ಜಲಪಾತದೊಳಗೆ ಬಿದ್ದು 11 ಆನೆಗಳ ದಾರುಣ ಸಾವು: ಹೃದಯ ಕಲಕುವ ಘಟನೆ
ಬ್ಯಾಂಕಾಕ್, ಅಕ್ಟೋಬರ್ 10: ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ಕೂಡ ಜೀವ ಕಳೆದುಕೊಳ್ಳುವಂತಹ ಘಟನೆಗಳು ಮನುಷ್ಯರಲ್ಲಿ ಮಾತ್ರ ಅಲ್ಲ, ಪ್ರಾಣಿಗಳಲ್ಲಿಯೂ ನಡೆಯುತ್ತದೆ ಎನ್ನುವುದಕ್ಕೆ ಹೃದಯ ಹಿಂಡುವಂತಹ ಘಟನೆಯೊಂದು ಸಾಕ್ಷಿಯಾಗಿದೆ.
ಮರಿಯೊಂದನ್ನು ರಕ್ಷಿಸುವ ಪ್ರಯತ್ನದಲ್ಲಿ ಆಳವಾದ ಜಲಪಾತಕ್ಕೆ ಬಿದ್ದು 11 ಆನೆಗಳು ದಾರುಣವಾಗಿ ಸಾವಿಗೀಡಾದ ಮನಕಲಕುವ ಘಟನೆ ಥಾಯ್ಲೆಂಡ್ನ ಖಾವೊ ಯಾ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ಅಕ್ಟೋಬರ್ 5ರಂದು ಈ ದುರ್ಘಟನೆ ನಡೆದಿದೆ. ಆಗ ಒಟ್ಟು ಆರು ಆನೆಗಳು ಮೃತಪಟ್ಟಿವೆ ಎಂದು ವರದಿಯಾಗಿತ್ತು. ಆದರೆ ಡ್ರೋನ್ ಕ್ಯಾಮೆರಾ ಅಲ್ಲಿ ಇನ್ನೂ ಐದು ಆನೆಗಳ ಕಳೇಬರವನ್ನು ಪತ್ತೆಹಚ್ಚಿವೆ. ಇದರಿಂದ ಈ ದುರ್ಘಟನೆಯಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ 11 ಎಂದು ದಾಖಲಿಸಲಾಗಿದೆ.
ಈ ಜಲಪಾತವು ಕಡಿದಾದ ಕಲ್ಲಿನ ಬೆಟ್ಟದಿಂದ ಕೂಡಿದ್ದು, ಆನೆಗಳು ಇಲ್ಲಿ ಸಾಮಾನ್ಯವಾಗಿ ಅಡ್ಡಾಡುತ್ತವೆ. ಬೆಟ್ಟದ ತುದಿಯಲ್ಲಿ ಹರಿಯುವ ನದಿಯನ್ನು ದಾಟಲು ಪ್ರಯತ್ನಿಸುವ ಆನೆಗಳ ಹಿಂಡು, ಜಲಪಾತದ ಅಂಚಿನಲ್ಲಿ ಹಾದುಹೋಗುತ್ತವೆ. ಅತ್ಯಂತ ಕಡಿದಾಗಿರುವ ಈ ಭಾಗವು ಅಷ್ಟೇ ಅಪಾಯಕಾರಿಯಾಗಿದೆ ಎಂದು ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಮತ್ತು ಗಿಡ ಸಂರಕ್ಷಣೆಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಡಿಕ್ಕಿಯಾಗಿ ಆನೆ ಸಾವು: ಭೀಕರ ಘಟನೆಯ ವೈರಲ್ ವಿಡಿಯೋ
ಸಾಮಾನ್ಯವಾಗಿ ಆನೆಗಳು ತಮ್ಮ ಗುಂಪನ್ನು ಬಿಟ್ಟು ಹೋಗುವುದಿಲ್ಲ. ತಂಡದ ನಾಯಕ ಆನೆ ಸಾಗುವ ದಾರಿಯಲ್ಲಿಯೇ ಉಳಿದ ಆನೆಗಳು ಕೂಡ ಸಾಗುತ್ತವೆ. ಅದರಂತೆಯೇ ಆನೆಗಳು ರಕ್ಷಣೆಗೆ ಮುಂದಾಗಿ ಜಲಪಾತದೊಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.
ಜೀವ ಕಳೆದುಕೊಂಡ 11 ಆನೆಗಳು
ಕಳೆದ ಶನಿವಾರ ಮೂರು ವರ್ಷದ ಆನೆಯ ಮರಿಯೊಂದು ರಾಷ್ಟ್ರೀಯ ಉದ್ಯಾನದ ಹ್ಯಾವ್ ನಾರೋಕ್ ಜಲಪಾತದಲ್ಲಿ ಸುಮಾರು 200 ಮೀಟರ್ ಎತ್ತರದಿಂದ ಕೆಳಕ್ಕೆ ಬಿದ್ದಿತ್ತು. ಗಾಬರಿಗೊಂಡ ಉಳಿದ ಆನೆಗಳು ಅದನ್ನು ರಕ್ಷಿಸಲು ಮುಂದಾದವು. ಈ ವೇಳೆ ನಿಯಂತ್ರಣ ತಪ್ಪಿ ಒಂದರ ಹಿಂದೊಂದು ಆನೆಗಳು ರಕ್ಷಣೆಗೆ ಧಾವಿಸುವ ಧಾವಂತದಲ್ಲಿ ಆಯ ತಪ್ಪಿ ಆಳದ ಜಲಪಾತದೊಳಗೆ ಉರುಳಿವೆ. ಮರಿಗಳು ಸೇರಿದಂತೆ 13 ಆನೆಗಳಿದ್ದ ಗುಂಪಿನಲ್ಲಿ ಈಗ ಒಂದು ಮರಿ ಮತ್ತು ತಾಯಿಯಾನೆ ಮಾತ್ರ ಉಳಿದುಕೊಂಡಿವೆ. ಉಳಿದ ಎಲ್ಲ 11 ಆನೆಗಳೂ ಆಳದ ಕಮರಿಯೊಳಗೆ ಬಿದ್ದು ಜೀವ ಕಳೆದುಕೊಂಡಿವೆ.
