ಯುದ್ಧ ಮುಗಿದ ಮೇಲೆ ಅನ್ನವೂ ಇಲ್ಲ, ಮಲಗಲು ಮನೆಯೂ ಉಳಿದಿಲ್ಲ!
ರಾತ್ರಿಯಾದರೆ ಮೈಕೊರೆಯುವ ಚಳಿ, ಮಳೆ ಬಂದರೆ ರಕ್ಷಣೆಗೆ ಒಂದು ಸೂರೂ ಇಲ್ಲ. ಮುರಿದು ಬಿದ್ದಿರುವ ತಮ್ಮ ಮನೆಯ ಮುಂದೆ ಕಣ್ಣೀರು ಹಾಕುತ್ತಾ ಮಲಗಿರುವ ಜನ. ಅಂದಹಾಗೆ ಇದು ಗಾಜಾ ಪಟ್ಟಿಯ ಕಥೆ. ಪ್ಯಾಲೆಸ್ತೇನ್-ಇಸ್ರೇಲ್ ಕಿತ್ತಾಟದಿಂದ, ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿದ್ದ ಬಡವರ ಬದುಕು ಬೀದಿಗೆ ಬಿದ್ದಿದೆ. ಬರೋಬ್ಬರಿ 11 ದಿನಗಳ ಕಾಲ ನಡೆದ ಭೀಕರ ಕಾಳಗದಲ್ಲಿ ಸುಮಾರು 2000 ಸಾವಿರಕ್ಕೂ ಹೆಚ್ಚು ಮನೆಗಳು ಸರ್ವನಾಶವಾಗಿ ಹೋಗಿದ್ದರೆ, 15 ಸಾವಿರಕ್ಕೂ ಹೆಚ್ಚು ಮನೆಗಳು ಅರ್ಧ ಭಾಗ ಬಿದ್ದು ಹೋಗಿವೆ.
Recommended Video
ಇಸ್ರೇಲ್ ನಡೆಸಿದ ದಾಳಿ ಪರಿಣಾಮ ಗಾಜಾ ಪಟ್ಟಿ ಅಕ್ಷರಶಃ ನರಕವಾಗಿದೆ. ಅತ್ತ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ಅಟ್ಯಾಕ್ ಮಾಡುತ್ತಿತ್ತು. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯಿತು. ಸುಮಾರು 300 ನಾಗರಿಕರು ಬಡಿದಾಟದಲ್ಲಿ ಜೀವ ಕಳೆದುಕೊಂಡರು.
3ನೇ ಮಹಾಯುದ್ಧ ತಡೆಯಲು ವಿಶ್ವಸಂಸ್ಥೆ ಎಂಟ್ರಿ, ಇಸ್ರೇಲ್ ನಿರ್ಧಾರವೇನು?
ಅಂತಾರಾಷ್ಟ್ರೀಯ ಸಮುದಾಯದ ಒತ್ತಡದಿಂದ ಯುದ್ಧ ನಿಂತರೂ, ಗಾಜಾ ಪಟ್ಟಿ ಅಕ್ಷರಶಃ ನರಕವಾಗಿದೆ. ಜನರ ನರಕಯಾತನೆ ಅನುಭವಿಸುತ್ತಾ, ಕಣ್ಣೀರು ಸುರಿಸುತ್ತಾ ಜೀವನ ಸಾಗಿಸಬೇಕಿದೆ.
ಗಲಾಟೆ ಶುರುವಾಗಿದ್ದು ಹೇಗೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಇದಾದ ಬಳಿಕ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನಡುವೆ ಹಿಂಸೆ ಆರಂಭವಾಗಿ, ಗಾಜಾ ಪಟ್ಟಿ ಮೇಲೆ ನಡೆಸಿದ್ದ ದಾಳಿಗೆ ಸುಮಾರು 300 ಜನ ಬಲಿಯಾಗಿದ್ದಾರೆ.
