ಪ್ರೆಸಿಡೆಂಟ್ ಮನೆ ಸಮೀಪವೇ ರಾಕೆಟ್ ದಾಳಿ, ಹಬ್ಬದ ದಿನ ಉಗ್ರರ ಪಾಪ ಕೃತ್ಯ!
ಅಮೆರಿಕದ ತಪ್ಪಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅಫ್ಘಾನಿಸ್ತಾನ ಅಕ್ಷರಶಃ ಒಂಟಿಯಾಗಿದೆ. ಯಾವ ಕ್ಷಣದಲ್ಲಿ ಉಗ್ರರು ಇಡೀ ದೇಶವನ್ನು ವಶಕ್ಕೆ ಪಡೆಯುತ್ತಾರೋ ಎಂಬ ಭಯ ಆವರಿಸಿದೆ. ಅಮೆರಿಕ ತನ್ನ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಮುಂದಾದ ಬಳಿಕ ತಾಲಿಬಾನ್ ಉಗ್ರರು ಪದೇ ಪದೆ ದಾಳಿ ನಡೆಸುತ್ತಿದ್ದು, ಸೈಲೆಂಟ್ ಆಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಬಕ್ರೀದ್ ಹಬ್ಬದ ಸಂದರ್ಭದಲ್ಲೇ ಅಫ್ಘಾನ್ ಅಧ್ಯಕ್ಷರ ಅಧಿಕೃತ ನಿವಾಸದ ಬಳಿ ರಾಕೆಟ್ ದಾಳಿ ನಡೆದಿದೆ.
ಘಟನೆಯಲ್ಲಿ ಸಾವು, ನೋವು ವರದಿ ಆಗಿಲ್ಲ. ಇಷ್ಟೆಲ್ಲಾ ಘಟನೆ ನಡೆದರೂ ಹೆದರದ ಅಫ್ಘಾನಿಸ್ತಾನ ಅಧ್ಯಕ್ಷರು ರಾಕೆಟ್ ದಾಳಿ ನಡೆದ ಪ್ರದೇಶದಿಂದ ಕೂಗಳತೆ ದೂರದಲ್ಲಿರುವ ತಮ್ಮ ಮನೆಯಿಂದ ಬಕ್ರೀದ್ ಶುಭಾಶಯ ಕೋರಿದ್ದಾರೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಮನೆಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಅಳವಡಿಸಲಾಗಿದೆ.
ತಾಲಿಬಾನ್ ದಾಳಿಗೆ ತತ್ತರಿಸಿದ ಅಫ್ಘಾನ್ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ
ಎಲ್ಲಕ್ಕಿಂತ ಹೆಚ್ಚಾಗಿ ಬಾಂಬ್ ಬಿದ್ದರೂ ಹಾನಿಯಾಗದಂತೆ ದೊಡ್ಡ ಗೋಡೆ ಕಟ್ಟಿಸಲಾಗಿದೆ. ಇಷ್ಟೆಲ್ಲಾ ಮುಂಜಾಗ್ರತೆ ಇದ್ದರೂ ಅಶ್ರಫ್ ಘನಿ ಮನೆ ಬಳಿ 3 ರಾಕೆಟ್ಗಳನ್ನ ಉಡಾಯಿಸಲಾಗಿದೆ. ದಾಳಿಯ ಬಳಿಕ ಸಹಜವಾಗಿ ತಾಲಿಬಾನ್ ಉಗ್ರರ ಮೇಲೆ ಅನುಮಾನ ಮೂಡಿದ್ದು, ತನಿಖೆ ಮುಂದುವರಿದಿದೆ.
ಉಗ್ರರ ಬಗ್ಗೆ ಭಯ..?
