ಮಂಗಳನ ಅಂಗಳಕ್ಕೆ ಹಾರಲಿದ್ದಾರೆ ಮೂವರು ಭಾರತೀಯರು
ನವದೆಹಲಿ, ಫೆ, 16: ಮಂಗಳನ ಅಂಗಳಕ್ಕೆ ತೆರಳಲು ಮೂವರು ಭಾರತೀಯರಿಗೆ ಅವಕಾಶ ಒದಗಿ ಬಂದಿದೆ. 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ ಸಿಕ್ಕಿದೆ.
ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ , ಫ್ಲೋರಿಡಾದಲ್ಲಿರುವ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಡಾಕ್ಟರೇಟ್ ಪಡೆದಿರುವ ತರಣಜಿತ್ ಸಿಂಗ್ ಭುಟಿಯಾ, ದುಬೈನಲ್ಲಿ ನೆಲೆಸಿರುವ ರಿತಿಕಾ ಸಿಂಗ್ ಮಂಗಳನಲ್ಲಿಗೆ ತೆರಳಲಿದ್ದಾರೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]
ಶ್ರದ್ಧಾ ಕೊಯಂಬತ್ತೂರ್ ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಎರಡನೇ ಪಟ್ಟಿಯಲ್ಲಿ 3 ಮಲಯಾಳಿಗಳು ಸೇರಿದಂತೆ 44 ಭಾರತೀಯರು ಇದ್ದರು. ಕೊನೆಯ 100 ಜನರ ಪಟ್ಟಿ ತಯಾರಿಸಲಾಗಿದ್ದು ಅದರಲ್ಲಿ ಮೂವರು ಭಾರತೀಯರಿಗೆ ಮಾತ್ರ ಸ್ಥಾನ ದೊರೆತಿದೆ.[ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?]
ಈ ಯಾತ್ರೆಗೆ ಆನ್ ಲೈನ್ ಮೂಲಕ 202, 586 ಅರ್ಜಿಗಳು ಬಂದಿದ್ದವು. ಇದರಲ್ಲಿ ಆಯ್ಕೆ ಮಾಡಿ, 100 ಜನರ ಪಟ್ಟಿ ತಯಾರಿಸಲಾಗಿತ್ತು. 50 ಗಂಡಸರು ಮತ್ತು 50 ಮಹಿಳೆಯರನ್ನು ಅಂತಿಮ ಪಟ್ಟಿಯಲ್ಲಿರಿಸಿಕೊಳ್ಳಲಾಗಿದೆ. ಯುಎಸ್ ನ 39, ಯುರೋಪ್ ನ 31, ಏಷ್ಯಾದ 16, ಆಫ್ರಿಕಾದ 7 ಹಾಗೂ ಒಷೇನಿಯಾದ 7 ಜನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.[ಗಗನಕ್ಕೆ ಹಾರಲಿದ್ದಾನೆ ಭಾರತದ ಮಾನವ]
ಮೊದಲ ಹಂತದಲ್ಲಿ ನಾಲ್ಕು ಜನರನ್ನು ಮಂಗಳನಲ್ಲಿಗೆ ಕಳುಹಿಸಿ ಅಲ್ಲಿನ ಪರಿಸರ ಅರಿಯಲಾಗುವುದು. ನಂತರ 40 ಜನರನ್ನು ಕಳಿಸಿ ಕಾಲನಿ ನಿರ್ಮಿಸಲಾಗುವುದು ಎಂದು ಯೋಜನೆ ಹಮ್ಮಿಕೊಂಡಿರುವ ಹಾಲೆಂಡ್ ಮೂಲದ ಸಂಸ್ಥೆ ತಿಳಿಸಿದೆ.