ಬೊಕೊ ಹರಾಮ್ ಉಗ್ರರಿಂದ 800 ವಿದ್ಯಾರ್ಥಿಗಳ ಹತ್ಯೆ..?
ನೈಜೀರಿಯಾದಲ್ಲಿ ಮತ್ತೊಮ್ಮೆ ಉಗ್ರರು ಹೇಯ ಕೃತ್ಯವೆಸಗಿದ್ದಾರೆ. ಉತ್ತರ ನೈಜೀರಿಯಾ ರಾಜ್ಯವಾದ ಕತ್ಸಿನಾ ಪ್ರದೇಶದಲ್ಲಿ ಎಕೆ-47 ರೈಫಲ್ ಹಿಡಿದು ಶಾಲೆಗೆ ನುಗ್ಗಿದ ಉಗ್ರರು ಗುಂಡಿನ ಸುರಿಮಳೆಗರೆದಿದ್ದಾರೆ. ಘಟನೆಯ ಬಳಿಕ ನೂರಾರು ವಿದ್ಯಾರ್ಥಿಗಳು ಹತ್ಯೆಯಾಗಿರುವ ಶಂಕೆ ಮೂಡಿದ್ದು, 800 ವಿದ್ಯಾರ್ಥಿಗಳ ಸುಳಿವು ಸಿಗುತ್ತಿಲ್ಲ. ಹೀಗಾಗಿ ಆತಂಕ ಮತ್ತಷ್ಟು ಹೆಚ್ಚಾಗಿದ್ದು ಇವರನ್ನೆಲ್ಲಾ ಉಗ್ರರು ಹತ್ಯೆ ಮಾಡಿದ್ದಾರಾ ಎಂಬ ಅನುಮಾನ ಎದ್ದಿದೆ.
ಉತ್ತರ ನೈಜೀರಿಯಾ ರಾಜ್ಯ ಕತ್ಸಿನಾದ ಸರ್ಕಾರಿ ಸೈನ್ಸ್ ಶಾಲೆಗೆ ಉಗ್ರರು ಬೆಳಗ್ಗೆ ದಿಢೀರ್ ನುಗ್ಗಿದ್ದಾರೆ. ಹೀಗೆ ಕೈಯಲ್ಲಿ ಎಕೆ-47 ರೈಫಲ್ ಹಿಡಿದು ಒಳಬಂದ ರಾಕ್ಷಸರನ್ನು ಕಂಡು ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಜೀವ ಉಳಿಸಿಕೊಳ್ಳಲು ಓಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಉಗ್ರರು ವಿದ್ಯಾರ್ಥಿಗಳ ಮೇಲೆ ಫೈರಿಂಗ್ ಮಾಡಿದ್ದು, ನೂರಾರು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.
ತಕ್ಷಣ ನೈಜೀರಿಯಾ ಸೇನೆ ವಿದ್ಯಾರ್ಥಿಗಳ ನೆರವಿಗೆ ಬಂದಿದೆ. ಆದರೆ ಅಷ್ಟೊತ್ತಿಗೆಲ್ಲಾ ಸಮಯ ಕೈಮೀರಿತ್ತು, ಉಗ್ರರು ಶಾಲೆಯನ್ನ ಭಾಗಶಃ ವಶಕ್ಕೆ ಪಡೆದಿದ್ದರು. ಆದರೂ ಛಲಬಿಡದೆ ಹೋರಾಡಿರುವ ನೈಜೀರಿಯಾ ಸೈನಿಕರು, 200 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ ಎಂದು ನೈಜೀರಿಯಾ ಸರ್ಕಾರ ಪ್ರಾಥಮಿಕ ಮಾಹಿತಿ ನೀಡಿದೆ.
ಬೊಕೊ ಹರಾಮ್ ಉಗ್ರರ ಕೃತ್ಯ..?