ಒಲ್ಲದ ಮನಸ್ಸಿನಿಂದ ಹೊರಟ ಆನೆಗಳು; ಅರಮನೆ ಮುಂದೊಂದು ಭಾವನಾತ್ಮಕ ಕ್ಷಣ
1992ರಲ್ಲಿಯೂ ನಡೆದಿತ್ತು ದುರ್ಘಟನೆ
ಶನಿವಾರ ನಡೆದ ಈ ದುರ್ಘಟನೆ ಖಾವೊ ಯಾ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೆ ಕಳಂಕ ತಂದಿದೆ. ಸುಮಾರು 30 ವರ್ಷದ ಹಿಂದೆ ಉದ್ಯಾನದ ಇದೇ ಜಾಗದಲ್ಲಿ 1992ರಲ್ಲಿ ಎಂಟು ಆನೆಗಳು ಹೀಗೆ ಜಲಪಾತದೊಳಗೆ ಬಿದ್ದು ಮೃತಪಟ್ಟಿದ್ದವು. ಹೀಗಾಗಿ ಈ ಜಲಪಾತಕ್ಕೆ 'ನರಕದ ಜಲಪಾತ' ಎಂದೂ ಕರೆಯಲಾಗುತ್ತದೆ.
ಆನೆಗಳ ಹುಡುಕಾಟಕ್ಕೆ ಡ್ರೋನ್
ಈ ಬೆಟ್ಟವನ್ನು ಏರಿ ಜಲಪಾತದ ಬಳಿ ಸಾಗುವುದು ಮನುಷ್ಯರಿಗೂ ಸುಲಭವಲ್ಲ. ಹೀಗಾಗಿ ಅಧಿಕಾರಿಗಳು ಡ್ರೋನ್ಅನ್ನು ರವಾನಿಸಿದ್ದರು. ಎಷ್ಟು ಆನೆಗಳು ಸತ್ತಿವೆ ಮತ್ತು ಆನೆಗಳು ಬದುಕುಳಿದಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು 15 ಮೀಟರ್ ಎತ್ತರದಲ್ಲಿ ಡ್ರೋನ್ಗಳನ್ನು ಹಾರಿಸಿದ್ದೆವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳ್ಳಂಬೆಳಿಗ್ಗೆ ಕೃಷ್ಣ ಮಠದ ಆನೆ ಸುಭದ್ರೆ ರವಾನೆ; ಕಾರಣಗಳ ಸುತ್ತ!
ಎರಡು ಆನೆಗಳ ರಕ್ಷಣೆಗೆ ಪ್ರಯತ್ನ
ಥಾಯ್ಲೆಂಡ್ನಲ್ಲಿ ಕೇವಲ 3,500-3,700 ಆನೆಗಳು ಉಳಿದಿವೆ. ಹೀಗಾಗಿ ಆನೆಗಳ ಸಂರಕ್ಷಣೆಗೆ ಅಲ್ಲಿ ಭಾರಿ ಕಸರತ್ತು ನಡೆಸಲಾಗುತ್ತಿದೆ. ಈ ನಡುವೆ ಆನೆಗಳ ಸಾಮೂಹಿಕ ಸಾವು ವನ್ಯಜೀವಿ ವಲಯಕ್ಕೆ ಆಘಾತ ಉಂಟುಮಾಡಿದೆ. ಉಳಿದಿರುವ ಎರಡು ಆನೆಗಳು ದಿಕ್ಕೆಟ್ಟು ಅಲೆದಾಡುತ್ತಿದ್ದು, ಅವುಗಳನ್ನು ಅಲ್ಲಿಂದ ಹೊರಗೆ ಕರೆತಂದು ರಕ್ಷಿಸಲು ಪ್ರಯತ್ನಗಳನ್ನು ನಡೆಸಲಾಗಿದೆ. ಕಂಗಾಲಾದ ಆನೆಗಳು ಜಲಪಾತದ ಬಳಿ ಹೋಗಿ ರೋಧಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬೇಲಿ ನಿರ್ಮಾಣಕ್ಕೆ ಚಿಂತನೆ
775 ಚದರ ಮೈಲು ವ್ಯಾಪ್ತಿ ಹೊಂದಿರುವ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 300 ಆನೆಗಳು ಮತ್ತು ಇತರೆ ಪ್ರಾಣಿಗಳಿವೆ. ಈಗ ಅವುಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಸುರಕ್ಷತೆಗಾಗಿ ಹಿಂದೆಯೂ ಬೇಲಿ ಹಾಗೂ ಅಡ್ಡಗೋಡೆಗಳನ್ನು ನಿರ್ಮಿಸಲಾಗಿತ್ತು. ಅವುಗಳು ಶಿಥಿಲಗೊಂಡಿದ್ದರಿಂದ ಈ ಅನಾಹುತಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಹೀಗಾಗಿ ಅಲ್ಲಿ ಮತ್ತೆ ಹೊಸದಾಗಿ ಬೇಲಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