ಕಾಬೂಲ್ ಗುರುದ್ವಾರದಲ್ಲಿ ಸ್ಫೋಟ: 2 ಸಾವು, ISIS ನಂಟು ಶಂಕೆ; MEA ಮೇಲ್ವಿಚಾರಣೆ ಪರಿಸ್ಥಿತಿ
ಕಾಬೂಲ್, ಜೂನ್ 18: ಕಾಬೂಲ್ನಲ್ಲಿರುವ ಗುರುದ್ವಾರ ಕರ್ತೆ ಪರ್ವಾನ್ ಮೇಲೆ ಉಗ್ರರು ದಾಳಿ ನಡೆಸಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ. ಜೊತೆಗೆ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಗುರುದ್ವಾರ ಸಾಹಿಬ್ ಆವರಣದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ಈ ದಾಳಿಯ ಹಿಂದೆ ಐಸಿಸ್ ಖೊರಾಸನ್ ಕೈವಾಡವಿದೆ ಎಂದು ಶಂಕಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು ಮೂಲಗಳ ಪ್ರಕಾರ, ಗುರುದ್ವಾರದ ಸಂಪೂರ್ಣ ಆವರಣಕ್ಕೆ ಬೆಂಕಿ ಹಚ್ಚಲಾಗಿದೆ.
ಈ ದಾಳಿ ಕಾಬೂಲ್ ಕಾಲಮಾನ ಬೆಳಗ್ಗೆ 7:15ಕ್ಕೆ (ಭಾರತದ ಕಾಲಮಾನ 8.30ಕ್ಕೆ) ಆರಂಭವಾಯಿತು. ಘಟನೆಯಲ್ಲಿ ಮೂವರು ತಾಲಿಬಾನ್ ಸೈನಿಕರು ಗಾಯಗೊಂಡಿದ್ದು, 60 ವರ್ಷದ ವ್ಯಕ್ತಿ ಸಾವಿಂದರ್ ಸಿಂಗ್ ಮತ್ತು ಗುರುದ್ವಾರದ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ದಾಳಿಕೋರರ ದಾಳಿಯಿಂದ ಕನಿಷ್ಠ 7-8 ಜನರು ಇನ್ನೂ ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಸಂಖ್ಯೆಗಳು ದೃಢಪಟ್ಟಿಲ್ಲ. "ನಾನು ಗುರುದ್ವಾರದಿಂದ ಬಂದೂಕಿನ ಗುಂಡುಗಳು ಮತ್ತು ಸ್ಫೋಟಗಳನ್ನು ಕೇಳಿದೆ" ಎಂದು ಸಿಖ್ ಸಮುದಾಯದ ನಾಯಕ ಗುರ್ನಾಮ್ ಸಿಂಗ್ ಎಎಫ್ಪಿಗೆ ತಿಳಿಸಿದ್ದಾರೆ.
ವರದಿಗಳ ಪ್ರಕಾರ, 25-30 ಅಫ್ಘಾನ್ ಹಿಂದೂಗಳು ಮತ್ತು ಸಿಖ್ಖರು ಗುರುದ್ವಾರದಲ್ಲಿ ಬೆಳಗಿನ ಪ್ರಾರ್ಥನೆಗೆ ಹಾಜರಾಗಿದ್ದರು. ದಾಳಿಕೋರರು ಆವರಣವನ್ನು ಪ್ರವೇಶಿಸುತ್ತಿದ್ದಂತೆ, 10-15 ಜನರು ಓಡಿಹೋಗುವಲ್ಲಿ ಯಶಸ್ವಿಯಾದರು. ಉಳಿದವರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಅಥವಾ ಸತ್ತಿದ್ದಾರೆ ಎಂಬ ಆತಂಕವಿದೆ. ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಕೂಡ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.
ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಘಟನೆಯ ಬಗ್ಗೆ ಪರಿಶೀಲಿಸುವಂತೆ ಎಂಇಎಗೆ ಒತ್ತಾಯಿಸಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಗುರುದ್ವಾರ ಸಾಹಿಬ್ನಲ್ಲಿ ನಡೆದ ದಾಳಿಯ ಸುದ್ದಿಯನ್ನು ಕೇಳಿ ತೀವ್ರ ಕಳವಳಗೊಂಡಿದ್ದಾರೆ. ಆವರಣದೊಳಗೆ ಸಿಲುಕಿರುವ ಎಲ್ಲಾ ಭಕ್ತರು ಮತ್ತು ನಾಗರಿಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಈ ವಿಷಯವನ್ನು ಪರಿಶೀಲಿಸಲು ಎಂಇಎಗೆ ಒತ್ತಾಯಿಸಿ ಅವರು & ಎಲ್ಲಾ ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
ಇನ್ನೂ ಇಂಡಿಯನ್ ವರ್ಲ್ಡ್ ಫೋರಂ ಮುಖ್ಯಸ್ಥ ಪುನೀತ್ ಸಿಂಗ್ ಚಾಂಧೋಕ್ "ನಾನು ಗುರುದ್ವಾರ ಕಾರ್ಟೆ ಪರ್ವಾನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಅವರೊಂದಿಗೆ ಮಾತನಾಡಿದ್ದೇನೆ. ಕರೆ ಮಾಡಿದಾಗ ಅವರು ಅಳುತ್ತಿದ್ದರು" ಎಂದಿದ್ದಾರೆ. ಪುನೀತ್ ಅವರ ಪ್ರಕಾರ ಉಗ್ರರು ಐಸಿಸ್ ಸೇರಿದ್ದಾರೆ.
#WATCH | Explosions heard in Karte Parwan area of Kabul city in Afghanistan.
— ANI (@ANI) June 18, 2022
(Video Source: Locals) pic.twitter.com/jsiv2wVGe8
ಹೀಗಾಗಿ ಯಾವುದೇ ವಿಳಂಬ ಮಾಡದೆ ತಕ್ಷಣವೇ ಆಫ್ಘನ್ ಅಲ್ಪಸಂಖ್ಯಾತರನ್ನು ಅಲ್ಲಿಂದ ವಾಪಸ್ ಕಳುಹಿಸುವಂತೆ ಪುನೀತ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅವರು ಕಳೆದ ಆರು ತಿಂಗಳಿಂದ ಇ-ವೀಸಾಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು. ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಗುರುದ್ವಾರದಿಂದ ಸುರಕ್ಷಿತವಾಗಿ ತರಲು ಅಫ್ಘಾನ್ ಸಿಖ್ಖರು ಪುಸ್ತಕವನ್ನು ಉಳಿಸಲು ಬೆಂಕಿ ಹೊತ್ತಿಕೊಂಡ ಕಟ್ಟಡವನ್ನು ಪ್ರವೇಶಿಸಿದರು ಎಂದಿದ್ದಾರೆ.
ಘಟನೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), "ಕಾಬೂಲ್ನ ಪವಿತ್ರ ಗುರುದ್ವಾರದ ಮೇಲೆ ದಾಳಿಯ ಕುರಿತು ಹೊರಹೊಮ್ಮಿದ ವರದಿಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ಬೆಳವಣಿಗೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಹೇಳಿದೆ.