ಉಗ್ರರಿಗೆ ಹೆದರಿ ಓಡಿ ಹೋದ ಸೈನಿಕರು, ಕಣ್ಣೀರು ತರಿಸುತ್ತೆ ಯೋಧರ ಕಥೆ-ವ್ಯಥೆ
ಬಲಾಢ್ಯರ ಕಾಳಗದಲ್ಲಿ ನಲುಗುವುದು ನಿಶ್ಯಕ್ತರು ಮಾತ್ರ. ಅಂದಹಾಗೆ ಈ ಪೀಠಿಕೆ ಹಾಕಲು ಕಾರಣ ಅಫ್ಘಾನ್ನ ಸೈನಿಕರ ಕರುಣಾಜನಕ ಸ್ಥಿತಿ. ತುತ್ತು ಅನ್ನಕ್ಕಾಗಿ, ಕುಟುಂಬದ ಅಗತ್ಯತೆಗಾಗಿ, ಇನ್ಯಾವುದೋ ಕಾರಣಕ್ಕಾಗಿ ಸೇನೆ ಸೇರಿದ್ದ ಅಫ್ಘಾನಿಸ್ತಾನಿ ಯೋಧರು ಇಷ್ಟುದಿನ ತಮ್ಮ ಪ್ರಜೆಗಳ ಜೀವ ರಕ್ಷಣೆಗೆ ಹೋರಾಡಿದ್ದರು. ಆದ್ರೆ ಪರಿಸ್ಥಿತಿ ಈಗ ಬದಲಾಗಿದೆ. ಯಾವಾಗ ಅಮೆರಿಕ ತನ್ನ ಪೂರ್ತಿ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದೆ ಕರೆಸಿಕೊಳ್ಳಲು ನಿರ್ಧಾರ ಕೈಗೊಂಡಿತೋ, ಆ ಕ್ಷಣವೇ ಶುರುವಾಯಿತು ನೋಡಿ ಗ್ರಹಚಾರ.
ಅಫ್ಘಾನಿಸ್ತಾನದ ಗಲ್ಲಿಗಲ್ಲಿಯಲ್ಲೂ ಅಡಗಿ ಕೂತಿದ್ದ ರಾಕ್ಷಸ ರೂಪದ ತಾಲಿಬಾನ್ ಉಗ್ರರು ಕೆಂಪಿರುವೆಯಂತೆ ಹೊರ ಬಂದಿದ್ದಾರೆ. ಕಂಡ ಕಂಡೆಡೆ ನುಗ್ಗಿ ದಾಳಿ ನಡೆಸಿ, ಜನರ ರಕ್ತ ಚೆಲ್ಲಾಡುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಯೋಧರಿಗೆ ಏನೂ ಮಾಡಲು ಆಗುತ್ತಿಲ್ಲ. ಏಕೆಂದ್ರೆ ಅದೇ ಹಳೆಯ ಕಿತ್ತೋದ ರೈಫಲ್ಗಳು, ಕೆಲಸಕ್ಕೆ ಬಾರದ ಬಾಂಬ್ಗಳ ಜೊತೆಗೆ ಹೋರಾಟ ನಡೆಸಬೇಕಾಗಿದೆ. ಆದ್ರೆ ತಾಲಿಬಾನ್ ಗ್ಯಾಂಗ್ ಅತ್ಯಾಧುನಿಕ ವೆಪನ್ಸ್ ಹೊಂದಿದೆ.
'ಭಾರತವೇ ನಮ್ಮನ್ನು ಕಾಪಾಡಬೇಕು, ಅಮೆರಿಕ ನಮಗೆ ಮಾಡಿದ್ದು ಮಹಾಮೋಸ’
ಇದೇ ಕಾರಣಕ್ಕೆ, ಉಗ್ರರಿಂದ ಜೀವ ಉಳಿಸಿಕೊಳ್ಳಲು ಅಫ್ಘಾನಿಸ್ತಾನಿ ಸೈನಿಕರು ದೇಶ ಬಿಟ್ಟು ಪಕ್ಕದ ರಾಷ್ಟ್ರಗಳಿಗೆ ಓಡಿ ಹೋಗುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸುಮಾರು 1500 ಅಫ್ಘಾನಿಸ್ತಾನಿ ಸೈನಿಕರು ಗಡಿ ದಾಟಿ ತಜಕಿಸ್ತಾನ ಸೇರಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವಿದ್ದು ಅಫ್ಘಾನ್ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದೆ.
ಸೈನಿಕರೇ ಉಗ್ರರ ಟಾರ್ಗೆಟ್..!
