ಕೊರೊನಾವೈರಸ್ ತಂದ ವ್ಯಥೆ: ವೈರಸ್ ಪೀಡಿತ ಹೇಳಿದ ಕತೆ
Recommended Video
ಬೀಜಿಂಗ್, ಫೆಬ್ರವರಿ 15: ಕೊರೊನಾ ವೈರಸ್ ಚೀನಾವನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿದೆ. ಈಗಾಗಲೇ ಸಾವಿನ ಸಂಖ್ಯೆ 1500 ದಾಟಿದ್ದು, ಸಾವಿನ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಲೇ ಇದೆ.
ಮೊದಲಿಗೆ ವೈರಸ್ ಕಾಣಿಸಿಕೊಂಡ ವೈರಸ್ನ ತವರಾಗಿರುವ ಚೀನಾದ ವುಹಾನ್ ನಗರದ ಬಳಿ ಇರುವ ಹುಬೇಯಿ ಪಟ್ಟಣ ಹೇ (ಹೆಸರು ಬದಲಾಯಿಸಲಾಗಿದೆ) ಎಂಬ ಕೊರೊನಾ ವೈರಸ್ ಪೀಡಿತ ತನ್ನ ಅನುಭವವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾನೆ. ಅವರ ಮಾತಿನ ಯಥಾವತ್ತು ಅನುವಾದ ಇಲ್ಲಿದೆ.
ಜನವರಿ 21 ರಂದು ಹೇ ಊಟ ಮಾಡುವ ವೇಳೆ ಸ್ವಲ್ಪ ನಿಶ್ಯಕ್ತಿ ಕಾಣಿಸಿಕೊಂಡಿದೆ. ಆ ವೇಳೆಗೆ ಕೊರೊನಾ ವೈರಸ್ ಕುರಿತು ಹೆಚ್ಚಿನ ಆತಂಕ ಹಬ್ಬಿರಲಿಲ್ಲ. ಕೊರೊನಾ ವೈರಸ್ ನ ಆರಂಭದ ದಿನಗಳವು. ನಂತರ ಹೇ ಉಷ್ಣಾಂಶ ನೋಡಿಕೊಂಡಾಗ ತೀವ್ರ ಜ್ವರ ಬಂದಿರುವುದು ಸ್ಪಷ್ಟವಾಗಿದೆ. ಕೂಡಲೇ ಆತ ವುಹಾನ್ನ ಆಸ್ಪತ್ರೆಗೆ ಹೋಗಿದ್ದಾನೆ.
''ಆಸ್ಪತ್ರೆಗೆ ಹೋದರೆ ಇಡೀಯ ಆಸ್ಪತ್ರೆ ತುಂಬಿದೆ. ಎಲ್ಲರಿಗೂ ಜ್ವರ, ನಿಶ್ಯಕ್ತಿ, ನೆಗಡಿ, ಕೆಮ್ಮು. ಆ ವೇಳೆಗಾಗಲೇ ಕೊರೊನಾ ವೈರಸ್ ಬಗ್ಗೆ ಸುದ್ದಿಗಳು ಹರಿದಾಡಲು ಪ್ರಾರಂಭವಾಗಿತ್ತು. ಹೇ ಹೇಳುವ ಪ್ರಕಾರ, ''ಇಡೀಯ ಆಸ್ಪತ್ರೆ ರೋಗಿಗಳಿಂದ ತುಂಬಿಹೋಗಿತ್ತು. ಎಲ್ಲಾ ಸಿಬ್ಬಂದಿ ಮಾಸ್ಕ್ಗಳನ್ನು ತೊಟ್ಟು ಕೆಲಸ ಮಾಡುತ್ತಿದ್ದರು. ಎಲ್ಲರೂ ಆತಂಕದಲ್ಲಿದ್ದರು. ಅಂತಹಾ ಸನ್ನಿವೇಶವನ್ನು ಆ ವರೆಗೆ ನಾನು ನೋಡಿರಲಿಲ್ಲ''.
