ಐಎಸ್ಐಎಸ್ ಅಟ್ಟಹಾಸ: ಕತ್ತು ಕೊಯ್ದು 20 ವಿದೇಶಿಗರ ಹತ್ಯೆ
ಢಾಕಾ, ಜುಲೈ, 02: ಬಾಂಗ್ಲಾದ ಸೈನಿಕರು ಉಗ್ರರನ್ನು ಸದೆ ಬಡಿಯುವ ಮುನ್ನವೇ 20 ವಿದೇಶಿಗರನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಉಗ್ರರ ಅಟ್ಟಹಾಸ ಪ್ರಪಂಚವನ್ನೇ ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ.
ನಿರಂತರ ಕಾರ್ಯಾಚರಣೆ ನಡೆಸಿದ ಸೈನಿಕರು ಉಗ್ರರನ್ನು ಹತ್ಯೆ ಮಾಡಿ 14 ಜನ ಒತ್ತೆಯಾಳುಗಳನ್ನು ರಕ್ಷಣೆ ಮಾಡಿದ್ದರು. ಆದರೆ ಇದಕ್ಕೂ ಮುನ್ನವೇ ಉಗ್ರು ಇಟಲಿ ಮತ್ತು ಜಪಾನ್ ಸೇರಿದಂತೆ ವಿವಿಧ ದೇಶದ 20 ಜನರನ್ನು ಹತ್ಯೆ ಮಾಡಿ ಕ್ರೌರ್ಯ ಮೆರೆದಿದ್ದರು.[ಢಾಕಾ ಕಾರ್ಯಾಚರಣೆ ಅಂತ್ಯ: 6 ಉಗ್ರರ ಹತ್ಯೆ, 14 ಜನರ ರಕ್ಷಣೆ]
ಬರ್ಬರ ಕೃತ್ಯದ ನಂತರ ಮಾತನಾಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಭಯೋತ್ಪಾದನೆಯೇ ಅವರ ಧರ್ಮವಾಗಿರಿಸಿಕೊಂಡವರನ್ನು ಯಾವ ಕಾರಣಕ್ಕೂ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಢಾಕಾದ ಆರ್ಟಿಸನ್ ಬೇಕರಿ ರೆಸ್ಟೋರೆಂಟ್ ಮೇಲೆ ಶುಕ್ರವಾರ ರಾತ್ರಿ ಏಕಾಏಕಿ ದಾಳಿ ಮಾಡಿದ ಉಗ್ರರು ಅನೇಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ತಕ್ಷಣ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾ ಪಡೆ ಯೋಧರು ಶನಿವಾರ ಮಧ್ಯಾಹ್ನದವರೆಗೂ ಹರಸಹಾಸ ಮಾಡಿ ಉಗ್ರರ ಅಟ್ಟಹಾಸ ಅಡಗಿಸಿದರು. ಆದರೆ ಇಷ್ಟರಲ್ಲಿಯೇ ಉಗ್ರರು ಅಮಾಯಕರನ್ನು ಹತ್ಯೆ ಮಾಡಿದ್ದರು.[ಢಾಕಾದಲ್ಲಿ ಉಗ್ರರ ದಾಳಿ: 60 ವಿದೇಶಿಗರು ಒತ್ತೆಯಾಳು]
ಕಾರ್ಯಾಚರಣೆ ನಡೆಸಿದ ಸೇನೆ 13 ನಿಮಿಷ ಅವಧಿಯಲ್ಲಿ ಆರು ಉಗ್ರರನ್ನು ಹೊಡೆದು ಉರುಳಿಸಿತ್ತು. ಆದರೆ ಅಷ್ಟರಲ್ಲೇ ಅಮಾಯಕರನ್ನು ಹತ್ಯೆ ಮಾಡಲಾಗಿತ್ತು. ಘಟನೆಯ ಹೊಣೆಯನ್ನು ಇನ್ನು ಐಎಸ್ಐಎಸ್ ಉಗ್ರ ಸಂಘಟನೆ ಈ ದಾಳಿಯ ಹೊಣೆಹೊತ್ತುಕೊಂಡಿದೆ.