ತಾಲಿಬಾನ್ ಉಗ್ರರ ಜೊತೆ ಸಂಧಾನ, ಅಮೆರಿಕ ಬ್ರೋಕರ್..!
ಎಲ್ಲೆಂದರಲ್ಲಿ ಸಿಡಿಯುವ ಬಾಂಬ್ಗಳು. ಪಾರ್ಲಿಮೆಂಟ್, ಮಾರ್ಕೆಟ್, ಜನವಸತಿ ಪ್ರದೇಶ ಎಂಬ ವ್ಯತ್ಯಾಸ ಇಲ್ಲದೆ ನಡೆಯುವ ಉಗ್ರರ ದಾಳಿ. ಅಂದಹಾಗೆ ಇದು ಅಫ್ಘಾನಿಸ್ತಾನದ ಸದ್ಯದ ಸ್ಥಿತಿ. ಹಲವು ದಶಕಗಳಿಂದ ಅಫ್ಘಾನಿಸ್ತಾನದ ಪರಿಸ್ಥಿತಿ ಹೀಗೆ ಇದೆ.
ಅಲ್ಲಿನ ಜನ ನೆಮ್ಮದಿಯಾಗಿ ಓಡಾಡಲು ಸಾಧ್ಯವಿಲ್ಲ, ಮನೆಯಲ್ಲಿದ್ದರೂ ಸುರಕ್ಷತೆ ಇಲ್ಲ. ಅಷ್ಟಕ್ಕೂ ಇಷ್ಟಕ್ಕೆಲ್ಲಾ ಕಾರಣ ಮಾನವನ ರೂಪದಲ್ಲಿರುವ ರಾಕ್ಷಸರು. ತಾಲಿಬಾನಿ ಉಗ್ರರ ಕೈಯಲ್ಲಿ ಹೀಗೆ ಅಫ್ಘಾನಿಸ್ತಾನ ಕ್ಷಣಕ್ಷಣಕ್ಕೂ ನಲುಗುತ್ತಿದೆ. ಆದರೆ ಈ ಹಿಂಸಾಚಾರಕ್ಕೆಲ್ಲಾ ಫುಲ್ಸ್ಟಾಪ್ ಇಟ್ಟು, ಶಾಂತಿ ಸ್ಥಾಪನೆ ಮಾಡಬೇಕೆಂದು ಅಫ್ಘಾನಿಸ್ತಾನ ಸರ್ಕಾರ ಹಲವು ವರ್ಷಗಳಿಂದ ಪರದಾಡುತ್ತಿದೆ. ಹಲವಾರು ಪ್ರಯತ್ನಗಳ ನಂತರ ಅಫ್ಘಾನ್ ಸರ್ಕಾರದ ಉದ್ದೇಶ ಈಗ ಈಡೇರುತ್ತಿದೆ.
ಬಾಂಬ್ ದಾಳಿಯಲ್ಲಿ ಅಫ್ಘಾನ್ ಉಪಾಧ್ಯಕ್ಷ ಜಸ್ಟ್ ಮಿಸ್..!
ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಿರುವ ತಾಲಿಬಾನಿ ಮುಂಖಂಡರು, ಒಪ್ಪಂದಕ್ಕೆ ಸಿದ್ಧವಾಗಿ ಚರ್ಚೆಯಲ್ಲಿ ತೊಡಗಿದ್ದಾರೆ. ಖತಾರ್ ರಾಜಧಾನಿ ದೋಹಾ ಇದಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಇನ್ನೂ ಉಗ್ರರು ಹೀಗೆ ಶಾಂತಿ ಮಾತುಕತೆಗೆ ಒಪ್ಪಿ, ಅಫ್ಘಾನಿಸ್ತಾನ ಸರ್ಕಾರದ ಜೊತೆ ಚರ್ಚೆಗೆ ಮುಂದಾಗುವಲ್ಲಿ ಅಮೆರಿಕದ ಶ್ರಮ ಬಹಳಷ್ಟಿದೆ. ಹೀಗಾಗಿ ಖುದ್ದು ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಉಗ್ರರ ಜೊತೆಗಿನ ಶಾಂತಿ ಮಾತುಕತೆ ಸಭೆಗೆ ಹಾಜರಾಗಿದ್ದಾರೆ.
ಉಗ್ರರಿಗೆ ನೀತಿ ಪಾಠ ಮಾಡಿದ್ದ ಟ್ರಂಪ್..!