ಸದ್ಯಕ್ಕೆ ಲಭಿಸುತ್ತಿರುವ ಮಾಹಿತಿಯಂತೆ ಶಾಲೆ ಮೇಲಿನ ದಾಳಿಯನ್ನ ಬೊಕೊ ಹರಾಮ್ ಉಗ್ರರೇ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಕೆಲದಿನಗಳ ಹಿಂದೆ ರೈತರನ್ನ ಇದೇ ರೀತಿ ಸಾಮೂಹಿಕವಾಗಿ ಕೊಲೆಗೈದು ಪರಾರಿಯಾಗಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ನೂರಾರು ರೈತರನ್ನು ಬೊಕೊ ಹರಾಮಿಗಳು ಬೈಕ್ನಲ್ಲಿ ನುಗ್ಗಿ ಕೊಂದಿದ್ದರು. ಇದೀಗ ಶಾಲೆ ಮೇಲೆಯೂ ಬೊಕೊ ಹರಾಮಿಗಳೇ ದಾಳಿ ಮಾಡಿದ್ರಾ ಎಂಬ ಅನುಮಾನ ದಟ್ಟವಾಗಿದೆ. ಹಾಗೇ ನೈಜೀರಿಯಾದಲ್ಲಿ ಇಂತಹ ಕೃತ್ಯ ಎಸಗುವಲ್ಲಿ ಬೊಕೊ ಹರಾಮಿಗಳು ನಿಸ್ಸೀಮರು. ಇದೇ ಕಾರಣಕ್ಕೆ ನೈಜೀರಿಯಾ ಸರ್ಕಾರ ಬೊಕೊ ಹರಾಮ್ ಉಗ್ರರ ನೆಲೆಗಳ ಮೇಲೆ ದಾಳಿಗೆ ಯೋಜನೆ ರೂಪಿಸಿದೆ. ಶಾಲಾ ಮಕ್ಕಳನ್ನು ಬಚ್ಚಿಟ್ಟಿರುವ ಜಾಗಕ್ಕಾಗಿ ನೈಜೀರಿಯಾ ಸೇನೆ ಬೆದಕಾಡುತ್ತಿದ್ದಾರೆ.
2014ರಲ್ಲಿ ವಿದ್ಯಾರ್ಥಿನಿಯರ ಅಪಹರಣ
ನೈಜೀರಿಯಾದಲ್ಲಿ ಈ ರೀತಿ ವಿದ್ಯಾರ್ಥಿಗಳನ್ನ ಅಪಹರಣ ಮಾಡುತ್ತಿರುವುದು ಇದೇ ಮೊದಲಲ್ಲ. 2014ರಲ್ಲೂ ಬೊಕೊ ಹರಾಮ್ ಉಗ್ರರು ಇದೇ ರೀತಿ ವಿದ್ಯಾರ್ಥಿಗಳನ್ನ ಅಪಹರಣ ಮಾಡಿದ್ದರು. 276 ವಿದ್ಯಾರ್ಥಿನಿಯರು ಬೊಕೊ ಹರಾಮ್ ಉಗ್ರರ ಕೈಯಲ್ಲಿ ನರಳಿದ್ದರು. ಹೀಗೆ ಅಪಹರಣವಾಗಿದ್ದ 276 ವಿದ್ಯಾರ್ಥಿನಿಯರಲ್ಲಿ ಇನ್ನೂ ಹಲವರು ಪತ್ತೆಯಾಗಿಲ್ಲ. ಈ ಪೈಕಿ ಕೆಲವರನ್ನು ಅತ್ಯಾಚಾರ ಮಾಡಿ ಬೊಕೊ ಹರಾಮ್ ಉಗ್ರರ ಕೊಂದಿದ್ದಾರೆ ಎನ್ನಲಾಗಿತ್ತು. ಇನ್ನುಳಿದ ವಿದ್ಯಾರ್ಥಿನಿಯರನ್ನು ಬಲವಂತವಾಗಿ ಬೊಕೊ ಹರಾಮಿಗಳೇ ಮದುವೆಯಾಗಿದ್ದರು.