ತಾಲಿಬಾನ್ ಉಗ್ರರು ಅದೆಷ್ಟು ಕ್ರೂರಿಗಳು ಎಂಬುದು ಜಗತ್ತಿಗೆ ಗೊತ್ತು. ಸುಮಾರು 20 ವರ್ಷಗಳ ಬಳಿಕ ತನ್ನ ಸೇನೆ ವಾಪಸ್ ಕರೆಸಿಕೊಳ್ಳುತ್ತಿದ್ದ ಅಮೆರಿಕ. ಇದು ತಾಲಿಬಾನ್ ಉಗ್ರರಿಗೆ ಮತ್ತಷ್ಟು ಬಲ ತುಂಬಿದೆ. ಇನ್ಮುಂದೆ ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತಿದ್ದಾರೆ. ಅಫ್ಘಾನ್ ಬಿಟ್ಟು ಅಮೆರಿಕ ಸೇನೆ ಹೊರ ಹೋಗುತ್ತಿರುವುದು ಸರ್ಕಾರಕ್ಕೆ ಚಿಂತೆ ತಂದಿದ್ದರೆ, ಉಗ್ರರಿಗೆ ಖುಷಿ ಕೊಟ್ಟಿದೆ. ಏಕೆಂದ್ರೆ ದಿಢೀರ್ ಅಮೆರಿಕ ಸೇನೆ ಹೊರ ಹೋದರೆ ತಾಲಿಬಾನ್ ಉಗ್ರರ ಉಪಟಳ ಹೆಚ್ಚಲಿದೆ. ಅಮೆರಿಕ ಸೇನೆ ಇದ್ದಾಗಲೇ ತಾಲಿಬಾನ್ ಅಟ್ಟಹಾಸ ಕಂಟ್ರೋಲ್ಗೆ ಬರಲಿಲ್ಲ. ಇನ್ನು ಅಮೆರಿಕ ಸೇನೆ ಹಿಂದಕ್ಕೆ ಕರೆಸಿಕೊಂಡರೆ ಅಫ್ಘಾನ್ ಸ್ಥಿತಿ ಹೇಗಿರಬೇಡ? ಇದೇ ಚಿಂತೆ ಅಲ್ಲಿನ ಸರ್ಕಾರಕ್ಕೂ ಕಾಡುತ್ತಿದೆ. ಅಮೆರಿಕ ಇಂತಹ ಸಂದರ್ಭದಲ್ಲಿ ಅಫ್ಘಾನ್ನ ಒಂಟಿಯಾಗಿ ಬಿಟ್ಟು ಹೋದರೆ ಉಗ್ರ ಪಡೆ ಇಡೀ ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅಪಾಯ ಇದೆ ಎನ್ನುತ್ತಾರೆ ತಜ್ಞರು.
ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.
ಮುಂದೈತೆ ಮಾರಿ ಹಬ್ಬ! ತಾಲಿಬಾನ್ ಉಗ್ರರ ಬುಡಕ್ಕೆ ಬಾಂಬ್ ಪಕ್ಕಾ!
ಭಾರತವೇ ನಮ್ಮನ್ನು ಕಾಪಾಡಬೇಕು..!