''ಮೊದಲ ಬಾರಿಗೆ ಮನೆಗೆ ಕಳುಹಿಸಿಬಿಟ್ಟರು''
''ಮೊದಲಿಗೆ ವೈದ್ಯರನ್ನು ಸಂಪರ್ಕಿಸಿದಾಗ 'ಅಷ್ಟೇನೂ ಸೀರಿಯಸ್ ಅಲ್ಲ' ಎಂದ ವೈದ್ಯರು ಮನೆಗೆ ಕಳುಹಿಸಿಬಿಟ್ಟರು. ನನ್ನ ಮುಂದಿನ ಅಪಾಯಿಂಟ್ಮೆಂಟ್ ಇದ್ದದ್ದು ನಾಲ್ಕು ದಿನಗಳ ನಂತರ. ಮನೆಗೆ ಹೋದ ನಂತರ ಆ ನಾಲ್ಕು ದಿನ ನರಕವನ್ನೇ ಅನುಭವಿಸಿದೆ. ವಿಪರೀತವಾದ ಜ್ವರ, ನಿಶ್ಯಕ್ತಿ, ದೇಹದ ಎಲ್ಲ ಭಾಗಗಳೂ ತಡೆಯಲಾಗದ ನೋವು, ಇದನ್ನು ಮರೆಯಲೆಂದು ಪ್ರತಿದಿನ ಕಾರ್ಟೂನ್ ನೋಡಿದೆ''.
ನಾಲ್ಕು ದಿನಗಳ ನಂತರ ಬಂತು ಸರದಿ: ಹೇ
ನಾಲ್ಕು ದಿನಗಳ ನಂತರ ನನ್ನ ಸರದಿ ಬರುವ ವೇಳೆಗೆ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿಯಾಗಿತ್ತು. ವುಹಾನ್ ನಗರಕ್ಕೆ ದಿಗ್ಭಂದನ ವಿಧಿಸಲಾಗಿತ್ತು. ರಸ್ತೆಗಳೆಲ್ಲಾ ಖಾಲಿ, ಖಾಲಿ. ಯಾವ ಕಚೇರಿ, ಅಂಗಡಿಗಳೂ ತೆರೆದಿಲ್ಲ. ಯಾವ ಜನರ ಮುಖದಲ್ಲೂ ನಗುವಿಲ್ಲ, ಎಲ್ಲರ ಮುಖದಲ್ಲೂ ಸಾವಿನ ಭೀತಿ. ಆಸ್ಪತ್ರೆ ತಲುಪುವ ವೇಳೆಗೆ ಅದೆಷ್ಟು ಕೆಮ್ಮುತ್ತಿದ್ದೆನೆಂದರೆ, ಕೆಮ್ಮಿನಿಂದಾಗಿಯೇ ಸತ್ತು ಹೋಗುತ್ತೇನೆಂದು ನನಗೆ ಅನ್ನಿಸಿಬಿಟ್ಟಿತ್ತು. ಅಷ್ಟೋಂದು ಕೆಮ್ಮು ಎದೆ, ಗಂಟಲು ಉರಿ, ಕರುಳು ಕಿತ್ತು ಬರುವಂತಹಾ ಅನುಭವ. ನಂತರ ನನಗೆ ಸಿಟಿ ಸ್ಕ್ಯಾನ್ ಮಾಡಿದರು. ಕೊರೊನಾವೈರಸ್ ನನ್ನ ಶ್ವಾಸಕೋಶದಲ್ಲಿ ಹಬ್ಬಿರುವ ಬಗ್ಗೆ ಅನುಮಾನವನ್ನು ವೈದ್ಯರು ವ್ಯಕ್ತಪಡಿಸಿದರು.
ಪರೀಕ್ಷೆಗೆ ಬೇಕಿದ್ದ ಸಾಧನೆಗಳು ಖಾಲಿ ಆಗಿದ್ದವು: ಹೇ
ಆದರೆ ಅದಿನ್ನೂ ಅನುಮಾನವೇ ಆಗಿತ್ತು, ಖಚಿತಪಡಿಸಿಕೊಳ್ಳಲು ನ್ಯೂಕ್ಲಿಯರ್ ಆಸಿಡ್ ಪರೀಕ್ಷೆ ಮಾಡಬೇಕಿತ್ತು. ಇಷ್ಟೆಲ್ಲಾ ಆದರೂ ನನ್ನದು ತುರ್ತು ಪರಿಸ್ಥಿತಿ ಅಲ್ಲವೆಂದೇ ವೈದ್ಯರು ಹೇಳುತ್ತಿದ್ದರು. ಏಕೆಂದರೆ ಅದಾಗಲೇ ಮರಣಶಯ್ಯೆ ತಲುಪಿರುವ ಸಾವಿರಾರು ರೋಗಿಗಳು ಅವರ ಮುಂದೆಯೇ ಇದ್ದರು. ಅಷ್ಟೆ ಅಲ್ಲದೆ ಪರೀಕ್ಷೆ ಮತ್ತು ಚಿಕಿತ್ಸೆಗೆ ಅವಶ್ಯಕವಾಗಿದ್ದ ಪರೀಕ್ಷಾ ಸಾಮಗ್ರಿಗಳು ಅದಾಗಲೇ ಖಾಲಿ ಬೇರೆ ಆಗಿದ್ದವು. ಹೆಚ್ಚಿನ ಸಾಮಗ್ರಿಗಳು ಬರಲೆಂದು ವೈದ್ಯರು ಕಾಯುತ್ತಿದ್ದರು.
'ಅಣ್ಣ, ಅಜ್ಜಿಗೂ ಕೊರೊನಾ ವೈರಸ್ ಆವರಿಸಿಕೊಂಡಿತು'
ಎರಡನೇ ಭೇಟಿ ಬಳಿಕ ಮನೆಗೆ ಬಂದ ಮೇಲೆ ಜ್ವರ ಇನ್ನಷ್ಟು ಹೆಚ್ಚಾಯಿತು. ಅದೆಂತಾ ಸುಡು ಜ್ವರ, ಮೈ-ಕೈ ನೋವು ಎಂದರೆ ತಾನಿನ್ನು ಬದುಕುವುದಿಲ್ಲ ಎಂದು ಹೇ ನಿರ್ಣಯಿಸಿ ಆಗಿತ್ತು. ತುಂಬಿದ ಆಸ್ಪತ್ರೆಗಳು, ವೈದ್ಯರಿಗೆ ಅವಶ್ಯಕ ಸಾಮಗ್ರಿಗಳು ಸಿಗದೇ ಇರುವುದು ಇವೆಲ್ಲವೂ ಸೇರಿ ಹೇ ಗೆ ಭರವಸೆಯೇ ಹೊರಟುಹೋಗಿತ್ತು. ಆ ವೇಳೆಗೆ ಆತನ ಅಣ್ಣ ಮತ್ತು ಅಜ್ಜಿಗೆ ಅದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡವು.
ಎಚ್ಐವಿ ಗೆ ನೀಡುವ ಔಷದ ನೀಡಲಾಯಿತು: ಹೇ
ಆ ನಂತರ ಮತ್ತೆ ಹೇ ಆಸ್ಪತ್ರೆಗೆ ಹೋದ ಆತನಿಗೆ ಗ್ಲೂಕೋಸ್ ನೀಡಲಾಯಿತು. ಎಚ್ಐವಿ ಗೆ ನೀಡಲಾಗುವ ಔಷಧಿಯನ್ನು ಸೇರಿಸಿ ತಯಾರಿಸಿದ ಔಷಧವನ್ನು ಹೇ ಗೆ ನೀಡಲಾಯಿತು. ಆಗ ಸ್ವಲ್ಪ ಹೇ ಆರೋಗ್ಯ ಸ್ವಲ್ಪ ಚೇತರಿಸಿಕೊಂಡಿತು. ಜ್ವರ ಸ್ವಲ್ಪ ಇಳಿಯಿತು. ಆ ನಂತರ ನ್ಯೂಕ್ಲಿಕ್ ಆಸಿಡ್ ಪರೀಕ್ಷೆ ಮಾಡಿದರೆ ಹೇ ಗೆ ಕೊರೊನಾ ವೈರಸ್ ಇರುವುದು ಗೊತ್ತಾಯಿತು. ಇದು ನಡೆದದ್ದು ಜನವರಿ 29 ಅಂದರೆ ಹೇ ಮೊದಲ ಬಾರಿಗೆ ಆಸ್ಪತ್ರೆಗೆ ಹೋದ 9 ದಿನಗಳ ನಂತರ.