ಒಂದು ಕಡೆ ಸಂಧಾನ ಸೂತ್ರದ ನಾಟಕವಾಡುತ್ತಿರುವ ತಾಲಿಬಾನಿ ಉಗ್ರರು, ಮತ್ತೊಂದು ಕಡೆ ಅಫ್ಘಾನ್ನಲ್ಲಿ ಹಿಂಸಾಚಾರ ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಾಲಿಬಾನ್ನ ಸಶಸ್ತ್ರದಳ ಅನೇಕ ಪ್ರದೇಶಗಳಿಗೆ ನುಗ್ಗಿ ಹಿಂಸೆ ನಡೆಸುತ್ತಿದೆ. ಅದರಲ್ಲೂ ಅಫ್ಘಾನಿಸ್ತಾನದ ಸೈನಿಕರು ಹಾಗೂ ಪೊಲೀಸರನ್ನ ಕಂಡರೆ ಸಾಕು ಅಲ್ಲೇ ಗುಂಡಿಕ್ಕಿ ಸಾಯಿಸುತ್ತಿದ್ದಾರೆ. ವಿಕೃತ ಮನೋಭಾವದ ತಾಲಿಬಾನಿಗಳು, ಮಹಿಳೆ ಅಥವಾ ಮಕ್ಕಳು ಎನ್ನದೆ ದೌರ್ಜನ್ಯ ನಡೆಸುತಿದ್ದಾರೆ. ಹೀಗಾಗಿಯೇ ಭಯಗೊಂಡ ಅಫ್ಘಾನ್ ಸೈನಿಕರು, ದೇಶಬಿಟ್ಟು ಹೋಡಿ ಹೋಗುತ್ತಿದ್ದಾರೆ.
ಅಫ್ಘಾನ್ ಏನು ಹೇಳುತ್ತೆ..?
ಅಫ್ಘಾನಿಸ್ತಾನ ಬಿಟ್ಟು ಅಮೆರಿಕ ಸೇನೆ ಹೊರಗೆ ಹೋಗುತ್ತಿರುವುದು ಅಲ್ಲಿನ ಸರ್ಕಾರಕ್ಕೆ ಚಿಂತೆ ತಂದಿದ್ದರೆ, ಉಗ್ರ ಪಡೆಗೆ ಖುಷಿ ಕೊಟ್ಟಿದೆ. ಏಕೆಂದರೆ ದಿಢೀರ್ ಅಮೆರಿಕ ಸೇನೆ ಹೊರ ಹೋದರೆ ತಾಲಿಬಾನ್ ಉಗ್ರರ ಉಪಟಳ ಹೆಚ್ಚಲಿದೆ. ಅಮೆರಿಕ ಸೇನೆ ಇದ್ದಾಗಲೇ ತಾಲಿಬಾನ್ ಅಟ್ಟಹಾಸ ಕಂಟ್ರೋಲ್ಗೆ ಬರಲಿಲ್ಲ. ಇನ್ನು ಅಮೆರಿಕ ತನ್ನ ಸೇನೆ ಹಿಂದಕ್ಕೆ ಕರೆಸಿಕೊಂಡರೆ ಅಫ್ಘಾನ್ ಪರಿಸ್ಥಿತಿ ಹೇಗಿರಬೇಡ? ಇದೇ ಚಿಂತೆ ಅಫ್ಘಾನಿಸ್ತಾನದ ಸರ್ಕಾರಕ್ಕೂ ಕಾಡುತ್ತಿದೆ. ಅಮೆರಿಕ ಇಂತಹ ಸಂದರ್ಭದಲ್ಲಿ ಅಫ್ಘಾನ್ನ ಒಂಟಿಯಾಗಿ ಬಿಟ್ಟು ಹೋದರೆ ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅಪಾಯ ಇದೆ ಎನ್ನುತ್ತಾರೆ ತಜ್ಞರು.
ಒಂದೊಂದೇ ಹಳ್ಳಿ ಸ್ವಾಹ..!
ತಾಲಿಬಾನ್ ಉಗ್ರರು ಅದೆಷ್ಟು ಕಿರಾತಕರು ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯತೆ ಇಲ್ಲ. ಒಂದು ಕಾಲದ ಸ್ವರ್ಗದಂತಹ ಜಾಗ ಅಫ್ಘಾನಿಸ್ತಾನ ಇಂದು ನರಕವಾಗಿ ಬದಲಾಗಲು ತಾಲಿಬಾನ್ ಗ್ಯಾಂಗ್ ಕಾರಣವಾಯಿತು. ಆದರೆ 20 ವರ್ಷಗಳ ಹಿಂದೆ ಅಮೆರಿಕ ಸೇನೆ ಭಾರಿ ಪ್ರಮಾಣದಲ್ಲಿ ತನ್ನ ಗ್ಯಾಂಗ್ ಕರೆದುಕೊಂಡು ಬಂದಿತ್ತು. ಆ ಬಳಿಕ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿತ್ತು ಎನ್ನಬಹದಾದರೂ ಉಗ್ರರ ದಾಳಿ ನಿಂತಿರಲಿಲ್ಲ. ಈಗ ದಿಢೀರ್ ಅಮೆರಿಕ ಸೇನೆ ಜಾಗ ಖಾಲಿ ಮಾಡುತ್ತಿದ್ದು, ತಾಲಿಬಾನ್ ಕಿರಾತಕರು ಒಂದೊಂದೇ ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಜನರನ್ನ ಮನಸ್ಸಿಗೆ ಬಂದಂತೆ ಹಿಂಸಿಸುತ್ತಿದ್ದಾರೆ.
ಅಫ್ಘಾನ್ ಜನರಿಗೆ ನೆಮ್ಮದಿಯೇ ಇಲ್ಲ
ಬ್ರಿಟಿಷರಿಂದ ಅಫ್ಘಾನ್ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.
ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ
ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.