ಅಮೆರಿಕ ಸಂಪೂರ್ಣ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಇಡೀ ಅಫ್ಘಾನಿಸ್ತಾನ ಬೂದಿ ಮುಚ್ಚಿದ ಕೆಂಡವಾಗಿದೆ. ಒಂದು ಕಡೆ ತಾಲಿಬಾನ್ ಉಗ್ರರು ಮತ್ತೊಂದು ಕಡೆ ನಾಗರಿಕರು ದಂಗೆ ಏಳಬಹುದು ಎಂಬ ಆಂತರಿಕ ವರದಿ. ಇದೆಲ್ಲದರ ಮಧ್ಯೆ ಅಫ್ಘಾನಿಸ್ತಾನ ಅಧ್ಯಕ್ಷ ಘನಿ ನಡುಗಿ ಹೋಗಿದ್ದಾರೆ. ಹೆಂಗಪ್ಪ ನಮ್ಮ ಪರಿಸ್ಥಿತಿ ಎನ್ನುತ್ತಿದೆ ಅಲ್ಲಿನ ಸರ್ಕಾರ. ಆದ್ರೆ ಇದೇ ಹೊತ್ತಲ್ಲೇ ಅಮೆರಿಕ ನಾಯಕರಿಗೆ ಬಿಸಿ ಮುಟ್ಟಿಸಿರುವ ಘನಿ, ನಮ್ಮ ಸಂಕಷ್ಟದಲ್ಲಿ ಭಾರತ ಸಹಾಯ ಮಾಡಿದೆ. ಈಗಿನ ಸ್ಥಿತಿಯಲ್ಲಿ ಆಂತರಿಕ ಭದ್ರತೆ ಕಾಪಾಡಲು ಭಾರತವೂ ಸೇರಿದಂತೆ ಚೀನಾ, ರಷ್ಯಾ, ಇರಾನ್ ಸಹಾಯ ಬೇಕಿದೆ ಎಂದಿದ್ದಾರೆ. ಈ ಮೂಲಕ ಭಾರತ ನಮ್ಮ ಗೆಳೆಯ ಎಂಬ ವಿಚಾರವನ್ನ ಮತ್ತೊಮ್ಮೆ ಮನದಟ್ಟು ಮಾಡಿದೆ. ಅಮೆರಿಕದ ಶತ್ರು ರಾಷ್ಟ್ರಗಳನ್ನೂ ಹೊಗಳಿದ್ದಾರೆ ಘನಿ.
ಸರಿ ಇತ್ತು, ಹಾಳು ಮಾಡಿದ್ರು
ಅಫ್ಘಾನಿಸ್ತಾನ ನೆಮ್ಮದಿಯಾಗಿತ್ತು, ಇಲ್ಲಿ ಎಲ್ಲವೂ ಸರಿ ಇತ್ತು. ಆದರೆ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಬಂದ ಬಳಿಕ ಸಮಸ್ಯೆ ಹೆಚ್ಚಾಯಿತು. ಅಮೆರಿಕ ಹಿಂಸೆ ತಡೆಗಟ್ಟುವ ಕೆಲಸ ಮಾಡಲಿಲ್ಲ. ಈ ವಿಚಾರದಲ್ಲಿ ಆ ದೇಶ ಸೋತು ಹೋಗಿದೆ ಎಂದಿದ್ದಾರೆ ಅಫ್ಘಾನಿಸ್ತಾನದ ಅಧ್ಯಕ್ಷ. ಅವರಿಗೆ ಬೇಕಾದಷ್ಟು ದಿನ ಇದ್ದು, ಕಷ್ಟದ ಸಂದರ್ಭದಲ್ಲೇ ಕೈಕೊಟ್ಟು ಹೋಗುತ್ತಿದ್ದಾರೆ. ಅಮೆರಿಕ ಸೇನೆ ಹೊರ ಹೋಗುವ ವಿಚಾರ ಗೊತ್ತಾಗುತ್ತಿದ್ದಂತೆ ದಾಳಿಗಳು ಹೆಚ್ಚಾಗಿವೆ. ಸುಮಾರು 85ಕ್ಕೂ ಹೆಚ್ಚು ಅಫ್ಘಾನಿಸ್ತಾನಿ ಪ್ರಜೆಗಳು ಕೆಲವೇ ದಿನದಲ್ಲಿ ಪ್ರಾಣಬಿಟ್ಟಿದ್ದಾರೆ. ಈ ಹಿಂಸೆಗೆ ಯಾರು ಹೊಣೆ? ಎಂದು ಪರೋಕ್ಷವಾಗಿ ಅಮೆರಿಕವನ್ನೇ ಪ್ರಶ್ನಿಸಿದ್ದಾರೆ ಅಶ್ರಫ್ ಘನಿ.