ಔಷಧ ನೀಡಿ ಮತ್ತೆ ಮನೆಗೆ ಕಳುಹಿಸಿದರು
ಹೇ ಗೆ ವೈದ್ಯರು ಐದು ದಿನಗಳ ಮಟ್ಟಿಗೆ ಸಾಕಾಗುವಷ್ಟು ಆಂಟಿವೈರಸ್ ಔಷಧವನ್ನು ನೀಡಿ ಮನೆಗೆ ಕಳಿಸಿದರು. ಆಸ್ಪತ್ರೆಯಲ್ಲಿ ಹೇ ಅನ್ನು ಇಟ್ಟುಕೊಳ್ಳುವಷ್ಟು ಸ್ಥಳಾವಕಾಶ ಇರಲಿಲ್ಲ. ಒಂಬತ್ತು ದಿನಗಳ ನಂತರ ಫೆಬ್ರವರಿ 9 ರಂದು ಮತ್ತೆ ನ್ಯೂಕ್ಲಿಕ್ ಆಸಿಡ್ ಪರೀಕ್ಷೆ ಮಾಡಿದಾಗ ಹೇ ದೇಹದಿಂದ ಕೊರೊನಾ ವೈರಸ್ ಹೋಗಿರುವುದಾಗಿ ಫಲಿತಾಂಶ ಬಂತು. ಆದರೆ ಇಷ್ಟಕ್ಕೆ ಹೇ ಸಂತೋಶಪಡುವಂತಿರಲಿಲ್ಲ.
''ಪಂಚತಾರಾ ಹೋಟೆಲ್ನಲ್ಲಿ ಭದ್ರತೆಯಲ್ಲಿರಿಸಲಾಯಿತು''
ಹೇ ಅನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಲಾದ ಪಂಚತಾರಾ ಹೋಟೆಲ್ನಲ್ಲಿ ಇಡಲಾಯಿತು. ಅವನಂತೆ ಸಾಕಷ್ಟು ಮಂದಿಯನ್ನು ಅಲ್ಲಿ ಇಡಲಾಗಿತ್ತು. ಅದಕ್ಕೆ ಬಿಗಿ ಭದ್ರತೆಯನ್ನೂ ವಿಧಿಸಲಾಗಿತ್ತು. ಐದು ದಿನ ಅಲ್ಲಿ ಕಳೆದ ನಂತರ ಹೇ ಅನ್ನು ಮನೆಗೆ ಕಳುಹಿಸಲಾಗಿತ್ತು. ಹೇ ಕೊರೊನಾ ವೈರಸ್ ನಿಂದ ಪೂರ್ಣವಾಗಿ ಗುಣಮುಖವಾಗಿದ್ದ. ಆತನಿಗೆ ಕೆಲವು ಎಚ್ಚರಿಕೆಗಳನ್ನು ನೀಡಿ ಕಳುಹಿಸಲಾಗಿತ್ತು.
ವೈದ್ಯರನ್ನು ಕಾಣುವ ಮೊದಲೇ ಸತ್ತು ಹೋದರು ಹಲವರು
ಹೇ ವೈದ್ಯಾಧಿಕಾರಿ ಒಬ್ಬರ ಮಗ ಹಾಗಾಗಿ ಆತನಿಗೆ ಸುಲಭವಾಗಿ ಔಷಧಗಳು, ಆಸ್ಪತ್ರೆ, ವೈದ್ಯರ ಅಪಾಯಿಂಟ್ಮೆಂಟ್ ಸಿಕ್ಕಿತು. ಖುದ್ದು ಹೇ ಹೇಳುವ ಪ್ರಕಾರ, 'ಒಂದು ಟೆಸ್ಟ್ ಮಾಡಿಸಲು ದಿನಗಟ್ಟಲೆ ಕ್ಯೂ ನಲ್ಲಿ ಕಾಯಬೇಕಾದ ಪರಿಸ್ಥಿತಿ ಇತ್ತು. ಕ್ಯೂ ನಲ್ಲಿ ನಿಂತವರೇ ಹಲವಾರು ಮಂದಿ ಸಾವಿಗೆ ಒಳಗಾದರು, ಸರ್ಕಾರ ಸ್ವಲ್ಪ ಬೇಗ ಸ್ಪಂದಿಸಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ''.