20 ಭಾರತೀಯ ಯೋಧರನ್ನು ಕೊಂದ ಚೀನಾಗೆ ತಕ್ಕ ಉತ್ತರ
ನವದೆಹಲಿ, ಜೂನ್.16: ಭಾರತ-ಚೀನಾ ನಡುವೆ ಲಡಾಖ್ ಗಡಿಯ ಪೂರ್ವ ಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯಲ್ಲಿ ಕಾಲ್ಕೆರೆದು ನಿಂತ ಚೀನಾ ಯೋಧರಿಗೆ ಭಾರತವು ತಕ್ಕ ತಿರುಗೇಟು ನೀಡಿದೆ. ಚೀನಾ ನಡೆಸಿದ ಅಪ್ರಚೋದಿತ ದಾಳಿಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯು ಸ್ಪಷ್ಟಪಡಿಸಿದೆ.
Recommended Video
ಚೀನಾದ ಮೊಂಡುತನಕ್ಕೆ ಭಾರತವು ತಕ್ಕ ಉತ್ತರ ನೀಡಿದೆ. ಭಾರತೀಯ ಸೈನಿಕರು ನಡೆಸಿರುವ ಪ್ರತಿದಾಳಿಯಲ್ಲಿ ಸುಮಾರು 43 ಮಂದಿ ಚೀನಾ ಸೈನಿಕರನ್ನು ಹೊಡೆದುರುಳಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆಯು ತಿಳಿಸಿದೆ. ಈ ಸಾವು-ನೋವಿನ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಯಾವುದೇ ರೀತಿ ಅಧಿಕೃತವಾದ ಅಂಕಿ-ಅಂಶಗಳನ್ನು ಸರ್ಕಾರವು ನೀಡಿಲ್ಲ ಎಂದು ತಿಳಿದು ಬಂದಿದೆ.
ಚೀನಾ-ಭಾರತ ಘರ್ಷಣೆ: ಈವರೆಗೂ ಬೆಳವಣಿಗೆಯ ಪ್ರಮುಖ ಅಂಶಗಳು
ಇದಕ್ಕೂ ಮೊದಲು ಕಳೆದ ಜೂನ್.15ರ ಸೋಮವಾರ ರಾತ್ರಿಯಷ್ಟೇ ಭಾರತ-ಚೀನಾ ಸೇನಾ ಯೋಧರು ಮುಖಾಮುಖಿಯಾಗಿ ತೀವ್ರ ಸಂಘರ್ಷ ನಡೆದಿತ್ತು. ಇಬ್ಬರ ನಡುವಿನ ಕಾದಾಟದಲ್ಲಿ ಭಾರತೀಯ ಸೇನಾಧಿಕಾರಿ ಹಾಗೂ ಇಬ್ಬರು ಸೈನಿಕರು ಸೇರಿ ಮೂರು ಮಂದಿ ಹುತಾತ್ಮರಾಗಿದ್ದರು.
ಕಳೆದ ಜೂನ್.15 ಮತ್ತು 16ರ ಮಧ್ಯರಾತ್ರಿ ನಡೆದ ಸಂಘರ್ಷದ ವೇಳೆ ಗಾಲ್ವಾನ್ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ 17 ಮಂದಿ ಭಾರತೀಯ ಯೋಧರಿಗೆ ಗಂಭೀರ ಗಾಯಗಳಾಗಿದ್ದವು. ಈ ಯೋಧರು ಇಂದು ಹುತಾತ್ಮರಾಗಿದ್ದಾರೆ. ಒಟ್ಟು ಈವರೆಗೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯು ಮಾಹಿತಿ ನೀಡಿದೆ. ಇದರ ಜೊತೆಗೆ ರಾಷ್ಟ್ರದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಭಾರತೀಯ ಸೇನೆಯು ಬದ್ಧವಾಗಿರುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭಾರತ-ಚೀನಾ ನಡುವಿನ ಸುದೀರ್ಘ ಗಡಿ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲಾಗಿದೆ. ಚೀನಾದೊಂದಿಗಿನ ಭಾರತದ ಮಿಲಿಟರಿ ಮತ್ತ ರಾಜತಾಂತ್ರಿಕ ಶಾಂತಿ ಮಾತುಕತೆಗಳು ಫಲಪ್ರದವಾಗಿವೆ ಎಂದು ಹೇಳಲಾಗಿತ್ತು. ಜೂನ್ 6ನಡೆದ ಉಭಯ ದೇಶಗಳ ಉನ್ನತ ಸೇನಾ ಕಮಾಂಡರ್ಗಳ ಸಭೆಯಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು.
ಪೂರ್ವ ಲಡಾಖ್ ಗಡಿಯಿಂದ ಉಭಯ ದೇಶಗಳ ಸೇನಾ ಪಡೆಗಳೂ ಹಿಂದಕ್ಕೆ ಸರಿಯುತ್ತಿದ್ದು, ಪೆಟ್ರೋಲಿಂಗ್ ಪಾಯಿಂಟ್(ಗಸ್ತು ಪ್ರದೇಶ) 14, 15 ಹಾಗೂ 17 ಸ್ಥಳಗಳಿಂದ ಸುಮಾರು 2 ರಿಂದ 2.5 ಕಿ.ಮೀ ಹಿಂದಕ್ಕೆ ಸರಿಯಲಾಗಿದೆ ಎಂದು ಹೇಳಲಾಗಿತ್ತು.