ಎಂದು ತಜಕಿಸ್ತಾನದಲ್ಲಿ ಆಶ್ರಯ ಪಡೆದ 72 ವರ್ಷದ ರಾಜಕಾರಣಿಯೊಬ್ಬರು ಹೇಳಿದ್ದಾರೆ.
ಅಫ್ಘಾನಿಸ್ತಾನ ಭವಿಷ್ಯದ ಪ್ರಶ್ನೆಗೆ ಉತ್ತರಿಸಿ ಎಂದ ಅಶ್ರಫ್ ಘನಿ
"ತಾಲಿಬಾನ್ ಸಂಘಟನೆಯ ಉಗ್ರರು ಈಗ ಅಫ್ಘಾನಿಸ್ತಾನದ ಹೆಸರು ಮತ್ತು ಗೌರವವನ್ನು ರಕ್ಷಿಸಲು ಅಥವಾ ಇತರ ಸ್ಥಳಗಳು ಮತ್ತು ನೆಟ್ವರ್ಕ್ಗಳಿಗೆ ಆದ್ಯತೆ ನೀಡುವ ಹೊಸ ಐತಿಹಾಸಿಕ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ," ಎಂದು ಘಾನಿ ಹೇಳಿದ್ದಾರೆ. ತಾಲಿಬಾನ್ ಆಕ್ರಮಣದಿಂದಾಗಿ ದೇಶದ ಪ್ರಜೆಗಳಲ್ಲಿ ಅಭದ್ರತೆ ಮತ್ತು ಭವಿಷ್ಯದ ಭಯ ಕಾಡುತ್ತಿದೆ. ಎಲ್ಲ ಪ್ರಜೆಗಳು, ರಾಷ್ಟ್ರ, ನೆರೆಹೊರೆ ವಲಯಗಳು ಮತ್ತು ದೇಶದ ಸಹೋದರಿಯರು ಮತ್ತು ಮಹಿಳೆಯರಿಗೆ ಭರವಸೆಯನ್ನು ನೀಡುವುದು ತಾಲಿಬಾನ್ ಹೊಣೆಯಾಗಿರುತ್ತದೆ," ಎಂದು ಘನಿ ಹೇಳಿದ್ದಾರೆ.
"ಸ್ಪಷ್ಟವಾದ ಯೋಜನೆಯನ್ನು ರೂಪಿಸಿ, ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಿರಿ. ನನ್ನ ದೇಶದ ಸೇವೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಸದಾ ಸನ್ನದ್ಧರಾಗಿರುತ್ತೇವೆ ಎಂಬುದನ್ನು ಪ್ರಜೆಗಳ ಎದುರು ದೃಢಪಡಿಸಿರಿ. ಪ್ರಜೆಗಳ ಭವಿಷ್ಯದ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಮೂಡಿಸಿರಿ," ಎಂದಿದ್ದಾರೆ.
ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಇತಿಹಾಸ
ಶೈಕ್ಷಣಿಕ ತಕ್ಷ ಹಾಗೂ ಅರ್ಥಶಾಸ್ತ್ರಜ್ಞರಾದ ಅಶ್ರಫ್ ಘನಿ ಅಫ್ಘಾನಿಸ್ತಾನದ 14ನೇ ಅಧ್ಯಕ್ಷರಾಗಿದ್ದರು. 2014ರ ಸಪ್ಟೆಂಬರ್ 20ರಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2019ರ ಸಪ್ಟೆಂಬರ್ 28ರಂದು ಎರಡನೇ ಬಾರಿಗೆ ಅಫ್ಘಾನ್ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದರು. ಸುದೀರ್ಘ ಪ್ರಕ್ರಿಯೆಯ ನಂತರ ಕಳೆದ ಫೆಬ್ರವರಿ 2020ರಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಗಿದ್ದು, ಕಳೆದ ವರ್ಷ ಮಾರ್ಚ್ 9ರಂದು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಶ್ರಫ್ ಘನಿ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಣದಿಂದ ಮಾನವಶಾಸ್ತ್ರಜ್ಞರಾಗಿದ್ದ ಅವರು ಈ ಹಿಂದೆ ಹಣಕಾಸು ಸಚಿವರಾಗಿ ಮತ್ತು ಕಾಬೂಲ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.
ತಾಲಿಬಾನ್ ಮುಷ್ಠಿಯಲ್ಲಿದ್ದ ಅಫ್ಘಾನಿಸ್ತಾನ
ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಅದರ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು.
ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್
ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಯುಎಸ್ ವಾಯುಸೇನೆ ಬೆಂಬಲದ ಹೊರತಾಗಿಯೂ ತಾಲಿಬಾನ್ ಶಕ್ತಿಶಾಲಿ ಆಗುತ್ತಿದೆ. ಯುಎಸ್ ಸೇನಾ ಪಡೆಯನ್ನು ಹಿಂತೆಗೆದುಕೊಂಡ ಒಂದು ವಾರದಲ್ಲೇ ಇಡೀ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಅಫ್ಘಾನಿಸ್ತಾನ ಸರ್ಕಾರ ಮತ್ತು ಸೇನೆಯನ್ನು ಆಕ್ರಮಿಸಿಕೊಂಡ ತಾಲಿಬಾನ್ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಒಂದೇ ವಾರದಲ್ಲಿ ದೇಶದ ಪ್ರಮುಖ ಪ್ರದೇಶಗಳ ಮೇಲೆ ತಾಲಿಬಾನ್ ಆಕ್ರಮಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ಸೋಲಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಂಘಟನೆಗೆ ಸಹಕಾರ ನೀಡಿದ ಸರ್ಕಾರದ ಭದ್ರತಾ ಪಡೆಗಳನ್ನು ಅಲ್ಲಿಂದ ಹಿಂತಿರುಗಿ ಕಳುಹಿಸಲಾಗಿದೆ. ಆದರೆ ತಾಲಿಬಾನ್ ಬಂಡುಕೋರರಿಗೆ ಬೆದರಿ ವಾಪಸ್ಸಾದ ಅಫ್ಘಾನ್ ಸೇನೆ ಮತ್ತು ಯೋಧರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಶತಕೋಟಿಗಳನ್ನು ಖರ್ಚು ಮಾಡಿ ಅಮೆರಿಕಾದ ಸೇನೆಗಳಿಂದ ಅಫ್ಘಾನ್ ಅದೆಂಥಾ ತರಬೇತಿಗಳನ್ನು ಪಡೆದುಕೊಂಡಿದೆ ಎಂಬು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.