"50 ಪ್ರತಿಭಟನಾಕಾರರ ಸಾವು; ಮಯನ್ಮಾರ್ ಸೇನೆ ನಾಚಿಕೆಪಡುವ ದಿನ"
ಮಯನ್ಮಾರ್, ಮಾರ್ಚ್ 27: ಮ್ಯಾನ್ಮಾರ್ನಲ್ಲಿ ಸೇನೆ ಆಡಳಿತವನ್ನು ಖಂಡಿಸಿ ನಡೆಯುತ್ತಿರುವ ಹೋರಾಟದಲ್ಲಿ ಶನಿವಾರ 50 ಪ್ರತಿಭಟನಾಕಾರರನ್ನು ಮಯನ್ಮಾರ್ ಭದ್ರತಾ ಪಡೆ ಗುಂಡಿಕ್ಕಿ ಕೊಂದಿದ್ದು, ಇದು ಮಯನ್ಮಾರ್ ಸೇನಾ ಪಡೆಗೆ ನಾಚಿಕೆ ಪಡುವ ದಿನ ಎಂದು ಖಂಡಿಸಲಾಗಿದೆ.
ಫೆಬ್ರವರಿ 1ರ ಮಿಲಿಟರಿ ದಂಗೆಯನ್ನು ವಿರೋಧಿಸಿ ಯಂಗಾನ್, ಮಂಡಾಲ ಹಾಗೂ ಇತರೆ ನಗರಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆ ನಡೆಸುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬಹುದು ಎಂಬ ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ.
ಮ್ಯಾನ್ಮಾರ್ ನಿರಾಶ್ರಿತರ ಬಗ್ಗೆ ಪ್ರಧಾನಿಗೆ ಮಿಜೋರಾಂ ಸಿಎಂ ಮನವಿ
ಇದುವರೆಗೂ ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಶನಿವಾರ ಮತ್ತೆ ಮಯನ್ಮಾರ್ನ ವಿವಿಧೆಡೆ ಐವತ್ತು ಮಂದಿಯನ್ನು ಕೊಲ್ಲಲಾಗಿದೆ. ಇದು ಮಯನ್ಮಾರ್ ಸೇನಾ ಪಡೆ ನಾಚಿಕೆ ಪಡುವ ದಿನ ಎಂದು ಜುಂತಾ ವಿರೋಧಿ ಸಿಆರ್ಪಿಎಚ್ ವಕ್ತಾರ ಡಾ. ಸಾಸಾ ಖಂಡನೆ ವ್ಯಕ್ತಪಡಿಸಿದ್ದಾರೆ. "300 ಅಮಾಯಕ ನಾಯಕರನ್ನು ಕೊಂದ ನಂತರ ಮಿಲಿಟರಿ ಪಡೆಯವರು ಸಶಸ್ತ್ರ ಪಡೆ ದಿನವನ್ನು ಆಚರಿಸುತ್ತಿದ್ದಾರೆ" ಎಂದು ದೂರಿದ್ದಾರೆ.
ಶನಿವಾರ ಮಯನ್ಮಾರ್ನ ವಿವಿಧೆಡೆ ಸುಮಾರು 50 ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ನೂರಾರು ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಫೆಬ್ರವರಿ 1ರಿಂದ ಗುರುವಾರದವರೆಗೆ ಮಿಲಿಟರಿ ಆಡಳಿತ ವಿರೋಧಿಸಿ ಪ್ರತಿಭಟನೆ ನಡೆಸಿದ ಒಟ್ಟು 2,981 ಮಂದಿಯನ್ನು ಬಂಧಿಸಲಾಗಿದೆ.
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ.