'ಅಫ್ಘಾನ್ ಸ್ಥಿತಿ ದುರ್ಬಲ, ಸರ್ಕಾರದಲ್ಲಿ ಸರ್ವರಿಗೂ ಪ್ರಾತಿನಿಧ್ಯ ಅಗತ್ಯ': ಭಾರತ
ನವದೆಹಲಿ, ಸೆಪ್ಟೆಂಬರ್, 11: ಮೂರು ದಿನಕ್ಕೂ ಮುಂಚೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಸರ್ಕಾರವನ್ನು ರಚಿಸಿದೆ. ಈ ಸರ್ಕಾರದಲ್ಲಿ ಯಾವುದೇ ಮುಸ್ಲಿಮೇತರರು ಇಲ್ಲ ಹಾಗೂ ಯಾವುದೇ ಮಹಿಳೆಯರಿಗೂ ಸ್ಥಾನವನ್ನು ನೀಡಿಲ್ಲ. ಈ ವಿಚಾರದಲ್ಲಿ ಹೇಳಿಕೆ ನೀಡಿರುವ ಭಾರತ, "ಸಮಾಜದ ಎಲ್ಲಾ ಸಮುದಾಯವನ್ನು ಒಳಗೊಂಡ, ಎಲ್ಲರಿಗೂ ಪ್ರಾತಿನಿಧ್ಯವಿರುವ ಸರ್ಕಾರ ಅಫ್ಘಾನಿಸ್ತಾನದಲ್ಲಿ ರಚನೆ ಆಗಬೇಕಿದೆ," ಎಂದು ಹೇಳಿದೆ.
"ಈ ಹಿಂದೆ ಅಫ್ಘಾನಿಸ್ತಾನವು ನಮ್ಮ ಉತ್ತಮ ನೆರೆಯ ದೇಶವಾಗಿತ್ತು ಹಾಗೂ ನಮ್ಮ ಜನರೊಂದಿಗೆ ಹೆಚ್ಚು ಸ್ನೇಹಪರವಾಗಿರುವ ದೇಶವಾಗಿತ್ತು. ಆದರೆ ಈಗ ತಾಲಿಬಾನ್ ವಶದಲ್ಲಿ ಇರುವ ಅಫ್ಘಾನಿಸ್ತಾನದ ಪರಿಸ್ಥಿತಿಯು ನಮ್ಮಲ್ಲಿ ಕಾಳಜಿಯನ್ನು ಹುಟ್ಟಿಸಿದೆ," ಎಂದು ಶುಕ್ರವಾರ ಭಾರತವು ತಿಳಿಸಿದೆ.
ತಾಲಿಬಾನ್ ಭಯೋತ್ಪಾದಕರಿಗೆ ಪ್ರೇರಣೆಯಾಗಲಿದೆ ಎಂದ ಬ್ರಿಟನ್ ಗುಪ್ತಚರ ಇಲಾಖೆ ಮುಖ್ಯಸ್ಥ
ತಾಲಿಬಾನ್ ಸರ್ಕಾರ ರಚನೆಯಾದ ಬಳಿಕ ಭಾರತವು ನೀಡಿದ ಮೊದಲ ಹೇಳಿಕೆ ಇದಾಗಿದೆ. ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಯುನೈಟೆಡ್ ಸ್ಟೇಟ್ಸ್ಗೆ ಭಾರತದ ಖಾಯಂ ಪ್ರತಿನಿಧಿಯಾದ ಟಿ ಎಸ್ ತಿರುಮೂರ್ತಿ ಅಫ್ಘಾನಿಸ್ತಾನದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
"ಅಫ್ಘಾನಿಸ್ತಾನದಲ್ಲಿ ಎಲ್ಲಾ ಸಮುದಾಯವನ್ನು ಒಳಗೊಂಡ, ಎಲ್ಲಾ ಸಮುದಾಯಕ್ಕೆ ಪ್ರಾತಿನಿಧ್ಯವನ್ನು ಹೊಂದಿರುವ ಸರ್ಕಾರದ ರಚನೆ ಆಗಬೇಕು ಎಂದು ಭಾರತವು ಹೇಳುತ್ತದೆ. ರಾಜಕೀಯ ಇತ್ಯರ್ಥವನ್ನು ಮಾಡಿಕೊಂಡು ಎಲ್ಲಾ ಸಮುದಾಯವನ್ನು ಒಳಗೊಂಡ ಸರ್ಕಾರವನ್ನು ರಚನೆ ಮಾಡಿದರೆ ಹಾಗೂ ಎಲ್ಲಾ ಸಮುದಾಯಕ್ಕೆ, ವರ್ಗಕ್ಕೆ ಸಮಾನ ಅವಕಾಶವನ್ನು ನೀಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಂದು ಸ್ವೀಕಾರಾರ್ಹ ಸ್ಥಿತಿ ಉಂಟಾಗುತ್ತದೆ," ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ 33 ಜನರನ್ನು ಒಳಗೊಂಡ ಸರ್ಕಾರವನ್ನು ರಚನೆ ಮಾಡಿದೆ. ಈ ಸಂಪುಟದಲ್ಲಿ ಮೂವರು ಮಾತ್ರ ಅಫ್ಘಾನೇತರು ಆಗಿದ್ದಾರೆ. ಸರ್ಕಾರದ ಎರಡನೇ ಉಪ ಮುಖ್ಯಸ್ಥ ಅಬ್ದುಲ್ ಸಲಾಂ ಹನಾಫಿ ಉಜ್ಬೇಕಿಸ್ತಾನ್ ದೇಶದವರು ಆಗಿದ್ದಾರೆ. ಸೇನಾ ಮುಖ್ಯಸ್ಥ ಕರಿ ಫಸಿಹುದ್ದೀನ್ ಮತ್ತು ಆರ್ಥಿಕ ಮಂತ್ರಿ ಖಾರಿ ದೀನ್ ಹನೀಫ್ ತಜಕೀಸ್ತಾನದವರು ಆಗಿದ್ದಾರೆ. ಹಾಗೆಯೇ ಮಹಿಳೆಯರಿಗೆ ಯಾವುದೇ ಸ್ಥಾನವನ್ನು ನೀಡಿಲ್ಲ ಈ ಎಲ್ಲಾ ಅಂಶವನ್ನು ಪರಿಗಣನೆಗೆ ತೆಗೆದುಕೊಂಡ ಟಿ ಎಸ್ ತಿರುಮೂರ್ತಿ, "ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯು ತೀರಾ ದುರ್ಬಲವಾಗಿದೆ," ಎಂದಿದೆ.
