ಪೊಲೀಸರ ರಕ್ತ ಹೀರಿದ ತಾಲಿಬಾನಿಗಳು, ಶಾಂತಿ ಒಪ್ಪಂದ ಉಲ್ಲಂಘಿಸಿದ ರಾಕ್ಷಸರು
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಹಾಗೂ ಸರ್ಕಾರದ ನಡುವಿನ ಹಿಂಸಾಚಾರ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಶಂಕಿತ ತಾಲಿಬಾನ್ ಉಗ್ರರು ನಡೆಸಿರುವ ಕಾರ್ ಬಾಂಬ್ ದಾಳಿಯಲ್ಲಿ ಮೂವರು ಅಫ್ಘಾನಿಸ್ತಾನ ಪೊಲೀಸರು ಬಲಿಯಾಗಿ, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಂದಹಾರ್ ಪೊಲೀಸ್ ಚೆಕ್ ಪಾಯಿಂಟ್ ಅನ್ನೇ ಟಾರ್ಗೆಟ್ ಮಾಡಿ ತಾಲಿಬಾನಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ದೇಹ ಛಿದ್ರ ಛಿದ್ರವಾಗಿವೆ.
ಹಲವು ದಶಕಗಳಿಂದಲೂ ತಾಲಿಬಾನ್ ಗ್ಯಾಂಗ್ ಅಫ್ಘಾನಿಸ್ತಾನದಲ್ಲಿ ಲಕ್ಷಾಂತರ ಜನರನ್ನು ಕೊಂದು ಮುಗಿಸಿದೆ. ಸೆಪ್ಟೆಂಬರ್ನಲ್ಲಿ ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಸರ್ಕಾರದ ಮಧ್ಯೆ ಶಾಂತಿ ಒಪ್ಪಂದ ಮಾಡಿಸಲು ಅಮೆರಿಕ ಮುಂದಾಗಿತ್ತು. ಇದರ ಭಾಗವಾಗಿ ಮಾತುಕತೆಯೂ ನಡೆದಿತ್ತು. ಖತಾರ್ನ ರಾಜಧಾನಿ ದೋಹಾ ಶಾಂತಿ ಮಾತುಕತೆಗೆ ವೇದಿಕೆ ಒದಗಿಸಿತ್ತು.
ತಾಲಿಬಾನ್ ಉಗ್ರರ ಜೊತೆ ಸಂಧಾನ, ಅಮೆರಿಕ ಬ್ರೋಕರ್..!
ಹೀಗೆ 2 ತಿಂಗಳಿಗೂ ಹೆಚ್ಚು ಕಾಲ ನಡೆದ ಈ ಮಾತುಕತೆ ಕೆಲದಿನಗಳ ಹಿಂದೆ ಸಕ್ಸಸ್ ಆಗಿತ್ತು. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಫ್ಘಾನಿಸ್ತಾನ ಸರ್ಕಾರಕ್ಕೆ ಸಾಥ್ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಮಾತುಕತೆ ವೇಳೆ ಶಾಂತಿಗೆ ಒಪ್ಪಿದ್ದ ರಾಕ್ಷಸ ರೂಪಿ ಉಗ್ರರು ಪೊಲೀಸ್ ಚೆಕ್ ಪಾಯಿಂಟ್ ಮೇಲೆ ದಾಳಿ ಮಾಡಿ ಉಡಾಯಿಸಿದ್ದಾರೆ.
28 ಪೊಲೀಸರನ್ನು ಹತ್ಯೆ ಮಾಡಿದ್ದರು
ಅತ್ತ ಖತಾರ್ ರಾಜಧಾನಿಯಲ್ಲಿ ಅಫ್ಘಾನಿಸ್ತಾನ ಸರ್ಕಾರ ಹಾಗೂ ತಾಲಿಬಾನಿಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿತ್ತು. ಆದರೆ ಸೆಪ್ಟೆಂಬರ್ 24ರಂದು ದಿಢೀರ್ ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗ್ಯಾಂಗ್ ದಾಳಿ ನಡೆಸಿ ಅಫ್ಘಾನಿಸ್ತಾನದ 28 ಪೊಲೀಸರು ಹಾಗೂ ಅರೆಸೇನಾ ಪಡೆ ಯೋಧರನ್ನು ಹತ್ಯೆ ಮಾಡಿತ್ತು. ಈ ಘಟನೆ ನಂತರ ಕೂಡ ಕೆಲವೇ ದಿನಗಳ ಅಂತರದಲ್ಲಿ ಹತ್ತಾರು ದಾಳಿಗಳನ್ನ ತಾಲಿಬಾನ್ ನಡೆಸಿದೆ. ಉಗ್ರರ ಇಂತಹ ಕೃತ್ಯಗಳಿಂದ ಅಫ್ಘಾನಿಸ್ತಾನದಲ್ಲಿ ಜನರು ನೆಮ್ಮದಿಯಾಗಿ ಬದುಕುವುದಕ್ಕೂ ಸಾಧ್ಯವಾಗುತ್ತಿಲ್ಲ.
ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ
ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.
ಪಾರ್ಲಿಮೆಂಟ್ ಮೇಲೆ ಅಟ್ಯಾಕ್..!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.
ಮುಂದಿನ ದಾರಿ ಏನು..?
ಈಗ ತಾನೆ ನಡೆದಿರುವ ಒಪ್ಪಂದವನ್ನೂ ಉಗ್ರರು ಮುರಿದಿದ್ದಾರೆ. ಇದನ್ನು ಅಫ್ಘಾನಿಸ್ತಾನ ಸರ್ಕಾರ ಕನ್ಫರ್ಮ್ ಮಾಡಿಕೊಳ್ಳಬೇಕಿದೆ. ಈ ದಾಳಿಯಲ್ಲಿ ತಾಲಿಬಾನ್ ಉಗ್ರರ ಪಾತ್ರ ಕನ್ಫರ್ಮ್ ಆದ ಬಳಿಕವಷ್ಟೇ ಮತ್ತೊಂದು ಸುತ್ತಿನ ಯುದ್ಧ ನಡೆಸಬೇಕಾ ಅಥವಾ ಮಾತುಕತೆಗೆ ಕರೆಯಬೇಕಾ ಎಂಬುದನ್ನು ಅಫ್ಘಾನಿಸ್ತಾನದ ಸರ್ಕಾರವೇ ನಿರ್ಧರಿಸಲಿದೆ. ಈ ಬಾರಿ 3ನೇ ವ್ಯಕ್ತಿಯ ಸಹವಾಸಕ್ಕೆ ಅಫ್ಘಾನಿಸ್ತಾನ ಸರ್ಕಾರ ಹೋಗುವ ನಿರೀಕ್ಷೆಗಳು ಕಮ್ಮಿ. ಇಬ್ಬರ ಜಗಳದಲ್ಲಿ ಮೂರನೆಯವರು ಲಾಭ ಪಡೆಯುತ್ತಿರುವುದು ಪಕ್ಕಾ. ಅತ್ತ ಅಮೆರಿಕ, ಇತ್ತ ನ್ಯಾಟೋ ಪಡೆ ಇದ್ದರೂ ಅಫ್ಘಾನಿಸ್ತಾನ ನೆಮ್ಮದಿಯಾಗಿಲ್ಲ. ಆದರೆ ಜನರಿಗೆ ಯಾವಾಗ ನೆಮ್ಮದಿ ಸಿಗುತ್ತೋ ಆ ದೇವರೇ ಬಲ್ಲ.