ಮುರಿದುಬಿದ್ದ ಐತಿಹಾಸಿಕ ಶಾಂತಿ ಒಪ್ಪಂದ: ತಾಲಿಬಾನ್ ರಕ್ತಸಿಕ್ತ ಅಧ್ಯಾಯ ಇನ್ನೊಂದು ಮಜಲಿಗೆ
ಕಾಬೂಲ್, ಮಾರ್ಚ್ 3: ಹತ್ತೊಂಬತ್ತು ವರ್ಷಗಳ ರಕ್ತಸಿಕ್ತ ಅಧ್ಯಾಯಕ್ಕೆ ಕೊನೆಗೂ ಮುಕ್ತಿ ಸಿಗಬಹುದು ಎನ್ನುವ ಆಶಾಭಾವನೆಯಿಂದ ಕಾಯುತ್ತಿದ್ದ ಅಫ್ಘಾನಿಸ್ತಾನದ ಜನತೆಗೆ ಬಹುದೊಡ್ಡ ಶಾಕ್ ಎದುರಾಗಿದೆ.
ಅಮೆರಿಕಾದ ಜೊತೆ ಯುದ್ದ ಮಾಡಿ ಹೈರಾಣವಾಗಿರುವ ತಾಲಿಬಾಲ್ ಉಗ್ರ ಸಂಘಟನೆಗೂ ಮತ್ತೊಮ್ಮೆ ಯುದ್ದ ಬೇಕಾಗಿರಲಿಲ್ಲ. ಆದರೆ, ಎರಡು ದಿನಗಳ ಹಿಂದೆಯಷ್ಟೇ ಅಮೆರಿಕಾದ ಜೊತೆ ಶಾಂತಿ ಒಪ್ಪಂದ ಮುರಿದುಬಿದ್ದಿದ್ದರಿಂದ ಹಿಂದಿದ್ದ ಪರಿಸ್ಥಿತಿಯೇ ಮುಂದುವರಿಯಲಿದೆ. ಅದಕ್ಕೆ ಕಾರಣ, ಅಫ್ಘಾನಿಸ್ತಾನ ಸರಕಾರ ತಾಳಿದ ಕಠಿಣ ನಿಲುವು.
ಶಾಂತಿ ಒಪ್ಪಂದ ಮುರಿದು ಬಿದ್ದ ನಂತರ, ಅಫ್ಘಾನಿಸ್ತಾನ ಮಿಲಿಟರಿ ಪಡೆಗಳ ಮೇಲೆ, ಮತ್ತೆ ಹಿಂಸಾತ್ಮಕ ಹೋರಾಟ ನಡೆಸುವುದಾಗಿ ಬಂಡುಕೋರರ ಗುಂಪು ಘೋಷಿಸುವ ಮೂಲಕ ಯುದ್ಧ ಸಂತ್ರಸ್ತ ಆಫ್ಘಾನಿಸ್ತಾನದಲ್ಲಿ ಮತ್ತೆ ಆತಂಕದ ಛಾಯೆ ಆವರಿಸಿದೆ.
ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದ: ಭಾರತಕ್ಕೆ ಆಹ್ವಾನ
"ಅಮೆರಿಕಾದ ಜೊತೆಗಿನ ನಮ್ಮ ಒಪ್ಪಂದದ ಪ್ರಕಾರ, ಮುಜಾಹಿದ್ದೀನ್ ಗಳು ವಿದೇಶಿ ಪಡೆಗಳ ಮೇಲೆ ದಾಳಿ ನಡೆಸುವಂತಿಲ್ಲ. ಆದರೆ, ಸರಕಾರದ ವಿರುದ್ದದ ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ತಾಲಿಬಾಲ್ ವಕ್ತಾರ ಜಬೀಹುಲ್ಲಾ ಮುಜಾಹಿದ್ದೀನ್ ಹೇಳಿದ್ದಾನೆ. ಶಾಂತಿ ಒಪ್ಪಂದ ಮುರಿದುಬೀಳಲು ಕಾರಣವೇನು?
ತಾಲಿಬಾನ್ ಉಗ್ರರಿಂದ ನಲುಗಿ ಹೋಗಿದ್ದ ಅಘ್ಘಾನಿಸ್ತಾನ
ತಾಲಿಬಾನ್ ಉಗ್ರರಿಂದ ನಲುಗಿ ಹೋಗಿದ್ದ ಅಘ್ಘಾನಿಸ್ತಾನದಲ್ಲಿ ತನ್ನ ಪಡೆಗಳನ್ನು ನಿಯೋಜಿಸಿದ್ದ ಅಮೆರಿಕ 19 ವರ್ಷಗಳ ಬಳಿಕ ಮೊದಲ ಬಾರಿಗೆ ತಾಲಿಬಾನ್ ಜತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಕತಾರ್ ರಾಜಧಾನಿ ದೋಹಾದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರಂತೇ, ಅಮೆರಿಕವು 9/11ರ ದಾಳಿಯ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ನಿಯೋಜಿಸಿದ್ದ ತನ್ನ ಸಾವಿರಾರು ಸೇನಾ ಪಡೆಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕಿತ್ತು.