ಮಹಿಳೆಯರು ಇರುವುದು ಮಂತ್ರಿ ಆಗುವುದಕ್ಕಲ್ಲ, ಜನ್ಮ ನೀಡುವುದಕ್ಕೆ: ಅಫ್ಘಾನ್ ಸಚಿವನ ನುಡಿಮುತ್ತು!
"ಅಫ್ಘಾನಿಸ್ತಾನದ ನೆರೆ ರಾಷ್ಟ್ರವಾದ ಕಾರಣ ಹಾಗೂ ಮಿತ್ರ ರಾಷ್ಟ್ರವಾಗಿದ್ದ ಕಾರಣ ನಮಗೆ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯು ತೀರಾ ಕಾಳಜಿಯುತವಾಗಿದೆ. ಅಫ್ಘಾನಿಸ್ತಾನದ ಜನರ ಭವಿಷ್ಯದ ಬಗ್ಗೆ ಯಾವುದೇ ಉತ್ತಮ ಅಭಿಪ್ರಾಯವಿಲ್ಲ. ಕಳೆದ ಇಪ್ಪತ್ತು ದಶಕದಲ್ಲಿ ಅಫ್ಘಾನಿಸ್ತಾನವು ಪಡೆದ ಎಲ್ಲವನ್ನು ಕಳೆದುಕೊಳ್ಳುವ ಭೀತಿಯು ಇದೆ. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಮಹಿಳೆಯರ ಧನಿಯನ್ನು ಕೇಳಬೇಕು, ಅಫ್ಘಾನಿಸ್ತಾನದ ಮಕ್ಕಳ ಆಂಕಾಕ್ಷೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯಾಗಬೇಕು ಎಂಬುವುದನ್ನು ನಾವು ಪುನರುಚ್ಛಾರ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮಂಗಳವಾರ ತಾಲಿಬಾನ್ ಘೋಷಣೆ ಮಾಡಿದೆ. ತಾಲಿಬಾನ್ ಸಂಸ್ಥಾಪಕ ಮತ್ತು ದಿವಂಗತ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಯಾಕೂಬ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ. ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಲಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ಸಚಿವ ಸಂಪುಟದಲ್ಲಿ ಮಹಿಳೆಯರು ಇಲ್ಲದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನಿರೀಕ್ಷೆಯಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಈ ಬಗ್ಗೆ ಹೇಳಿಕೆ ನೀಡಿದ್ದ ತಾಲಿಬಾನ್ ವಕ್ತಾರ ಸೈಯದ್ ಜೆಕ್ರುಲ್ಲಾ ಹಶಿಮಿ, "ಮಹಿಳೆಯರು ಸಚಿವರಾಗುವಂತಿಲ್ಲ, ನೀವು ಅವಳ ನೆತ್ತಿ ಮೇಲೆ ಏನನ್ನಾದರೂ ಹೊರಸಿದರೆ ಅದನ್ನು ಅವರು ಹೊತ್ತುಕೊಳ್ಳುವ ಶಕ್ತಿ ಇರುವುದಿಲ್ಲ. ಸಂಪುಟದಲ್ಲಿ ಇರುವುದು ಮಹಿಳೆಯರಿಗೆ ಅತ್ಯವಶ್ಯಕವಲ್ಲ, ಅವರು ಜನ್ಮ ನೀಡಬೇಕು. ಮಹಿಳಾ ಪ್ರತಿಭಟನಾಕಾರರು ಇಡೀ ಅಫ್ಘಾನಿಸ್ತಾನದ ಮಹಿಳೆಯರನ್ನು ಪ್ರತಿನಿಧಿಸುವಂತಿಲ್ಲ," ಎಂದು ಟೋಲೋ ಸುದ್ದಿ ಸಂಸ್ಥೆಗೆ ಹಶಿಮಿ ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)