ರೈತರನ್ನು ಕೊಂದಿದ್ದ ಪಾಪಿಗಳು
ನವೆಂಬರ್ 30ರಂದು ನೈಜೀರಿಯಾದ ಉತ್ತರ ಬೊರ್ನೊ ರಾಜ್ಯದ ರಾಜಧಾನಿ ಮೈಡುಗುರಿಯ ಗರಿನ್ ಮತ್ತು ಕ್ವಾಶೆಬೆ ಪ್ರದೇಶದ ಗದ್ದೆಯಲ್ಲಿ ರೈತರ ನರಮೇಧ ನಡೆಸಿದ್ದರು ಈ ಬೊಕೊ ಹರಾಮಿಗಳು. ಗದ್ದೆಯಲ್ಲಿ ರೈತರು ಭತ್ತ ಕಟಾವು ಮಾಡುತ್ತಿದ್ದಾಗ ಉಗ್ರರು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಸುಮಾರು 110ಕ್ಕೂ ಹೆಚ್ಚು ರೈತರು ಹತ್ಯೆಯಾಗಿದ್ದರು. ನೈಜೀರಿಯಾದಲ್ಲಿ ಹಿಡಿತ ಸಾಧಿಸಲು ಬೊಕೊ ಹರಾಮ್ ಉಗ್ರರು ಎಂತಹ ಹೀನ ಕೃತ್ಯಕ್ಕೂ ಹಿಂಜರಿಯುತ್ತಿಲ್ಲ.
ಆದರೆ ಇವರನ್ನು ನಿಯಂತ್ರಿಸಲು ನೈಜೀರಿಯಾ ಸರ್ಕಾರ ಹಾಗೂ ಸೇನೆಗೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಯುವಕರನ್ನ ಬ್ರೈನ್ ವಾಶ್ ಮಾಡಿ ಸಂಘಟನೆಗೆ ಸೇರಿಸುವ ಕಿರಾತಕರು, ನಂತರ ಅವರಿಂದಲೇ ಮುಗ್ಧರನ್ನ ಹತ್ಯೆ ಮಾಡಿಸುತ್ತಿದ್ದಾರೆ. ಈ ರೀತಿಯಾಗಿ ಬೊಕೊ ಹರಾಮಿ ಉಗ್ರರ ದಾಳಿಗೆ ನೈಜೀರಿಯಾದಲ್ಲಿ ಲಕ್ಷಾಂತರ ಹೆಣಗಳು ಬಿದ್ದಿವೆ. ಹಲವು ವರ್ಷಗಳಿಂದ ಬೊಕೊ ಹರಾಮ್ ಉಗ್ರರು ಹಾಗೂ ನೈಜೀರಿಯಾ ಪಡೆಗಳ ನಡುವೆ ಆಂತರಿಕ ಯುದ್ಧ ನಡೆಯುತ್ತಲೇ ಇದೆ.
ಬೈಕ್ನಲ್ಲಿ ಎಂಟ್ರಿ, ದಿಢೀರ್ ಫೈರಿಂಗ್
ಬೊಕೊ ಹರಾಮಿಗಳು ರೈತರನ್ನು ಕೊಂದು ಹಾಕಿದ ದೃಶ್ಯ ಅದೆಷ್ಟು ಭಯಾನಕವಾಗಿತ್ತು ಎಂದರೆ, ಗದ್ದೆಗಳಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದ ಶ್ರಮಜೀವಿಗಳ ದೇಹವನ್ನ ಛಿದ್ರ ಛಿದ್ರ ಮಾಡಿಬಿಟ್ಟಿದ್ದರು. ಹತ್ತಾರು ಬೈಕ್ಗಳಲ್ಲಿ ದಿಢೀರ್ ಗದ್ದೆಗಳಿಗೆ ಎಂಟ್ರಿಕೊಟ್ಟ ರಾಕ್ಷಸ ಉಗ್ರರು, ರೈತರ ಮೇಲೆ ಇದ್ದಕ್ಕಿದ್ದಂತೆ ಫೈರಿಂಗ್ ಮಾಡಿದ್ದರು. ಅಲ್ಲಿ ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೇ ನೂರಾರು ರೈತರ ಪ್ರಾಣ ಹೋಗಿತ್ತು. ಹತ್ಯೆ ಮಾಡುವ ವೇಳೆ ಮಹಿಳೆಯರು, ಮಕ್ಕಳ ಮುಖ ನೋಡದ ಬೊಕೊ ಹರಾಮಿಗಳು ಎಲ್ಲರನ್ನೂ ಎಳೆದಾಡಿ ಕೊಲೆ ಮಾಡಿದ್ದರು.