ಅಫ್ಘಾನಿಸ್ತಾನ ಸೇನೆ ವಿರುದ್ಧ ಆಕ್ರಮಣ ಮುಂದುವರಿಕೆ
19 ವರ್ಷಗಳ ಹಗೆತನ ಬಿಟ್ಟು ಶಾಂತಿ ಒಪ್ಪಂದ ಏರ್ಪಟ್ಟ ಎರಡು ದಿನಗಳು ಕಳೆಯುವ ಮುನ್ನವೇ ಒಪ್ಪಂದ ಮುರಿದುಬಿದ್ದಿದೆ. ಅಫ್ಘಾನಿಸ್ತಾನ ಸೇನೆ ವಿರುದ್ಧ ಆಕ್ರಮಣ ಮುಂದುವರೆಸುವುದಾಗಿ ತಾಲಿಬಾನ್ ಘೋಷಣೆ ಮಾಡಿದೆ. ಅಮೆರಿಕಾ ಮತ್ತು ತಾಲಿಬಾನ್ ನಡುವೆ ಷರತ್ತು ಬದ್ಧ ಶಾಂತಿ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ, ತಾಲಿಬಾನ್ ಮತ್ತು ಆಫ್ಘಾನಿಸ್ತಾನ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆದಿತ್ತು.
ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಬಹಿರಂಗ ಹೇಳಿಕೆ
ಯಾವುದೇ ಕಾರಣಕ್ಕೂ ತನ್ನ ಜೈಲುಗಳಲ್ಲಿರುವ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಅಫ್ಘಾನಿಸ್ತಾನ ಬಂದಿದ್ದರಿಂದ, ಈ ಶಾಂತಿ ಒಪ್ಪಂದ ಮುರಿದುಬಿದ್ದಿದೆ. "ಕೈದಿಗಳನ್ನು ಬಿಡುಗಡೆಗೊಳಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ ಎನ್ನುವ ಭರವಸೆಯನ್ನು ನಾನು ಅಮೆರಿಕಾಗೆ ನೀಡಿರಲಿಲ್ಲ" ಎಂದು ಅಧ್ಯಕ್ಷ ಅಶ್ರಫ್ ಘನಿ ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದ್ದಾರೆ.
ಅಫ್ಘನ್ ಬಣಗಳ ನಡುವೆ ಸಭೆಯನ್ನು ಏರ್ಪಡಿಸಲಾಗಿತ್ತು
ನಾರ್ವೇ ದೇಶದ ರಾಜಧಾನಿ ಓಸ್ಲೋದಲ್ಲಿ ಇದೇ ಮಾರ್ಚ್ ಹತ್ತರಂದು ಅಫ್ಘನ್ ಬಣಗಳ ನಡುವೆ ಸಭೆಯನ್ನು ಏರ್ಪಡಿಸಲಾಗಿತ್ತು. ಅದಕ್ಕೂ ಮುನ್ನ, ಶಾಂತಿ ಸಂಧಾನದ ಪ್ರಕಾರ, ಆಫ್ಘಾನಿಸ್ತಾನದ ವಿವಿಧ ಜೈಲಿನಲ್ಲಿರುವ ತನ್ನ ಐದು ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಬೇಕಿತ್ತು. ಜೊತೆಗೆ, ಇನ್ನೊಂದು ವರ್ಷದ ಅವಧಿಯಲ್ಲಿ ಅಮೆರಿಕಾ ಪಡೆಗಳು ಅಲ್ಲಿಂದ ಹೊರ ನಡೆಯಬೇಕಾಗಿತ್ತು.
ರಕ್ತಸಿಕ್ತ ಅಧ್ಯಾಯಕ್ಕೆ ಮುಕ್ತಿ ಸಿಗುವ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ
ಇದಲ್ಲದೇ, ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರಕಾರದ ಜೊತೆಗೆ ತಾಲಿಬಾನ್ ಬಂಡುಕೋರರು ಮಾತುಕತೆ ನಡೆಸಬೇಕಾಗಿತ್ತು. ಇದು ಶಾಂತಿ ಸಂಧಾನದ ಷರತ್ತುಗಳು. ಈಗ, ಅಲ್ಲಿನ ಸರಕಾರ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪದೇ ಇರುವುದರಿಂದ, ನಮ್ಮ ಸಂಧಾನ ಏನಿದ್ದರೂ ಅಮೆರಿಕಾದ ಜೊತೆಗೆ, ಸರಕಾರದ ಜೊತೆಗೆ ಅಲ್ಲ ಎಂದು ತಾಲಿಬಾನ್ ಹೇಳಿದೆ. ಹಾಗಾಗಿ, ಅಲ್ಲಿನ ರಕ್ತಸಿಕ್ತ ಅಧ್ಯಾಯಕ್ಕೆ ಮುಕ್ತಿ ಸಿಗುವ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ.