ಮೂವರು ಭಾರತೀಯ ಪತ್ರಕರ್ತರಿಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ
ನ್ಯೂಯಾರ್ಕ್, ಮೇ 5: ಮೂವರು ಭಾರತೀಯ ಪತ್ರಕರ್ತರಿಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಪಿ ಸುದ್ದಿಸಂಸ್ಥೆಗೆ ಕಾರ್ಯನಿರ್ವಹಿಸುತ್ತಿರುವ ಮೂವರು ಫೋಟೊ ಪತ್ರಕರ್ತರು ಪತ್ರಿಕೋದ್ಯಮದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಾರ್ ಯಾಸೀನ್, ಮುಕ್ತಾರ್ ಖಾನ್ ಮತ್ತು ಚನ್ನಿ ಆನಂದ ಅವರಿಗೆ 2020 ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಸಂದಿದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು (370) ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಒಂದು ವರ್ಷದ ವರೆಗೆ ಕಣಿವೆ ರಾಜ್ಯವನ್ನು ಸಂಪೂರ್ಣ ಲಾಕ್ಡೌನ್ ಮಾಡಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಪ್ಯೂ ವಿಧಿಸಿತ್ತು.
ಈ ಸಂದರ್ಭದಲ್ಲಿ ದಾರ್ ಯಾಸೀನ್, ಮುಕ್ತಾರ್ ಖಾನ್ ಮತ್ತು ಚನ್ನಿ ಆನಂದ ಅವರು ತೆಗೆಯಲಾಗಿದ್ದ ಛಾಯಾಚಿತ್ರಗಳು (Feature Photos) ಅವರಿಗೆ ಪುಲಿಟ್ಜರ್ ಪ್ರಶಸ್ತಿ ತಂದು ಕೊಟ್ಟಿವೆ.
ಜೊಸೆಪ್ ಪುಲಿಟ್ಜರ್ ಅಕಾಡೆಮಿಯು ಈ ವರ್ಷ ಒಟ್ಟು 21 ವಿಭಾಗಗಳಲ್ಲಿ 11 ಪತ್ರಕರ್ತರಿಗೆ ಪ್ರಶಸ್ತಿ ನೀಡಿದೆ. 1917 ರಿಂದ ಪತ್ರಿಕೋದ್ಯಮದಲ್ಲಿನ ಶ್ರೇಷ್ಠ ಸಾಧನೆಗಳಿಗೆ ಈ ಪ್ರಶಸ್ತಿ ಮುಡಿಪಾಗಿದೆ.