ಶಾಲೆ ಆವರಣದಲ್ಲಿ ರಕ್ತದೋಕುಳಿ, ಉಗ್ರರ ಕೃತ್ಯಕ್ಕೆ 50 ಜನರು ಬಲಿ
ಉಗ್ರರು ಬಾಲ ಮುದುರುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ಕಡೆ ಕೊರೊನಾ ಕಾಟವಾದರೆ, ಮತ್ತೊಂದು ಕಡೆ ಉಗ್ರರು ಆರ್ಭಟಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಬಾಲಕೀಯರ ಶಾಲೆ ಬಳಿ ನಡೆದಿರುವ ಭೀಕರ ಸ್ಫೋಟಕ್ಕೆ ಸುಮಾರು 50 ಮಂದಿ ಬಲಿಯಾಗಿದ್ದು, 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಗ್ರರ ಕೃತ್ಯದಿಂದ ಶಾಲೆ ಆವರಣದಲ್ಲಿ ರಕ್ತದೋಕುಳಿ ನಡೆದಿದೆ. ಮೊದಲು ಕಾರ್ ಬಾಂಬ್ ಸ್ಫೋಟಿಸಿದ್ದ ಪಾಪಿ ಉಗ್ರ ಪಡೆ ಬಳಿಕ ರಾಕೆಟ್ ದಾಳಿ ನಡೆಸಿದೆ. ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನ ಸಯೀದ್-ಉಲ್-ಶುಹಾದಾ ಶಾಲೆ ಆವರಣದಲ್ಲಿ ಉಗ್ರರು ಈ ರೀತಿ ಭೀಕರ ದಾಳಿ ನಡೆಸಿದ್ದಾರೆ.
ಸ್ಫೋಟದ ತೀವ್ರತೆ ಹೇಗಿತ್ತು ಎಂದರೆ ಅಲ್ಲಿ ಮಕ್ಕಳ ಪುಸ್ತಕ, ಬ್ಯಾಗ್ಗಳು ಕೂಡ ರಕ್ತದಲ್ಲಿ ಮುಳುಗಿದ್ದವು. ಹತ್ತಾರು ಜನರ ಗುರುತು ಈಗಲೂ ಪತ್ತೆ ಆಗಿಲ್ಲ. ಇಷ್ಟೆಲ್ಲಾ ಅವಾಂತರ ನಡೆದಿದ್ದರೂ ಯಾವುದೇ ಸಂಘಟನೆ ಕೃತ್ಯದ ಜವಾಬ್ದಾರಿ ಹೊತ್ತುಕೊಂಡಿಲ್ಲ. ಸಹಜವಾಗಿ ತಾಲಿಬಾನ್ ಉಗ್ರರ ಮೇಲೆ ಅನುಮಾನ ಮೂಡಿದ್ದು, ಅಫ್ಘನ್ ಭದ್ರತಾ ಪಡೆಗಳು ತನಿಖೆ ಮುಂದುವರಿಸಿವೆ.
ಪೋಷಕರು, ಸಂಬಂಧಿಕರ ಆಕ್ರಂದನ
ಸ್ಫೋಟ ಸಂಭವಿಸಿರುವ ಪ್ರದೇಶ ಕಾಬೂಲ್ನ ಹೃದಯಭಾಗ. ಹೀಗಾಗಿ ಜನರ ಓಡಾಟ ತೀವ್ರವಾಗಿತ್ತು. ಉಗ್ರ ಪಡೆ ಇಂತಹ ಸ್ಥಳವನ್ನೇ ಹುಡುಕಿ ಅಟ್ಯಾಕ್ ಮಾಡಿದ್ದು, ಅಮಾಯಕ ಮಕ್ಕಳು ಕೂಡ ಉಗ್ರರ ಭೀಕರ ದಾಳಿಗೆ ಬಲಿಯಾಗಿದ್ದಾರೆ. ಈಗಾಗಲೇ ಬಹುಪಾಲು ಜನರ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿದ್ದು, ಅಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪುಟಾಣಿ ಮಕ್ಕಳನ್ನು ಕಳೆದುಕೊಂಡ ಪೋಷಕರು ಉಗ್ರ ಪೀಡೆಗಳಿಗೆ ಹಿಡಿಶಾಪ ಹಾಕುತ್ತಾ ಕಂಬನಿ ಮಿಡಿದಿದ್ದಾರೆ. ಅಮೆರಿಕ ಸೇನೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ ಬಳಿಕ ನಡೆದಿರುವ ಈ ಉಗ್ರ ದಾಳಿ ಸಹಜವಾಗಿ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಅಫ್ಘಾನ್ಗೆ ನೆಮ್ಮದಿಯೇ ಇಲ್ಲ
ಬ್ರಿಟಿಷರಿಂದ ಅಫ್ಘಾನ್ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.
ಅನ್ನವಿಲ್ಲ, ವಿದ್ಯಾಭ್ಯಾಸ ಸಿಗುತ್ತಿಲ್ಲ
ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.
ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.