ತಾಲಿಬಾನಿ ಉಗ್ರರನ್ನು ಅಫ್ಘಾನಿಸ್ತಾನ ಸರ್ಕಾರದ ಜೊತೆ ರಾಜಿ ಮಾಡಿಸಲು ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್ ಅಖಾಡಕ್ಕೆ ಇಳಿದಿದ್ದರು. ಇನ್ನೇನು ಮಾತುಕತೆಗೆ ವೇದಿಕೆ ಸಿದ್ಧವಾಗಬೇಕು ಎನ್ನುವಷ್ಟರಲ್ಲಿ ಪಾಪಿ ಉಗ್ರರು ಬಾಲಬಿಚ್ಚಿದ್ದರು. ಅಮೆರಿಕ ಸೈನಿಕರ ಮೇಲೆ ದಾಳಿ ನಡೆಸಿ, ಹಲವರನ್ನು ಹತ್ಯೆ ಮಾಡಿದ್ದರು. ಇದರಿಂದ ವಿಶ್ವದ ದೊಡ್ಡಣ್ಣ ಕೆಂಡಾಮಂಡಲವಾಗಿ ತಾಲಿಬಾನಿಗಳ ಜೊತೆ ಮಾತುಕತೆ ಸಾಧ್ಯವಿಲ್ಲ ಎಂದಿದ್ದ. ಇದಾದ ನಂತರವೂ ಕೂಡ ಅಫ್ಘಾನಿಸ್ತಾನ ಸರ್ಕಾರ ಪ್ರಯತ್ನ ಮುಂದುವರಿಸಿತ್ತು. ಇದರ ಭಾಗವಾಗಿ ಆಗಸ್ಟ್ನಲ್ಲಿ 100 ಉಗ್ರರನ್ನು ಜೈಲಿನಿಂದ ರಿಲೀಸ್ ಮಾಡಿತ್ತು ಅಫ್ಘಾನಿಸ್ತಾನದ ಅಶ್ರಫ್ ಘನಿ ಸರ್ಕಾರ.
ಇದರಿಂದ ಅಮೆರಿಕ ಲಾಭ ಪಡೆಯುತ್ತಾ..?
ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ನೆಪದಲ್ಲಿ ಬಂದು ಸೇರಿದ್ದ ಅಮೆರಿಕ ಪಡೆಗಳು ಈಗ ತವರಿಗೆ ಮರಳಬೇಕಿದೆ. ಅಮೆರಿಕ ಕೂಡ ಆರ್ಥಿಕವಾಗಿ ತೀರಾ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದಲ್ಲಿರುವ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಈಗಾಗಲೇ ನೂರಾರು ಬೆಟಾಲಿಯನ್ಗಳನ್ನು ಟ್ರಂಪ್ ಮರಳಿ ತಮ್ಮ ದೇಶಕ್ಕೆ ಕರೆಸಿಕೊಂಡಿದ್ದಾರೆ. ಆದರೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದೆ. ಹಾಗಂತ ದಿಢೀರ್ ಅಫ್ಘಾನಿಸ್ತಾನದಿಂದ ಅಷ್ಟೂ ಸೈನಿಕರನ್ನು ವಾಪಸ್ ಕರೆಯಲು ಆಗುವುದಿಲ್ಲ. ಹೀಗೆ ಮಾಡಿದರೆ ಮತ್ತೆ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಈ ಕಾರಣಕ್ಕೆ ಅಮೆರಿಕ ತಾಲಿಬಾನಿ ಉಗ್ರರು ಮತ್ತು ಅಫ್ಘಾನಿಸ್ತಾನ ಸರ್ಕಾರದ ಜೊತೆ ಸಂಧಾನಕ್ಕೆ ಬ್ರೋಕರ್ ರೀತಿ ಮಧ್ಯಸ್ಥಿಕೆ ವಹಿಸಿದೆ. ಈ ಮೂಲಕ ತನ್ನ ಬೇಳೆಯನ್ನೂ ಬೇಯಿಸಿಕೊಳ್ಳುತ್ತಿದೆ.
ಸ್ವಾತಂತ್ರ್ಯೋತ್ಸವ ದಿನದಂದೇ ಉಗ್ರರ ದಾಳಿ: ಎಲ್ಲಿ ಗೊತ್ತಾ..?
ತಾಲಿಬಾನ್ ಉಗ್ರರಿಗೆ ಭಾರತದ ವಾರ್ನಿಂಗ್..!
