ಕೊಟ್ಟ ಮಾತಿಗೆ ತಪ್ಪಿದ ಉಗ್ರರು, ಹಬ್ಬದ ದಿನದಂದೇ ರಕ್ತಪಾತ
ಅಫ್ಘಾನಿಸ್ತಾನಕ್ಕೆ ತಾಲಿಬಾನ್ ಪೀಡೆಗಳಿಂದ ಮುಕ್ತಿ ಸಿಗುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ಕಡೆ ಹತ್ತಾರು ವರ್ಷಗಳ ಕಾಲ ಅಫ್ಘಾನ್ ಜಾಗದಲ್ಲಿ ಬಿಡಾರ ಹೂಡಿದ್ದ ಅಮೆರಿಕ ಸೇನೆ ಗಂಟುಮೂಟೆ ಕಟ್ಟುತ್ತಿದೆ. ಆದರೆ ಈಕಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ತಾಲಿಬಾನಿ ಗ್ಯಾಂಗ್, ಅಮಾಯಕರ ಮೇಲೆ ಅಟ್ಟಹಾಸ ಮೆರೆಯುತ್ತಿದೆ.
ರಂಜಾನ್ ಹಿನ್ನೆಲೆಯಲ್ಲಿ ಹಿಂಸೆ ನಡೆಸುವುದಿಲ್ಲ ಎಂದು ಮಾತು ಕೊಟ್ಟಿದ್ದ ತಾಲಿಬಾನಿಗಳು, ಕೊಟ್ಟ ಮಾತಿಗೆ ತಪ್ಪಿ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆ ಪ್ರಾರ್ಥನೆ ಸಲ್ಲಿಸುತ್ತಿದ್ದ 12 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸಮೀಪ ಇರುವ ಮಸೀದಿಯಲ್ಲಿ ಈ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಶಾಲೆ ಬಳಿ ಬಾಂಬ್ ಸ್ಫೋಟಿಸಿ 50ಕ್ಕೂ ಹೆಚ್ಚು ಮಕ್ಕಳು ಹಾಗೂ ವೃದ್ಧರನ್ನು ಕೊಂದು ಹಾಕಿತ್ತು ತಾಲಿಬಾನಿಗಳು. ಅಲ್ಲದೆ ಒಂದಿಡೀ ಜಿಲ್ಲೆಯನ್ನೇ ತಮ್ಮ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇಂಥ ಅಹಿತರಕರ ಘಟನೆಗಳು ಅಫ್ಘಾನಿಸ್ತಾನದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಆದರೂ ಅಫ್ಘಾನಿಸ್ತಾನ ಸರ್ಕಾರ ತಾಲಿಬಾನಿಗಳ ಮುಂದೆ ಮಂಡಿಯೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಮೆರಿಕ ಸೇನೆ ವಾಪಸ್
ಒಂದು ಕಾಲದಲ್ಲಿ ನೆಮ್ಮದಿಯಾಗಿದ್ದ ಅಫ್ಘಾನಿಸ್ತಾನದಲ್ಲಿ ಅಶಾಂತಿ ಸೃಷ್ಟಿಸಿ, ಬಳಿಕ ಅದೇ ದೇಶವನ್ನು ಕಾಯುವ ನೆಪ ಹಾಕಿಕೊಂಡು ಬಂದವರು ಹಲವರು. ಅಮೆರಿಕ ಮೇಲೂ ಇಂಥ ಗಂಭೀರ ಆರೋಪ ಇದೆ. ಅಮೆರಿಕ ಅಫ್ಘಾನ್ನಲ್ಲಿ ಶಾಂತಿ ಕಾಪಾಡುತ್ತೇವೆ ಅನ್ನುತ್ತಾ ಹಲವು ದಶಕಗಳ ಕಾಲ ಬಿಡಾರವನ್ನ ಹೂಡಿತ್ತು. ಆದರೆ ಈಗ ಅಫ್ಘಾನಿಸ್ತಾನ ಸಹವಾಸ ಸಾಕಾಗಿ ಹೋಗಿದೆ, ಈ ಕಾರಣಕ್ಕೆ ಅಮೆರಿಕ ಪಡೆಗಳು ಅಫ್ಘಾನಿಸ್ತಾನ ತೊರೆಯುತ್ತಿವೆ. ಮೇ 1 ರಿಂದಲೇ ಅಮೆರಿಕದ ಮಿಲಿಟರಿ ಗಂಟುಮೂಟೆ ಕಟ್ಟುತ್ತಿದೆ. ಈ ಬೆನ್ನಲ್ಲೇ ತಾಲಿಬಾನಿ ಉಗ್ರರು ಮತ್ತಷ್ಟು ಪಾಪ ಕೃತ್ಯದಲ್ಲಿ ತೊಡಗಿದ್ದಾರೆ.
ರಂಜಾನ್ಗೆ ರಜೆ ಘೋಷಿಸಿದ್ದರು
ಇಸ್ಲಾಂ ಧರ್ಮಿಯರ ಪವಿತ್ರ ಹಬ್ಬ ರಂಜಾನ್ ಹಿನ್ನೆಲೆಯಲ್ಲಿ ನಾವು ಹಿಂಸೆ ನಡೆಸುವುದಿಲ್ಲವೆಂದು ತಾಲಿಬಾನ್ ಉಗ್ರರು ರಜೆ ಘೋಷಿಸಿದ್ದರು. ಹಬ್ಬ ಮುಗಿಯುವ ತನಕ ಬಂಡಾಯ ಏಳಬಾರದು ಎಂದು ಆದೇಶವಿತ್ತು. ಈ ನಡುವೆ ಒಂದು ಇಡೀ ಜಿಲ್ಲೆಯ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶಾಲೆ ಬಳಿ ಬಾಂಬ್ ಸ್ಫೋಟಿಸಿ 50ಕ್ಕೂ ಹೆಚ್ಚು ಮಕ್ಕಳು, ವೃದ್ಧರನ್ನು ಕೊಂದು ಹಾಕಿದ್ದರು. ಹಬ್ಬದ ಸಂಭ್ರಮದಲ್ಲಿರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಉಗ್ರರ ಈ ಪಾಪ ಕೃತ್ಯ ಶಾಕ್ ನೀಡಿದ್ದು, ಭಯದಲ್ಲೇ ಬದುಕುವಂತಾಗಿದೆ.
ಅಫ್ಘಾನ್ ಜನರಿಗೆ ನೆಮ್ಮದಿಯೇ ಇಲ್ಲ
ಬ್ರಿಟಿಷರಿಂದ ಅಫ್ಘಾನ್ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.
ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ
ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.
ಟ್ರಂಪ್ ಸಂಧಾನವೂ ವಿಫಲವಾಗಿತ್ತು..!
ತಾಲಿಬಾನಿ ನಾಯಕರ ಜೊತೆ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿಗಳು ಒಳ್ಳೆಯವರು ಎಂದು ಟ್ರಂಪ್ ಹೇಳಿದ್ದರು. ಆದರೆ ಅಫ್ಘಾನ್ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ಈ ದಾಳಿ ನಂತರ ಅಮೆರಿಕ ಹಾಗೂ ತಾಲಿಬಾನ್ ನಡುವಿನ ಮಾತುಕತೆಯೇ ಮುರಿದುಬಿದ್ದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸೇನೆ ಹಿಂಪಡೆಯಲು ಅಮೆರಿಕ ಒಪ್ಪಿಗೆ ಸೂಚಿಸಿತ್ತು.
ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.