ರೈತರ ಮೇಲೆ ಸೇಡು ಏಕೆ..?
ಉಗ್ರರು ಹೀಗೆ ರೈತರ ಮೇಲೆ ದಿಢೀರ್ ದಾಳಿ ನಡೆಸಲು ಕಾರಣವೇನು ಎಂಬುದನ್ನ ಸ್ಥಳೀಯ ಜನಪ್ರತಿನಿಧಿ ಒಬ್ಬರು ಬಿಡಿಸಿ ಹೇಳಿದ್ದರು. ಅಷ್ಟಕ್ಕೂ ಈ ಬೊಕೊ ಹರಾಮಿ ಗುಂಪಿಗೆ ಸೇರಿದ ಉಗ್ರನನ್ನು ಸ್ಥಳೀಯ ರೈತರು ಸೇನೆಗೆ ಒಪ್ಪಿಸಿದ್ದರಂತೆ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಬೊಕೊ ಹರಾಮ್ ರಾಕ್ಷಸರು ದಿಢೀರ್ ಅಂತಾ ದಾಳಿ ನಡೆಸಿದ್ದರು. ರೈತರನ್ನ ಅವರ ಗದ್ದೆಯಲ್ಲೇ ಅಟ್ಟಾಡಿಸಿಕೊಂಡು ಗುಂಡಿಟ್ಟು ಭೀಕರವಾಗಿ ಕೊಲೆಗೈದಿದ್ದರು. ಏನೂ ಅರಿಯದ ಮುಗ್ಧ ಮಕ್ಕಳು ಕೂಡ ಪಾಪಿ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದರು.
ಜಿಹಾದಿ ಕೃತ್ಯಕ್ಕೆ ನರಳುತ್ತಿದೆ ನೈಜೀರಿಯಾ
ಹೌದು, ನೈಜೀರಿಯಾ ಜನರಿಗೆ ನೆಮ್ಮದಿಯೇ ಇಲ್ಲ. ಜಿಹಾದಿಗಳ ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಿಲ್ಲ. ಸರ್ಕಾರಕ್ಕೆ ಜಿಹಾದಿಗಳನ್ನ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿಶ್ವಸಮುದಾಯ ಕೂಡ ಸೈಲೆಂಟ್ ಆಗಿದೆ. ಈ ನಡೆ ನೈಜೀರಿಯಾ ಭವಿಷ್ಯವನ್ನೇ ಮಂಕಾಗಿಸುತ್ತಿದೆ. ಮೊದಲೇ ಬಡತನದ ಬೇಗೆಯಲ್ಲಿ ಬೆಂದಿರುವ ಆಫ್ರಿಕಾ ಖಂಡದ ನೈಜೀರಿಯಾ ನಿವಾಸಿಗಳಿಗೆ ಭವಿಷ್ಯವೇ ಮಂಕಾಗಿದೆ. ಈಗ ಅಪಹರಿಸಿರುವ 800ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉಗ್ರರು ಏನು ಮಾಡಿದ್ದಾರೆ ಎಂಬ ಸುಳಿವು ಸಿಗುವುದು ಅನುಮಾನ. ಹೀಗಾಗಿ ವಿಶ್ವಸಂಸ್ಥೆ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.