ತಾಲಿಬಾನ್ ಉಗ್ರ ಸಂಘಟನೆ ಮುಖಂಡರ ಜೊತೆಗೆ ಅಫ್ಘಾನಿಸ್ತಾನ ಸರ್ಕಾರ ಮಾತುಕತೆ ಮುಂದಾಗಿರುವ ವಿಚಾರವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಏಕೆಂದರೆ ಅಫ್ಘಾನಿಸ್ತಾನ ಮೊದಲಿನಿಂದಲೂ ಭಾರತದ ಒಳ್ಳೆಯ ಸ್ನೇಹಿತ. ಆದರೆ ಅಫ್ಘಾನಿಸ್ತಾನ ಸರ್ಕಾರ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡರೆ, ಮುಂದೆ ಏನಾದರೂ ವ್ಯತ್ಯಾಸವಾಗಿ, ಭಾರತದ ಜೊತೆಗಿನ ಸಂಬಂಧ ಹಾಳಾಗಬಾರದು ಎಂಬುದ ಮೋದಿ ಸರ್ಕಾರದ ಉದ್ದೇಶ. ಹೀಗಾಗಿ ಸಭೆಯನ್ನುದ್ದೇಶಿಸಿ ಮಾತನಾಡಿರುವ ವಿದೇಶಾಂಗ ಸಚಿವ ಜೈಶಂಕರ್, ಶಾಂತಿ ಪ್ರಕ್ರಿಯೆ ಆಫ್ಘಾನಿಸ್ತಾನದ ಸಾರ್ವಭೌಮತೆ ಗೌರವಿಸುವಂತಿರಬೇಕು ಎಂದಿದ್ದಾರೆ. ಅಲ್ಲದೆ ಮಾನವಹಕ್ಕುಗಳು ಸೇರಿದಂತೆ ಪ್ರಜಾಪ್ರಭುತ್ವ ಉಳಿಸುವಂತಿರಬೇಕು ಎಂದು ತಿಳಿದ್ದಾರೆ. ಹಾಗೇ ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನದ ನೆಲ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗಬಾರದು ಎಂಬ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.
ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.
ತಾಲಿಬಾನಿ ಉಗ್ರರಿಗೆ ಹೊಸ ನಾಯಕನಾದ ಯಾಕೂಬ್!
ಶಾಂತಿ ನೆಲೆಸಿದರೆ ಪಾಕಿಸ್ತಾನಕ್ಕೆ ಗುನ್ನಾ..!
ಅಮೆರಿಕ ಈಗ ಒಂದೇ ಏಟಿಗೆ ಎರಡು ಹಕ್ಕಿಗಳಿಗೆ ಗುರಿ ಇಟ್ಟಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಿದರೆ ತನ್ನ ಸೇನೆಯನ್ನು ಆರಾಮಾಗಿ ವಾಪಸ್ ಕರೆಸಿಕೊಳ್ಳಬಹುದು. ಮತ್ತೊಂದ್ಕಡೆ ಪಾಕಿಸ್ತಾನ ಈಗ ಅಮೆರಿಕದ ಹಿಡಿತದಲ್ಲಿ ಇಲ್ಲ. ಹೀಗಾಗಿ ಪಾಕಿಸ್ತಾನದ ಪಕ್ಕದಲ್ಲೇ ತಾನು ಭದ್ರವಾಗಿ ತಳವೂರಬಹುದು ಎಂಬುದು ಕಿಲಾಡಿ ಅಮೆರಿಕದ ಲೆಕ್ಕಾಚಾರ. ಅದೇನೆ ಇರಲಿ ದಶಕಗಳ ಕಾಲ ನೆಮ್ಮದಿಯನ್ನೇ ಕಾಣದ ಮೂರು ತಲೆಮಾರುಗಳು ಅಫ್ಘಾನಿಸ್ತಾನದಲ್ಲಿ ನರಕ ಕಾಣುತ್ತಿವೆ. ಜೀವ ಉಳಿಯುತ್ತೋ, ಇಲ್ಲವೋ ಎಂಬ ಅನುಮಾನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈಗಲಾದರೂ ತಾಲಿಬಾನ್ ಉಗ್ರರು ಬಾಲ ಮುದುಡಿಕೊಂಡು ಸುಮ್ಮನಿರುತ್ತಾರಾ, ಇಲ್ಲ ಮತ್ತೆ ಬಾಲ ಬಿಚ್ಚಲಿದ್ದಾರಾ ಎಂಬುದನ್ನ ಕಾದು ನೋಡಬೇಕಿದೆ.