ಬಾಂಗ್ಲಾದೇಶದಲ್ಲಿ ದುರ್ಗಾಪೂಜೆ ವೇಳೆ ವಿಗ್ರಹಗಳ ಧ್ವಂಸ, ಮೂವರ ಹತ್ಯೆ
ಢಾಕಾ, ಅಕ್ಟೋಬರ್ 14: ದುರ್ಗಾಪೂಜೆ ವೇಳೆ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿದ ಅಪರಿಚಿತರು ಮೂವರನ್ನು ಹತ್ಯೆ ಮಾಡಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ನವರಾತ್ರಿ ಪ್ರಯುಕ್ತ ದೇವಸ್ಥಾನಗಳಲ್ಲಿ ದುರ್ಗಾದೇವಿಯ ಪೂಜೆ ಮಾಡಲಾಗುತ್ತಿತ್ತು. ಈ ವೇಳೆ ಅಪರಿಚಿತ ಗುಂಪೊಂದು ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹಗಳನ್ನು ಧ್ವಂಸ ಮಾಡಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಕೊಮಿಲ್ಲಾ ಪಟ್ಟಣದ ನನುವಾರ್ ದಿಗಿ ಸರೋವರದ ಬಳಿ ನವರಾತ್ರಿ ಪ್ರಯುಕ್ತ ದುರ್ಗಾ ಪೂಜಾ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಕೋಮು ಉದ್ವಿಗ್ನತೆ ಆವರಿಸಿದೆ. ಉದ್ವೇಗ ಗುಂಪು ಪೂಜಾ ಪೆಂಡಾಲ್ಗಳನ್ನು ಧ್ವಂಸಗೊಳಿಸಿವೆ.
ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಆದರೆ ಗುಂಪುಗಳಿಂದ ಕಲ್ಲು ತೂರಾಟ ಹೆಚ್ಚಾದ ಬೆನ್ನಲ್ಲೆ ಜನರನ್ನು ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಬೇಕಾಯಿತು. ಕೋಮಿಲ್ಲಾ ಹಿಂಸಾಚಾರದ ನಂತರ, ಚಂದ್ಪುರದ ಹಾಜಿಗಂಜ್, ಚಟ್ಟೋಗ್ರಾಮ್ನ ಬಂಶ್ ಖಾಲಿ ಮತ್ತು ಕಾಕ್ಸ್ ಬಜಾರ್ನ ಪೆಕುವಾದಲ್ಲಿನ ದೇವಸ್ಥಾನಗಳಿಂದ ಗಲಭೆ ಘಟನೆಗಳು ವರದಿಯಾಗಿವೆ.
ಬಾಂಗ್ಲಾದೇಶದ ದುರ್ಗಾ ಪೂಜಾ ಪೆಂಡಾಲ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವರದಿಗಳು ಬಂದಿವೆ. ಹೀಗಾಗಿ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ರಾಪಿಕ್ ಆಕ್ಷನ್ ಬೆಟಾಲಿಯನ್ (ಆರ್ಎಬಿ) ಸಿಬ್ಬಂದಿ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಬಾಂಗ್ಲಾದೇಶ ಹಿಂದು ಯೂನಿಟಿ ಕೌನ್ಸಿಲ್ ಪ್ರಕಾರ, "ಕುರಾನ್ ಅನ್ನು ಅವಮಾನಿಸುವ ವದಂತಿಗಳ" ಹರಡಿದ ಬೆನ್ನಲ್ಲೆ ಕೊಮಿಲ್ಲಾದ ನನುವಾ ದಿಘಿಯಲ್ಲಿರುವ ಪೂಜಾ ಮಂಟಪದ ಮೇಲೆ ದಾಳಿ ನಡೆಸಲಾಯಿತು.
"ಬಾಂಗ್ಲಾದೇಶದ ಇತಿಹಾಸದಲ್ಲಿ ಇದೊಂದು ಕೆಟ್ಟ ದಿನ. ಕಳೆದ 24 ಗಂಟೆಗಳಲ್ಲಿ ಏನಾಯಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶದ ಹಿಂದೂಗಳು ಕೆಲವರ ನಿಜವಾದ ಮುಖಗಳನ್ನು ನೋಡಿದ್ದಾರೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ ಬಾಂಗ್ಲಾದೇಶದ ಹಿಂದುಗಳು 2021 ರಲ್ಲಿ ದುರ್ಗಾಪೂಜೆಯನ್ನು ಎಂದಿಗೂ ಮರೆಯುವುದಿಲ್ಲ,"ಎಂದು ಘಟನೆಯ ಬಗ್ಗೆ ಬಾಂಗ್ಲಾದೇಶ ಹಿಂದೂ ಯೂನಿಟಿ ಕೌನ್ಸಿಲ್ ವಿವರಿಸಿದೆ.
ಈ ಹಿಂದೆ ಇದೇ ರೀತಿಯ ಘಟನೆಗಳು ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್ನ ಕೊತ್ವಾಲಿಯಿಂದಲೂ ವರದಿಯಾಗಿವೆ. ಘಟನೆಯ ನಂತರ ಬಾಂಗ್ಲಾದೇಶ ಸರ್ಕಾರ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಧಾರ್ಮಿಕ ವ್ಯವಹಾರಗಳ ರಾಜ್ಯ ಸಚಿವ ಎಂಡಿ ಫರೀದುಲ್ ಹಕ್ ಖಾನ್ ಜನರು ಸಂಯಮದಿಂದಿರಿ ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
"ನಾವು ಕೊಮಿಲ್ಲಾದಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸುವ ಸುದ್ದಿಯನ್ನು ಅರಿತುಕೊಂಡಿದ್ದೇವೆ. ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಆಡಳಿತಕ್ಕೆ ತಿಳಿಸಲಾಗಿದೆ. ಧಾರ್ಮಿಕ ಸಾಮರಸ್ಯವನ್ನು ನಾಶ ಮಾಡುವ ಗುರಿಯನ್ನು ಹೊಂದಿರುವ ಈ ಘಟನೆಗೆ ಕಾರಣರಾದವರನ್ನು ಕಾನೂನಿನ ಅಡಿಯಲ್ಲಿ ದಾಖಲಿಸಬೇಕು ಮತ್ತು ಸೂಕ್ತ ಶಿಕ್ಷೆ ವಿಧಿಸಬೇಕು" ಎಂದು ಅವರು ಹೇಳಿದರು.
ಘಟನೆ ಬಳಿಕ ಭಾರತದಲ್ಲಿ ಗಡಿಪಾರು ಮಾಡುತ್ತಿರುವ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್, ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಶೇಖ್ ಹಸೀನಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.