ಪ್ಲೀಸ್, ಬದುಕಲು ನಮಗೆ ಜಾಗ ಕೊಡಿ..! ಭಾರತಕ್ಕೆ ಓಡಿ ಬಂದ ಮ್ಯಾನ್ಮಾರ್ ಜನ..!
ಕೈಯಲ್ಲಿ ಚಾಕು, ಗನ್, ಹತ್ಯಾರಗಳು. ಮನೆ ಮನೆಯಲ್ಲೂ ಹೊತ್ತಿದ ದ್ವೇಷದ ಬೆಂಕಿ. ಅಂದಹಾಗೆ ಮ್ಯಾನ್ಮಾರ್ ಸದ್ಯದ ಸ್ಥಿತಿ ಹೀಗಿದೆ. ಸೇನಾ ದಂಗೆ ವಿರುದ್ಧ ಮ್ಯಾನ್ಮಾರ್ನಲ್ಲಿ ಹೊತ್ತಿರುವ ಆಕ್ರೋಶ ತಣ್ಣಗಾಗುತ್ತಿಲ್ಲ. ಜನರು ಸೈಲೆಂಟ್ ಆಗ್ತಿಲ್ಲ, ಅಲ್ಲಿನ ಸೇನಾಧಿಕಾರಿಗಳು ಜನರನ್ನ ಕೊಲ್ಲುವುದನ್ನ ಬಿಡ್ತಿಲ್ಲ.
ಹೀಗಾಗಿಯೇ ಜನ ಕಾನೂನನ್ನ ಕೈಗೆ ತೆಗೆದುಕೊಂಡಿದ್ದಾರೆ. ಈವರೆಗೆ 800ಕ್ಕೂ ಹೆಚ್ಚು ಜನರನ್ನ ಹತ್ಯೆ ಮಾಡಿಸಿರುವ ಸೇನಾಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕೈಯಲ್ಲಿ ವೆಪನ್ಸ್ ಹಿಡಿದುಕೊಂಡು ಸೇನೆ ವಿರುದ್ಧ ತಿರುಗಿಬಿದ್ದಿದ್ದಾರೆ. ಆದರೆ ಹಿಂಸೆ ಮಾಡಲು ಒಪ್ಪದವರು, ಅನಿವಾರ್ಯವಾಗಿ ತಮ್ಮ ತಾಯ್ನಾಡು ಬಿಟ್ಟು ಓಡಿ ಬರುತ್ತಿದ್ದಾರೆ.
ಹೀಗೆ 4 ತಿಂಗಳ ಅಂತರದಲ್ಲೇ ಸುಮಾರು 6000 ಮ್ಯಾನ್ಮಾರ್ ಪ್ರಜೆಗಳು ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾರೆ ಎನ್ನಲಾಗಿದೆ. ಹೀಗೆ ಭಾರತಕ್ಕೆ ಓಡಿ ಬಂದಿದ್ದ ಮ್ಯಾನ್ಮಾರ್ ಅಕ್ರಮ ವಲಸಿಗರ ಪೈಕಿ ಬಹುತೇಕರು ಮಿಜೋರಾಂ ರಾಜ್ಯದಲ್ಲೇ ಠಿಕಾಣಿ ಹೂಡಿ, ಜೀವ ಭಿಕ್ಷೆ ಬೇಡುವಂತಾಗಿದೆ. ತಮ್ಮ ದೇಶಕ್ಕೆ ಮರಳಿ ಹೋದರೆ ಅಲ್ಲಿ ಕೊಲೆ ಮಾಡುತ್ತಿದ್ದಾರೆ ಎಂದು ವಲಸೆ ಬಂದಿರುವ ಮ್ಯಾನ್ಮಾರ್ ಪ್ರಜೆಗಳು ಕಣ್ಣೀರು ಹಾಕುತ್ತಿದ್ದಾರೆ.
ಮ್ಯಾನ್ಮಾರ್ ಪತ್ರ
ಕೆಲ ತಿಂಗಳ ಹಿಂದೆ ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರನ್ನು ವಶಕ್ಕೆ ನೀಡಿ ಎಂದು ಒತ್ತಾಯಿಸಿ ಮ್ಯಾನ್ಮಾರ್ ಪತ್ರ ಬರೆದಿತ್ತು. ಉಭಯ ರಾಷ್ಟ್ರಗಳ ಸಂಬಂಧ ಮುಂದುವರಿಯಲು ಪೊಲೀಸ್ ಅಧಿಕಾರಿಗಳನ್ನು ಮ್ಯಾನ್ಮಾರ್ಗೆ ಹಸ್ತಾಂತರಿಸಿ ಅಂತಾ ಮಿಜೋರಾಂ ರಾಜ್ಯದ ಚಂಪೈ ಜಿಲ್ಲೆಯ ಉಪ ಆಯುಕ್ತೆಗೆ ಮ್ಯಾನ್ಮಾರ್ನ ಅಧಿಕಾರಿಗಳು ಪತ್ರ ಬರೆದಿದ್ದರು. ಪತ್ರ ಬರೆದ ಕೆಲವೇ ದಿನದಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ಭಾರತಕ್ಕೆ ಓಡಿ ಬಂದಿರುವ ಮ್ಯಾನ್ಮಾರ್ ಪೊಲೀಸರು ಅಲ್ಲಿನ ಭಯಾನಕ ಸ್ಥಿತಿಯನ್ನ ಬಿಡಿಸಿಟ್ಟಿದ್ದಾರೆ. ಮ್ಯಾನ್ಮಾರ್ ಜನರ ಸದ್ಯದ ಪರಿಸ್ಥಿತಿ ಹಾಗೂ ಹಿಂಸೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ. ಕಂಡಲ್ಲಿ ಗುಂಡಿಟ್ಟು ಜನರನ್ನ ಕೊಲೆ ಮಾಡುತ್ತಿದೆ ಸೇನೆ.
ಮ್ಯಾನ್ಮಾರ್ ಸೇನೆ ಬಲಿಪಡೆದಿರುವ ಆರೋಪ
ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 800ಕ್ಕೂ ಹೆಚ್ಚು ಜನರನ್ನು ಮ್ಯಾನ್ಮಾರ್ ಸೇನೆ ಬಲಿಪಡೆದಿರುವ ಆರೋಪವಿದೆ. ಹೀಗಾಗಿ ನಾಗರಿಕರನ್ನ ಕೊಂದು ಹಾಕಿರುವ ಮ್ಯಾನ್ಮಾರ್ ಸೇನೆ ವಿರುದ್ಧ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮವನ್ನು ಟೀಕಿಸಿವೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲ್ಲಿನ ಸೇನಾಧಿಕಾರಿಗಳು, ಪ್ರತಿಭಟನೆ ನಡೆಸುತ್ತಿರುವ ಜನರ ನಿಯಂತ್ರಣ ಹಾಗೂ ಹೋರಾಟಗಾರನ್ನು ಚದುರಿಸಲು ಬಲಪ್ರಯೋಗ ಮಾಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಹಲವರು ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಆವರಿಸಿದೆ.
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟ
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಚುನಾವಣೆಯಲ್ಲಿ ಅಕ್ರಮ
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.