ಅಫ್ಘಾನಿಸ್ತಾನ: ಆತ್ಮಾಹುತಿ ಬಾಂಬ್ ದಾಳಿಗೆ 19 ಸಾವು
ಜಲಾಲಾಬಾದ್, ಜುಲೈ 2: ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿ ಭಾನುವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ.
19 ಮಂದಿಯ ಪೈಕಿ 17 ಮಂದಿ ಹಿಂದೂಗಳು ಮತ್ತು ಸಿಖ್ಖರಿದ್ದಾರೆ. ಇನ್ನೂ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೇರಿದ್ದಾರೆ.
ಅಲ್ಪಸಂಖ್ಯಾತ ಸಿಖ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆದಿದೆ. ದಾಳಿಯಲ್ಲಿ ಮೃತರಾದವರಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದ ಅಭ್ಯರ್ಥಿಯೊಬ್ಬರೂ ಸೇರಿದ್ದಾರೆ.
ಪಾಕಿಸ್ತಾನವು ಭಯೋತ್ಪಾದಕರ ಗಾಡ್ಫಾದರ್ : ಎಫ್ಎಟಿಎಫ್ ವರದಿ
ನಂಗರ್ಹಾರ್ ಪ್ರಾಂತ್ಯಕ್ಕೆ ಬರಲಿರುವ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿ ಮಾಡುವ ಸಲುವಾಗಿ ಈ ಸಿಖ್ಖರ ತಂಡ ಅಲ್ಲಿಗೆ ವಾಹನವೊಂದರಲ್ಲಿ ತೆರಳುತ್ತಿತ್ತು. ಆಗ ಈ ಬಾಂಬ್ ದಾಳಿ ನಡೆದಿದೆ.
ಈ ದಾಳಿಯನ್ನು ತಾನೇ ನಡೆಸಿರುವುದಾಗಿ ಇಸ್ಲಾಮಿಕ್ ಸ್ಟೇಟ್ ಹೇಳಿಕೆ ನೀಡಿದೆ.
ಎರಡು ದಿನಗಳ ನಂಗರಾರ್ಹ್ ಪ್ರವಾಸದಲ್ಲಿರುವ ಅಧ್ಯಕ್ಷ ಅಶ್ರಫ್ ಘನಿ ದಾಳಿಗೆ ಎರಡು ಗಂಟೆಗೂ ಮುನ್ನ ಜಲಾಲಾಬಾದ್ನಲ್ಲಿ ಆಸ್ಪತ್ರೆಯೊಂದನ್ನು ಉದ್ಘಾಟಿಸಿದ್ದರು. ದಾಳಿ ನಡೆದ ಪ್ರದೇಶದಲ್ಲಿ ಅವರು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಹೇಡಿತನದ ದಾಳಿ ಎಂದು ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಂಡಿಸಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಠೇವಣಿ, ಭಾರತ ನಂ 73, ಯುಕೆ ನಂ 1
ಮುಸ್ಲಿಂ ಬಾಹುಳ್ಯದ ದೇಶವಾಗಿರುವ ಅಪ್ಘಾನಿಸ್ತಾನದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಅಲ್ಪ ಸಂಖ್ಯೆಯಲ್ಲಿದ್ದಾರೆ.
ಸರ್ಕಾರದ ಪಡೆಗಳು ಮತ್ತು ತಾಲಿಬಾನ್ ನಡುವೆ ಕಳೆದ ತಿಂಗಳು ನಡೆದ ಮೂರು ದಿನಗಳ ಕದನ ವಿರಾಮದ ಬಳಿಕ ನಡೆದ ಮೊದಲ ದಾಳಿ ಇದಾಗಿದೆ. ಆದರೆ ಈ ಒಪ್ಪಂದದಲ್ಲಿ ಇಸ್ಲಾಮಿಕ್ ಸ್ಟೇಟ್ ಒಳಗೊಂಡಿರಲಿಲ್ಲ.
ಸಿಖ್ಖರ ಮೇಲೆ ಐಎಸ್ಐ ಗುರಿ
ಪಾಕಿಸ್ತಾನದಲ್ಲಿ ಸಿಖ್ ಸಮುದಾಯದವರನ್ನು ನಿರ್ಮೂಲನೆ ಮಾಡುವ ವ್ಯಾಪಕ ಕಾರ್ಯಾಚರಣೆ ನಡೆಸಿರುವ ಐಎಸ್ಐ, ಅದನ್ನು ನೆರೆಯ ಅಪ್ಘಾನಿಸ್ತಾನದಲ್ಲಿಯೂ ವಿಸ್ತರಿಸಿದೆ.
ಪಾಕಿಸ್ತಾನದ ಐಎಸ್ಐನ ಕೃಪಾಪೋಷಿತ ತಾಲಿಬಾನ್, ಅಫ್ಘಾನಿಸ್ತಾನದಲ್ಲಿನ ನಾಗರಿಕ ಸಮಾಜದ ಅಲ್ಪಸಂಖ್ಯಾತ ಸಿಖ್ ಸಮುದಾಯ ಮತ್ತು ಇತರೆ ಸಮುದಾಯಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದೆ.
ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಬೆದರಿರುವ ಅಲ್ಲಿನ ಬಹುತೇಕ ಸಿಖ್ಖರು ಭಾರತಕ್ಕೆ ವಲಸೆ ಬರುತ್ತಿದ್ದಾರೆ.
ಪಾಕಿಸ್ತಾನದ ಉಗ್ರರು ಮತ್ತು ಗುಪ್ತಚರ ಸಂಸ್ಥೆಗಳಿಂದ ನಿರಂತರವಾಗಿ ಗುರಿಯಾಗುತ್ತಿರುವ ಪಾಕ್ ಹಾಗೂ ಅಫ್ಘಾನಿಸ್ತಾನದಲ್ಲಿರುವ ಹಿಂದೂ, ಸಿಖ್ಖರ ಸುರಕ್ಷತೆ ಬಗ್ಗೆ ಭಾರತದಲ್ಲಿನ ಸಿಖ್ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ.
40 ವರ್ಷಗಳಲ್ಲಿ ಉಳಿದವರೆಷ್ಟು?
ಅಂದಾಜಿನ ಪ್ರಕಾರ ಅಫ್ಘಾನಿಸ್ತಾನದಲ್ಲಿ 1970ರ ದಶಕದಲ್ಲಿ ಇದ್ದ ಹಿಂದೂ ಮತ್ತು ಸಿಖ್ಖರ ಸಂಖ್ಯೆ ಸುಮಾರು 80,000. ಆದರೆ, ಈಗ ಅಂದಾಜು 1,000 ಮಂದಿ ಮಾತ್ರ ಹಿಂದೂಗಳು ಹಾಗೂ ಸಿಖ್ಖರು ಉಳಿದುಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ವಾಸಿಸುತ್ತಿರುವ, ಅದರಲ್ಲಿಯೂ ಅಫ್ಘಾನಿಸ್ತಾನದ ಗಡಿಯಲ್ಲಿರುವ ಹಿಂದೂಗಳು ಹಾಗೂ ಸಿಖ್ಖರ ಪರಿಸ್ಥಿತಿ ಶೋಚನೀಯವಾಗಿದೆ.
ಸಿಖ್ ಧಾರ್ಮಿಕ ಮುಖಂಡ ಚರಣ್ಜಿತ್ ಸಿಂಗ್ ಅವರನ್ನು ಕಳೆದ ತಿಂಗಳು ಪೆಶಾವರದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಏಕೈಕ ಸಿಖ್ ಅಭ್ಯರ್ಥಿ
ಅಕ್ಟೋಬರ್ 20ರಂದು ನಡೆಯಲಿರುವ ಚುನಾವಣೆಯಲ್ಲಿ ಏಕೈಕ ಸಿಖ್ ಅಭ್ಯರ್ಥಿ ಎನಿಸಿಕೊಂಡಿರುವ ಅವತಾರ್ ಸಿಂಗ್ ಖಾಸ್ಲಾ ಸ್ಫೋಟದಲ್ಲಿ ಬಲಿಯಾಗಿದ್ದಾರೆ. ಹಿಂದೂ ಮತ್ತು ಸಿಖ್ ಸಮುದಾಯದ ಅಲ್ಪಸಂಖ್ಯಾತರಿಗಾಗಿ ಮೀಸಲಿರುವ ಏಕೈಕ ಸೀಟ್ನಲ್ಲಿ ಅವತಾರ್ ಸಿಂಗ್ ಖಾಸ್ಲಾ ಅವರು ಸ್ಪರ್ಧೆಗೆ ಇಳಿದಿದ್ದರು.
ಖಾಸ್ಲಾ ಅವರ ಮಗ ನರೇಂದ್ರ ಸಿಂಗ್ ದಾಳಿಯಲ್ಲಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸ್ಲಾ ಅವರಿಗೆ ಪತ್ನಿ ಮತ್ತು ನಾಲ್ವರು ಮಕ್ಕಳು ಇದ್ದಾರೆ.
|
ಪ್ರಧಾನಿ ಮೋದಿ ಖಂಡನೆ
ಜಲಾಲಾಬಾದ್ ಬಾಂಬ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಇದು ಅಫ್ಘಾನಿಸ್ತಾನದ ಬಹುಸಂಸ್ಕೃತಿಯ ಮೇಲಿನ ದಾಳಿ ಇದು. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ದುಃಖದ ಸಂದರ್ಭದಲ್ಲಿ ಅಫ್ಘಾನಿಸ್ತಾನ ಸರ್ಕಾರಕ್ಕೆ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
|
ಸಂಬಂಧಿಕರ ಭೇಟಿ ಮಾಡಲಿರುವ ಸುಷ್ಮಾ
ಜಲಾಲಾಬಾದ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಬಂಧಿಕರನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಭೇಟಿ ಮಾಡಲಿದ್ದಾರೆ.
ದೆಹಲಿಯಲ್ಲಿರುವ ಜವಹರಲಾಲ್ ನೆಹರೂ ಭವನದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಅವರನ್ನು ಭೇಟಿ ಮಾಡುವುದಾಗಿ ಸುಷ್ಮಾ ಟ್ವೀಟ್ ಮಾಡಿದ್ದಾರೆ.