‘ಹಮಾಸ್ ಉಗ್ರರು ಹೇಡಿಗಳು’
ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಪಡೆಯನ್ನು ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮತ್ತೊಂದ್ಕಡೆ ನಾವಿನ್ನೂ ಕಾರ್ಯಾಚರಣೆ ಮಧ್ಯದಲ್ಲಿದ್ದು, ಗುರಿ ಮುಟ್ಟಿಲ್ಲ ಎಂದು ಹೇಳಿದ್ದಾರೆ ನೆತನ್ಯಾಹು. ಹೀಗೆ ಇಸ್ರೇಲ್ ಯದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದರು ನೆತನ್ಯಾಹು. ತಮ್ಮ ಮಾತಿಗೆ ಬದ್ಧವಾಗಿ ನೆತನ್ಯಾಹು ದಾಳಿ ಮುಂದುವರಿಸಿದರೂ, 11 ದಿನದ ಬಳಿಕ ಕದನ ವಿರಾಮ ಘೋಷಿಸಿದ್ದರು.
ಉಗ್ರರು ಎಸ್ಕೇಪ್ ಆಗ್ತಾರೆ..!
ಪ್ರತಿಬಾರಿ ಗಾಜಾ ಪಟ್ಟಿ ಹಾಗೂ ಇಸ್ರೇಲ್ ನಡುವೆ ಹಿಂಸಾಚಾರ ನಡೆದಾಗಲೂ ಹಮಾಸ್ ಉಗ್ರರ ಕೈವಾಡ ಎದ್ದು ಕಾಣುತ್ತದೆ. ಆದರೆ ಮೊದಲು ಬೆಂಕಿ ಹಚ್ಚುವ ಕೆಲಸ ಮಾಡುವ ಉಗ್ರರ ಗ್ಯಾಂಗ್, ಇಸ್ರೇಲ್ ಪ್ರತಿದಾಳಿ ಆರಂಭಿಸುತ್ತಿದ್ದಂತೆ ಎಸ್ಕೇಪ್ ಆಗಿಬಿಡುತ್ತಾರೆ. ಇದೇ ರೀತಿ ಈಗಲೂ ಯುದ್ಧ ಆರಂಭವಾಗುತ್ತಿದ್ದಂತೆ ಉಗ್ರರು ಎಸ್ಕೇಪ್ ಆಗಿದ್ದಾರೆ. ಇದಕ್ಕಾಗಿ ಉಗ್ರರು ಸುರಂಗ ರಚಿಸಿಕೊಂಡು, ವ್ಯವಸ್ಥಿತವಾಗಿ ಇಸ್ರೇಲ್ ಸೇನೆ ಕೈಗೆ ಸಿಗದೆ ಓಡಿ ಹೋಗುತ್ತಾರೆ. ಆದರೆ ಈ ಬಾರಿ ಉಗ್ರರ 35 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು.
ಹಿಂಸೆ ಖಂಡಿಸಿದ್ದ ಭಾರತ
ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ್ದ ದಾಳಿಯನ್ನ ಭಾರತ ತೀವ್ರವಾಗಿ ಖಂಡಿಸಿತ್ತು. ಜೆರುಸಲೇಂನ ‘ಟೆಂಪಲ್ ಮೌಂಟ್' ಬಳಿ ನಡೆದ ಹಿಂಸಾಚಾರವನ್ನೂ ಖಂಡಿಸಿತ್ತು. ಹಿಂಸೆ ಬಿಟ್ಟು ಶಾಂತಿಯಿಂದ ವರ್ತಿಸಲು ಭಾರತ ಸಲಹೆ ನೀಡಿತ್ತಲ್ಲದೆ, ಶೇಕ್ ಜರಾ ಸುತ್ತಲೂ ನೆಲೆಸಿರುವವರನ್ನು ಬಲವಂತವಾಗಿ ಹೊರದಬ್ಬುತ್ತಿರುವ ಕೃತ್ಯಕ್ಕೂ ಭಾರತ ಬೇಸರ ವ್ಯಕ್ತಪಡಿಸಿತ್ತು. ಎರಡೂ ಬಣಗಳು ಯಥಾಸ್ಥಿತಿ ಕಾಪಾಡಬೇಕಿದೆ ಎಂದು ಭಾರತ ಸಲಹೆ ನೀಡಿತ್ತು. ಇದೀಗ ಅಂತಾರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶ ಯುದ್ಧವನ್ನ ತಣ್ಣಗಾಗಿಸಿದೆ.